ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ: ಕಂಚಿನಡ್ಕ ಪ್ರಸ್ತಾವಿತ ಟೋಲ್ ವಿರುದ್ಧ ಪ್ರತಿಭಟನೆ

Update: 2024-08-21 20:09 IST
ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ: ಕಂಚಿನಡ್ಕ ಪ್ರಸ್ತಾವಿತ ಟೋಲ್ ವಿರುದ್ಧ ಪ್ರತಿಭಟನೆ
  • whatsapp icon

ಪಡುಬಿದ್ರಿ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ 1ರ ಕಂಚಿನಡ್ಕ ಬಳಿ ಟೋಲ್‍ಕೇಂದ್ರ ನಿರ್ಮಾಣ ಆಗಲೇ ಬಾರದು. ಇದು ಜನರ ಮೇಲೆ ಮತ್ತಷ್ಟು ಹೊರೆಬೀಳಲಿದೆ. ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ನ್ಯಾಯದ ಪರವಾಗಿ ಅಹಿಂಸಾತ್ಮಕವಾಗಿ ಜನರ ಹಕ್ಕಿಗಾಗಿ ಕಾಂಗ್ರೆಸ್ ಪಕ್ಷ ಹೋರಾಟವನ್ನು ನಡೆಸುತ್ತದೆ. ಜನರ ಸಮಸ್ಯೆಗೆ ಕಾಂಗ್ರೆಸ್ ಸದಾ ಸ್ಪಂಧಿಸುತ್ತದೆ. ರಾಜ್ಯ ಸರ್ಕಾರ ಈ ಪ್ರಸ್ತಾವಿತ ಟೋಲ್‍ಕೇಂದ್ರವನ್ನು ರದ್ದುಗೊಳಿ ಸಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಒತ್ತಾಯಿಸಿದರು.

ಕಂಚಿನಡ್ಕದ ಪ್ರಸ್ತಾವಿತ ಟೊಲ್ ಪ್ರದೇಶದಲ್ಲಿ ಬುಧವಾರ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಹಮ್ಮಿಕೊಂಡ ಟೋಲ್ ಸಂಗ್ರಹ ಕೇಂದ್ರದ ರದ್ದಿಗೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ 1ರ ಪ್ರಸ್ತಾವಿತ ಕಂಚಿನಡ್ಕ ಟೋಲ್ ಕೇಂದ್ರ ರದ್ದತಿಗೆ ಆಗ್ರಹಿಸಿ ಇಲ್ಲಿನ ಕಾಂಗ್ರೆಸ್ ನಿಯೋಗ ಗುರುವಾರ ಸಂಜೆ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರನ್ನು ಭೇಟಿ ಮಾಡಿ ಟೋಲ್ ರದ್ದತಿಗೆ ಮನವಿ ಸಲ್ಲಿಸಲಾಗುವುದು. ಬೆಂಗಳೂರು ಭೇಟಿಯ ಬಳಿಕ ಶಾಶ್ವತವಾಗಿ ಈ ರಸ್ತೆಯ ಟೋಲ್ ರದ್ದತಿಯಾಗಲಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ರಸ್ತೆ ನಿರ್ಮಾಣವಾಗಿತ್ತು. ಅದೇ ಸಂದರ್ಭ ಈ ರಸ್ತೆಗೆ ಬೆಳ್ಮಣ್ಣು ಬಳಿ ಟೋಲ್ ಕೇಂದ್ರಕ್ಕೆ ಅದೇಶವಾಗಿತ್ತು. ಅಲ್ಲಿನ ಪ್ರತಿಭಟನೆ ಬಳಿಕ ಟೋಲ್ ಕೇಂದ್ರ ಕಂಚಿನಡ್ಕಕ್ಕೆ ಸ್ಥಳಾಂತರಗೊಂಡಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೇ ಇಲ್ಲ. ಕಾಂಗ್ರೆಸ್ ಪಕ್ಷದ ಮೇಲೆ ತಪ್ಪು ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಇಂದಿನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಕಂಚಿನಡ್ಕ ಟೋಲ್ ವಿಚಾರದಲ್ಲಿ ಬಿಜೆಪಿಯು ಕಾಂಗ್ರೆಸ್ ಪಕ್ಷದ ವಿರುದ್ಧ ಗೂಬೆ ಕೂರಿಸುವ ಕೆಲಸವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿವಾರ್ಯವಾಗಿತ್ತು. ಜನರಿಗೆ ತೊಂದರೆಯಾಗುವುದಕ್ಕೆ ಕಾಂಗ್ರೆಸ್ ಪಕ್ಷದ ವಿರೋಧವಿದೆ. ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಹಕ್ಕೊತ್ತಾಯ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಕಂಚಿನಡ್ಕದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಟೋಲ್‍ಗೇಟ್ ಬಗ್ಗೆ ಈ ಪರಿಸರದ ನಾಗರಿಕರು ತೀವ್ರವಾದ ಆಕ್ಷೇಪ ವ್ಯಕ್ತವಾಗಿದೆ. ಉದ್ದೇಶಿತ ಟೋಲ್ ಕೇಂದ್ರದ ಕೆಲವೇ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ಸಂಗ್ರಹ ಕೇಂದ್ರ ಕಾರ್ಯಾಚರಿಸುತ್ತಿದೆ. ಮತ್ತೊಂದು ಟೋಲ್ ಹೊರೆ ನಾಗರಿಕರ ಮೇಲೆ ಹಾಕಿದಲ್ಲಿ ಮತ್ತಷ್ಟು ಸಂಕಷ್ಟಕ್ಕೊಳಗಾಗಲಿದ್ದಾರೆ.

ಈ ಟೋಲ್ ಕೇಂದ್ರವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪರಿಸರದಲ್ಲಿ ಯಾವುದೇ ಕಾರಣಕ್ಕೂ ನಿರ್ಮಾಣ ಮಾಡಲು ಅವಕಾಶ ಕೊಡದೆ ರದ್ದು ಪಡಿಸುವಂತೆ ಸೂಕ್ತ ಆದೇಶ ನೀಡಿ ಕ್ರಮಕೈಗೊಳ್ಳುವಂತೆ ಹಕ್ಕೊತ್ತಾಯ ಮಂಡಿಸಲಾಯಿತು.

ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಬೆಳಪು, ಶೇಖರ್ ಹೆಜ್ಮಾಡಿ ಪ್ರತಿಭಟಕಾರರನ್ನು ಉದ್ದೇಶಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಾದ್ಯಂತ ಸಾವಿರಕ್ಕೂ ಅಧಿಕ ಪ್ರತಿಭಟನಾರರು ಭಾಗವಹಿಸಿದ್ದರು. ಕಂಚಿನಡ್ಕದಿಂದ ಕೆಲವು ಕಾರ್ಯ ಕರ್ತರು ಮೆರವಣಿಗೆ ಮೂಲಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಟೋಲ್ ವಿರುದ್ಧ ಘೋಷಣೆ ಕೂಗಿ ಟೋಲ್ ಬೇಡವೇ ಬೇಡ ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ನವೀನ್‍ಚಂದ್ರ ಜೆ. ಶೆಟ್ಟಿ, ಹರೀಶ್ ಕಿಣಿ, ಭುಜಂಗ ಶೆಟ್ಟಿ, ಗುಲಾಂ ಮುಹಮ್ಮದ್, ಅಬ್ದುಲ್ ಅಝೀಝ್ ಹೆಜ್ಮಾಡಿ, ಶರ್ಫುದ್ದೀನ್ ಶೇಖ್, ವೈ. ಸುಕುಮಾರ್, ಶಾಂತಲತಾ ಶೆಟ್ಟಿ, ದೀಪಕ್ ಕೋಟ್ಯಾನ್ ಇನ್ನಾ, ರೋಲ್ಫಿ ಡಿಕೋಸ್ತಾ, ಶಿವಾಜಿ ಸುವರ್ಣ, ನವೀನ್ ಎನ್.ಶೆಟ್ಟಿ, ರಮೀಝ್ ಹುಸೈನ್, ಗಣೇಶ್ ಕೋಟ್ಯಾನ್, ದೀಪಕ್ ಎರ್ಮಾಳ್, ಕರುಣಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ಕಾಂಚನ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News