ಹನಿಟ್ರ್ಯಾಪ್ ನಂತಹ ವಿಚಾರಗಳು ಹೊಸದೇನಲ್ಲ : ಮಾಜಿ ಸಿಎಂ ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ
ಹುಬ್ಬಳ್ಳಿ | ಹನಿಟ್ರ್ಯಾಪ್ ನಂತಹ ವಿಚಾರಗಳು ಹೊಸದೇನಲ್ಲ, ವಿರೋಧ ಪಕ್ಷದವರು ಇಂತಹ ವಿಷಯಗಳನ್ನು ಹುಡುಕುತ್ತಲೇ ಇರುತ್ತಾರೆ. ಅವರ ಪ್ರಚೋದನೆಗೆ ಯಾರೂ ಒಳಗಾಗಬಾರದು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ವಿರೋಧ ಪಕ್ಷದವರ ವರ್ತನೆ ಸರಿಯಲ್ಲ. ಇದು ಸಭ್ಯತೆಯ ಲಕ್ಷಣವಲ್ಲ, ಅವರ ಅಸಭ್ಯತೆ ವರ್ತನೆಯಿಂದಲೇ ಅವರನ್ನು ಅಮಾನತ್ತು ಮಾಡಲಾಗಿದೆ ಎಂದರು.
ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಚರ್ಚೆಯನ್ನ ಹುಟ್ಟು ಹಾಕಿದ್ದೇ ನಮ್ಮ ಪಕ್ಷದವರು. ನಮ್ಮ ಪಕ್ಷದ ಮಂತ್ರಿಗಳು ಇದನ್ನು ಆಂತರಿಕವಾಗಿ ಚರ್ಚೆ ಮಾಡಬೇಕಿತ್ತು. ಆದರೆ ಬಹಿರಂಗವಾಗಿ ಸದನದಲ್ಲಿ ಚರ್ಚೆ ಮಾಡಿದ್ದಾರೆ. ಇದರಿಂದಾಗಿ ಪಕ್ಷಕ್ಕೆ ಮುಜುಗರ ಹಾಗೂ ಅಭದ್ರತೆ ಹೆಚ್ಚಾಗುತ್ತೆ ಎಂದು ಹೇಳಿದರು.
ಪಕ್ಷದಲ್ಲಿ ಪವರ್ ಶೇರಿಂಗ್ ವಿಚಾರವಾಇ ಚರ್ಚೆಗಳಾಗಬಾರದು. ಇಂತಹ ಚರ್ಚೆಗಳಿಂದ ಸರ್ಕಾರಕ್ಕೆ ಅಭದ್ರತೆ ಕಾಡುತ್ತದೆ. ವಿರೋಧ ಪಕ್ಷದವರು ಅದನ್ನೇ ಅಸ್ತ್ರವನ್ನಾಗಿ ಬಳಕೆ ಮಾಡುತ್ತಾರೆ. ವಿರೋಧ ಪಕ್ಷದವರಿಗೆ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳುವುದು ಸರಿಯಲ್ಲ ಎಂದರು.
ಪವರ್ ಶೇರಿಂಗ್ ವಿಚಾರ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತೆ. ಅದನ್ನು ಬಿಟ್ಟು ಪಕ್ಷದಲ್ಲಿ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದು ಸೂಕ್ತವಲ್ಲ ಎಂದು ಸ್ವಪಕ್ಷದವರ ನಡೆ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು.