ಬಜ್ಪೆ: ಕಾಂಗ್ರೆಸ್ ಅಭ್ಯರ್ಥಿ, ಕಾರ್ಯಕರ್ತರ ರೋಡ್ ಶೋ

Update: 2024-04-12 10:10 GMT

ಬಜ್ಪೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೂತ್ ಅಧ್ಯಕ್ಷರ, ಕಾರ್ಯಕರ್ತರ ರೋಡ್ ಶೋ ಹಾಗೂ ಪ್ರಚಾರ ಸಭೆ ಶುಕ್ರವಾರ ಬಜ್ಪೆಯಲ್ಲಿ ನಡೆಯಿತು.

ಬಿರುಬಿಸಿಲನ್ನು ಲೆಕ್ಕಿಸದೇ ಅಭ್ಯರ್ಥಿ, ಮುಖಂಡರು, ಕಾರ್ಯಕರ್ತರು ಹೆಜ್ಜೆ ಹಾಕಿದರು. ರೋಡ್ ಶೋ ನಡುವೆ ಬಜ್ಪೆಯ ಅಂಗಡಿ - ಮಳಿಗೆಗಳಿಗೆ ತೆರಳಿ ಮತ ಯಾಚನೆ ನಡೆಸಿದರು.

ರೋಡ್ ಶೋ ಗಿಂತ ಮೊದಲು ಬಜ್ಪೆ ಚರ್ಚ್ ಹಾಲಿನಲ್ಲಿ 62ನೇ ತೋಕೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಕ್ಷೇತ್ರದ ಬೂತ್ ಅಧ್ಯಕ್ಷರು ಹಾಗೂ ಸಕ್ರೀಯ ಕಾರ್ಯಕರ್ತರ ಸಮಾವೇಶ ನಡೆಯಿತು.

ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಜಿಲ್ಲೆಯ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವಾಗ ಕಾಂಗ್ರೆಸ್ ಗೆಲ್ಲುವುದು ಖಾತ್ರಿಯಾಗಿದೆ. ಜನರು ಬದಲಾವಣೆ ಬಯಸಿದ್ದಾರೆ. ಸಾಮರಸ್ಯದ ಅಭಿವೃದ್ಧಿಯನ್ನು ಎದುರು ನೋಡುತ್ತಿದ್ದಾರೆ. ಜನರ ನಿರೀಕ್ಷೆ ಸುಳ್ಳಾಗದಂತೆ, ಕಾರ್ಯಕರ್ತರ ಶ್ರಮ ವ್ಯರ್ಥವಾಗದಂತೆ ಅಭಿವೃದ್ಧಿ ಪರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಾರಾಯಣಗುರುಗಳ ಪ್ರೇರಣೆ ಎಂಬಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸುಯೋಗ ಒದಗಿ ಬಂದಿದೆ. ಲಾಕ್ ಡೌನ್ ಸಂದರ್ಭ ಆಹಾರ್ ಕಿಟ್ ಪೂರೈಕೆ, ಹಲವರಿಗೆ ಮನೆ ಕಟ್ಟಿ ನೀಡಿರುವ ಮೊದಲಾದ ಕೆಲಸ ಮಾಡಿಕೊಂಡು ಬಂದೆ. ಆದರೆ ರಾಜಕೀಯಕ್ಕೆ ಬರುತ್ತೇನೆ ಎಂಬ ಕಾರಣಕ್ಕೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿಲ್ಲ. ತಾನು ಚಿಕ್ಕಂದಿನಿಂದ ಅನುಭವಿಸಿಕೊಂಡು ಬಂದ ಬಡತನದ ನೋವು ನನ್ನಲ್ಲಿ ಇದ್ದಿದ್ದರಿಂದ ಬಡವರ, ನೊಂದವರ ನೋವಿಗೆ ಸ್ಪಂದಿಸುವ ಗುಣ ಬೆಳೆಯಿತು. ಈಗ ರಾಜಕೀಯಕ್ಕೆ ಬಂದರೂ, ಸಮಾಜ ಸೇವೆ ನಿತ್ಯ ನಿರಂತರ ಕಾಯಕ ಎಂದರು.

ಕೆಪಿಸಿಸಿ ಪ್ರ. ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ನಮ್ಮ ಅಧಿಕೃತ ಅಭ್ಯರ್ಥಿ ಪದ್ಮರಾಜ್. ಆದರೆ ನಾವೆಲ್ಲರೂ ಅಭ್ಯರ್ಥಿಗಳೇ ಎನ್ನುವುದನ್ನು ಮರೆಯದಿರಿ. ಅತ್ಯಂತ ಹೆಚ್ಚಿನ ಲೀಡ್ ನೊಂದಿಗೆ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಮೂಲ್ಕಿ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್, ವಸಂತ್ ಪೆರ್ನಾಡ್, ಬಿ.ಜೆ. ರಹೀಂ, ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.

ಕಟೀಲು, ಬಪ್ಪನಾಡು, ಶಿಬರೂರು ಕ್ಷೇತ್ರಕ್ಕೆ ಭೇಟಿ 

ಶುಕ್ರವಾರ ಬೆಳಿಗ್ಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಪ್ರಚಾರ ಕಾರ್ಯವನ್ನು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಆರಂಭಿಸಿದರು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಗುರುರಾಜ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News