ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನಿಂದ ವಿದ್ಯಾರ್ಥಿ ವೇತನ ವಿತರಣೆ

Update: 2025-02-26 14:31 IST
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನಿಂದ ವಿದ್ಯಾರ್ಥಿ ವೇತನ ವಿತರಣೆ
  • whatsapp icon

ಮಂಗಳೂರು, ಫೆ. 26: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಮಂಗಳೂರು ಶಾಖೆಯಿಂದ ಸಿಎಸ್‌ಆರ್ ಯೋಜನೆಯಡಿ ಜಿಲ್ಲೆಯ ಸರಕಾರಿ ಶಾಲೆಗಳ 462 ಕಾಲೇಜು ವಿದ್ಯಾರ್ಥಿನಿಯರಿಗೆ 37.28 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆಯಿತು.

‘ಶಿಕ್ಷಣ ಸಬಲೀಕರಣ, ಮಹಿಳಾ ಸಬಲೀಕರಣ’ ಎಂಬ ಧ್ಯೇಯ ವಾಕ್ಯದಡಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಸ್ಟೋರ್ ಮುಖ್ಯಸ್ಥ ಶರತ್‌ ಚಂದ್ರನ್, ಸಂಸ್ಥೆಯು ತನ್ನ ಲಾಭಾಂಶದ ಶೇ. 5ರಷ್ಟನ್ನು ಪ್ರತಿವರ್ಷ ಸಿಎಸ್‌ಆರ್ ಯೋಜನೆಯಡಿ ವಿವಿಧ ಕಾರ್ಯಗಳಿಗೆ ಬಳಸುತ್ತಿದೆ. ರಾಜ್ಯದಲ್ಲಿ ಒಟ್ಟು 5501 ವಿದ್ಯಾರ್ಥಿಗಳಿಗೆ 4.74 ಕೋಟಿ ರೂ. ನೀಡಲಾಗಿದೆ. ಸಂಸ್ಥೆಯ ಹಸಿವು ಮುಕ್ತ ಯೋಜನೆಯಡಿ ಮಂಗಳೂರು ನಗರದಲ್ಲಿ ಪ್ರತಿನಿತ್ಯ 500 ಮಂದಿಗೆ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ವೃದ್ಧ ಮಹಿಳೆಯರಿಗೆ ವಿವಿಧ ಕಡೆ ವೃದ್ಧಾಶ್ರಮ, ಶಾಲೆ ಬಿಟ್ಟವರಿಗೆ ಮೈಕ್ರೋ ಲೆಂಡಿಂಗ್ ಸೆಂಟರ್‌ಗಳು 12 ರಾಜ್ಯಗಳಲ್ಲಿ ಸಂಸ್ಥೆಯ ವತಿಯಿಂದ ಆರಂಭಿಸಲಾಗಿದೆ. ದೇಶದಲ್ಲಿ ಸಂಸ್ಥೆಯು ಈವರೆಗೆ ತನ್ನ ಸಿಎಸ್‌ಆರ್ ನಿಧಿಯಡಿ ವಿವಿಧ ಕಾರ್ಯಕ್ರಮಗಳಿಗೆ 282 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದ್ದು, ಕರ್ನಾಟಕದಲ್ಲಿ 40.88 ಕೋಟಿ ರೂ.ಗಳನ್ನು ಸಮಾಜಕ್ಕಾಗಿ ಒದಗಿಸಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪ ಮೇಯರ್ ಭಾನುಮತಿ, ಮನಪಾ ಸದಸ್ಯ ಅಬ್ದುಲ್ ರವೂಫ್, ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ನಿರ್ದೇಶಕ ಕರುಣಾಕರನ್ ಉಪಸ್ಥಿತರಿದ್ದರು.

ಪ್ರೇರಣಾ ಭಾಷಣಕಾರರಾಗಿ ಭಾಗವಹಿಸಿದ್ದ ರಫೀಕ್ ಮಾಸ್ಟರ್‌ರವರು ತಮ್ಮ ಮಾತುಗಳ ಮೂಲಕ ಸೇರಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು. ನಿತಿನ್ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿವೇತನದ ಸದ್ಬಳಕೆಯಾಗಲಿ

ಸಂಸ್ಥೆಗಳು ತಮ್ಮ ಸಿಎಸ್‌ಆರ್ ನಿಧಿಯಡಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು ಸಹಜ. ಆದರೆ ಮಲಬಾರ್ ಚಾರಿಟೆಬಲ್ ಟ್ರಸ್ಟ್‌ನಿಂದ ಸರಕಾರಿ ಕಾಲೇಜುಗಳ ವಿದ್ಯಾರ್ಥಿನಿಯರಿಗಾಗಿ ಇಷ್ಟು ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿನಿಯರು ಕೂಡಾ ತಮ್ಮ ಖಾತೆಯಲ್ಲಿ ಈ ಹಣವನ್ನು ಕ್ರೋಢೀಕರಿಸಿಕೊಂಡು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗಿಸಿಕೊಳ್ಳುವ ಮೂಲಕ ಸದ್ಬಳಕೆ ಮಾಡಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಕಲಿಕೆಯ ವೇಳೆ ಗುರಿ ಇದ್ದರೆ ಭವಿಷ್ಯ ಉತ್ತಮ

‘ನಾನು ನನ್ನ 6ನೆ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ವಿದ್ಯಾರ್ಥಿ ವೇತನದ ಮೂಲಕವೇ ಶಿಕ್ಷಣ ಪಡೆದಿದ್ದೇನೆ. ಸಮಾಜದಲ್ಲಿ ನಾವೊಂದು ಉತ್ತಮ ಪ್ರಜೆಗಳಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ನಮ್ಮ ಭವಿಷ್ಯದ ಬಗ್ಗೆ ಗುರಿಯನ್ನು ಹೊಂದಬೇಕು. ಗುರಿ ಇದ್ದರೆ ಆ ದಿಸೆಯಲ್ಲಿ ಪ್ರಯಾಣ ಮುಂದುವರಿಸಿ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊಬೆಶನರಿ ಜಿಲ್ಲಾಧಿಕಾರಿ (ಐಎಎಸ್ ) ಶ್ರವಣ್ ಕುಮಾರ್ ಸಲಹೆ ನೀಡಿದರು.

Delete Edit

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News