ನ್ಯಾಮತಿ ಎಸ್‌ಬಿಎ ಬ್ಯಾಂಕ್ ದರೋಡೆ ಪ್ರಕರಣ | ತಮಿಳುನಾಡಿನ ಇಬ್ಬರು ಸೇರಿ ಐವರ ಬಂಧನ

Update: 2025-03-27 23:40 IST
ನ್ಯಾಮತಿ ಎಸ್‌ಬಿಎ ಬ್ಯಾಂಕ್ ದರೋಡೆ ಪ್ರಕರಣ | ತಮಿಳುನಾಡಿನ ಇಬ್ಬರು ಸೇರಿ ಐವರ ಬಂಧನ
  • whatsapp icon

ದಾವಣಗೆರೆ : ನ್ಯಾಮತಿಯಲ್ಲಿ ಎಸ್‌ಬಿಎ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ವಿಜಯ್ ಕುಮಾರ್, ಅಜಯ್ ಕುಮಾರ್, ಸ್ಥಳೀಯರಾದ ಅಭಿಷೇಕ್, ಮಂಜುನಾಥ್ ಹಾಗೂ ಚಂದ್ರು ಬಂಧಿತ ದರೋಡೆಕೋರರು. ತಲೆಮರೆಸಿಕೊಂಡಿರುವ ತಮಿಳುನಾಡಿನ ಪರಮಾನಂದ ಎಂಬಾತನಿಗಾಗಿ ಹುಡುಕಾಟ ನಡೆಸಲಾಗಿದೆ. ಸದ್ಯಕ್ಕೆ ಬಂಧಿತರ ಪೈಕಿ ಇಬ್ಬರಿಂದ 220 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಬುಧವಾರ ರಾತ್ರಿಯೇ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಉಳಿದ ಆಭರಣಗಳು ಎಲ್ಲಿ ಎನ್ನುವ ಕುರಿತು ಪತ್ತೆ ಹಚ್ಚಬೇಕಿದೆ. ಘಟನೆಯಲ್ಲಿ ಸಾರ್ವಜನಿಕರು ಅಡಮಾನವಿರಿಸಿದ್ದ ಒಟ್ಟು 22 ಕೆ.ಜಿ. ಬಂಗಾರ ದರೋಡೆಯಾಗಿತ್ತು ಎಂದರು.

ಬೇಕರಿ ಇಟ್ಟುಕೊಂಡಿದ್ದ ದರೋಡೆಕೋರರು: ಮೂಲತ: ತಮಿಳುನಾಡಿನವರಾದ ವಿಜಯ್ ಕುಮಾರ್, ಅಜಯ್ ಕುಮಾರ್ ಮತ್ತು ಪರಮಾನಂದ ನ್ಯಾಮತಿಯಲ್ಲಿಯೇ ಕಳೆದ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಉಳಿದ ಮೂವರ ಪೈಕಿ ಅಭಿಷೇಕ, ಚಂದ್ರು, ಹೊನ್ನಾಳಿಯವರು. ಮಂಜುನಾಥ ನ್ಯಾಮತಿ ನಿವಾಸಿಯಾಗಿದ್ದನು.

ತಾಂತ್ರಿಕ ಸಾಕ್ಷಿಗಳನ್ನು ಆಧರಿಸಿ ದರೋಡೆಕೋರರನ್ನು ಬಂಧಿಸಲಾಗಿದೆ. ಬ್ಯಾಂಕಿನ ಹಿಂದೆ ಕಾಡು ರೀತಿಯಲ್ಲಿ ಮರ ಗಿಡಗಳು ಬೆಳೆದಿರುವುದು ದರೋಡೆಗೆ ಅನುಕೂಲವಾಗಿದೆ. ದರೋಡೆಗಾಗಿ ಸುಮಾರು 4 ಕಿ.ಮೀ. ದೂರ ನಡೆದುಕೊಂಡೇ ಬಂದಿದ್ದ ಆರೋಪಿಗಳು ಬ್ಯಾಂಕಿನ ಮುಖ್ಯದ್ವಾರವನ್ನು ಒಡೆದು ಒಳನುಗ್ಗಿ, ಆಭರಣಗಳನ್ನು ಸಂಗ್ರಹಿಸಿ ಇಡಲಾಗಿದ್ದ ಬೀರುಗಳನ್ನು ಗ್ಯಾಸ್ ಕಟ್ಟರ್ ಬಳಸಿ ಕೋಟ್ಯಂತರ ರೂ. ಮೌಲ್ಯದ 22 ಕೆಜಿ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು ಎಂದು ಎಸ್ಪಿ ತಿಳಿಸಿದರು.

ಸುಳಿವು ಸಿಗಬಾರದು ಎಂದು ಬ್ಯಾಂಕಿನ ತುಂಬಾ ಖಾರದ ಪುಡಿ ಎರಚಿ ಸಾಕ್ಷಿಗಳನ್ನು ನಾಶಪಡಿಸುವ ಯತ್ನ ನಡೆದಿತ್ತು. ಇದೇ ಮೊದಲ ಬಾರಿಗೆ ಈ ದರೋಡೆ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆದರೆ, ಮಾ.15 ರ ಮಧ್ಯರಾತ್ರಿ ಹೊನ್ನಾಳಿ ತಾಲೂಕಿನ ಅರಭಘಟ್ಟ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆ ಗುಂಡು ಹಾರಿಸಿ ಸೆರೆ ಹಿಡಿದಿದ್ದ ಉತ್ತರ ಪ್ರದೇಶದ ದರೋಡೆಕೋರರ ಗುಂಪಿಗೂ, ಇವರಿಗೂ ನಂಟು ಇದೆಯಾ ಎನ್ನುವ ಕುರಿತು ವಿಚಾರಣೆ ಮುಂದುವರಿದಿದೆ ಎಂದು ಉಮಾ ಪ್ರಶಾಂತ್ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News