ಸೆ.10: ದುಬೈಯಲ್ಲಿ ಗಲ್ಫ್‌ನ ಸಾಧಕ ಉದ್ಯಮಿಗಳ ಸಮ್ಮಿಲನ, ಸಾಂಸ್ಕೃತಿಕ ಸಂಭ್ರಮದ ಗಲ್ಫ್ ಕರ್ನಾಟಕೋತ್ಸವ-2023

Update: 2023-08-29 15:17 GMT

ದುಬೈ: ಗಲ್ಫ್ ದೇಶಗಳಲ್ಲಿರುವ ಕರ್ನಾಟಕ ಮೂಲದ ಉದ್ಯಮಿಗಳ ಸಮ್ಮಿಲನವಾಗಲಿರುವ ಪ್ರತಿಷ್ಠಿತ ಗಲ್ಫ್ ಕರ್ನಾಟಕೋತ್ಸವ-2023 ಸಮಾವೇಶ ಸೆ. 10ರಂದು ದುಬೈನ ಗ್ರ್ಯಾಂಡ್ ಹ್ಯಾಟ್ ಹೋಟೆಲ್ ನ ಬನಿಯಾಸ್ ಬಾಲ್ ರೂಮ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಸಮಾರಂಭದಲ್ಲಿ 1,000ಕ್ಕೂ ಹೆಚ್ಚು ಆಮಂತ್ರಿತರು ಭಾಗವಹಿಸುವ ನಿರೀಕ್ಷೆ ಇದ್ದು, ಔದ್ಯೋಗಿಕ ಸಾಧನೆಗಳನ್ನು ಸಂಭ್ರಮಿಸುವ, ಸಾಂಸ್ಕೃತಿಕ ರಸದೌತಣ ಹಾಗು ಕರ್ನಾಟಕದ ಸ್ವಾದಿಷ್ಟ ಭಕ್ಷ್ಯಗಳನ್ನು ಸವಿಯುವ ಸ್ಮರಣೀಯ ವಿಶಿಷ್ಟ ಸಂಜೆ ಅದಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಸಮಾರಂಭದಲ್ಲಿ ಭಾಗವಹಿಸಲಿರುವ ಖ್ಯಾತ ಉದ್ಯಮಿಗಳು ಕ್ರಮವಾಗಿ ತಮ್ಮ ತಮ್ಮ ಉದ್ಯಮಗಳಲ್ಲಿ ಮಾಡಿರುವ ಸಾಧನೆ, ಆವಿಷ್ಕಾರ ಹಾಗೂ ಗಣನೀಯ ಪರಿಣಾಮಗಳಿಗೆ ಗಲ್ಫ್ ಕರ್ನಾಟಕೋತ್ಸವ-2023 ಪ್ರಭಾವಶಾಲಿ ವೇದಿಕೆಯಾಗಲಿದೆ. ಆರ್ಥಿಕ ಯಶಸ್ಸು ಮಾತ್ರವಲ್ಲದೆ, ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಯಾಗಿ ಹಾಗೂ ಉದ್ಯೋಗಾವಕಾಶ ಮತ್ತು ಸುಧಾರಣೆಯಲ್ಲಿ ಈ ಸಾಧಕ ಉದ್ಯಮಿಗಳು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ಸಂಘಟನಾ ಸಮಿತಿಯ ಪತ್ರಿಕಾ ಹೇಳಿಕೆಯಲ್ಲಿ ಹೇಳಲಾಗಿದೆ.

‘ಗಲ್ಫ್ ರತ್ನ ಪ್ರಶಸ್ತಿ’ ಪ್ರದಾನ ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದೆ. ಈ ಸಮಾರಂಭದಲ್ಲಿ ಅಸಾಧಾರಣ ಉದ್ಯಮಿಗಳನ್ನು ಗುರುತಿಸಿ, ಅವರ ಸಾಧನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಸಮಾರಂಭವು ಇತರರಿಗೆ ಸ್ಫೂರ್ತಿಯಾಗುವ ಉದ್ದೇಶವನ್ನಷ್ಟೇ ಅಲ್ಲದೆ, ವಿವಿಧ ಸ್ಥಳಗಳಿಂದ ಗಲ್ಫ್ ಪ್ರಾಂತ್ಯಕ್ಕೆ ಆಗಮಿಸಿರುವವರಲ್ಲಿ ಒಗ್ಗಟ್ಟಿನ ಮನೋಭಾವ ಮೂಡಿಸುವ ಗುರಿಯನ್ನೂ ಹೊಂದಿದೆ.

ಗಲ್ಫ್ ಕರ್ನಾಟಕೋತ್ಸವವು ಕೇವಲ ಉದ್ಯಮಿಗಳನ್ನು ಗುರುತಿಸಲಷ್ಟೇ ಸೀಮಿತವಾಗದೆ, ಸಾಂಸ್ಕೃತಿಕ ವಿನಿಮಯಕ್ಕೂ ಒತ್ತು ನೀಡಲಿದೆ. ಆಹ್ವಾನಿತರು ಕರ್ನಾಟಕದ ಸಂಪದ್ಭರಿತ ಪರಂಪರೆಗೆ ಸಾಕ್ಷಿಯಾಗಲಿದ್ದು ಸಾಂಪ್ರದಾಯಿಕ ಸಂಗೀತ ಹಾಗೂ ಸ್ವಾದಿಷ್ಟ ಭಕ್ಷ್ಯಗಳನ್ನು ಆಸ್ವಾದಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾರೆಯರು ತುಂಬಿರುವ ಸಂಗೀತ ಗೋಷ್ಠಿಯನ್ನು ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಖ್ಯಾತಿಯ ಸಂತೋಷ್ ವೆಂಕಿ ನಡೆಸಿಕೊಡಲಿದ್ದು, ಇದರೊಂದಿಗೆ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ಕೂಡಾ ಇರಲಿದೆ.

ಸಂಜೆಯ ಸಮಾರಂಭದಲ್ಲಿ ಬಿಗ್ ಬಾಸ್ ಸೀಸನ್ 1ನ ಒಟಿಟಿ ಆವೃತ್ತಿಯ ವಿಜೇತ ಸ್ಪರ್ಧಿ ರೂಪೇಶ್ ಶೆಟ್ಟಿ ಮತ್ತಿತರರು ಇರುವರು. ಪ್ರಕಾಶ್ ತುಮಿನಾಡ್ ಹಾಗೂ ದೀಪಕ್ ರೈ ಪನಾಜೆಯವರ ಹಾಸ್ಯ ಕಾರ್ಯಕ್ರಮ ಹಾಗೂ ಗುರುಕಿರಣ್ ಹಾಗೂ ಚೈತ್ರಾ ಎಚ್.ಜಿ ಅವರಿಂದ ಸಂಗೀತ ಪ್ರಸ್ತುತಿ ಇರಲಿದೆ. ಇದರೊಂದಿಗೆ ಪಿಲಿ ವೇಷ ಜಾನಪದ ನೃತ್ಯ ಕಾರ್ಯಕ್ರಮವೂ ಇರಲಿದೆ. ‘ರೆಟ್ರೊ ಟು ಮೆಟ್ರೊ’ ಎಂಬ ವಿಷಯದ ಮೇಲೆ ಸಾರಾ ಪಿಂಟೋ ಅವರಿಂದ ನೇರ ಗಾಯನ ಹಾಗೂ ನೃತ್ಯ ಪ್ರದರ್ಶನವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಗಲ್ಫ್ ಕರ್ನಾಟಕೋತ್ಸವ ಸಮಾರಂಭದಲ್ಲಿ ದುಬೈ ದೊರೆಗಳ ಕುಟುಂಬದ ಸದಸ್ಯರು ಹಾಗೂ ಎಂಬಿಎಂ ಸಮೂಹದ ಅಧ್ಯಕ್ಷರಾದ ಶೇಖ್ ಮುಹಮ್ಮದ್ ಮಖ್ತೂಮ್ ಜುಮಾ ಅಲ್ ಮಖ್ತೂಮ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ.

ಉದ್ಯಮ ಬೆಳವಣಿಗೆ, ದಾನ ಕಾರ್ಯ ಹಾಗೂ ಸಮುದಾಯ ಉನ್ನತೀಕರಣಕ್ಕೆ ಖ್ಯಾತರಾಗಿರುವ ಶೇಖ್ ಮುಹಮ್ಮದ್ ಮಖ್ತೂಮ್ ಜುಮಾ ಅಲ್ ಮಖ್ತೂಮ್ ಅವರ ಉಪಸ್ಥಿತಿಯಿಂದ ಗಲ್ಫ್ ಹಾಗೂ ಕರ್ನಾಟಕದ ನಡುವಿನ ಗಟ್ಟಿ ಬಾಂಧವ್ಯವನ್ನು ಮತ್ತಷ್ಟು ಸದೃಢವಾಗಲಿದೆ ಎಂದು ಪ್ರಕಟಣೆ ಹೇಳಿದೆ.

ಸಂಭ್ರಮಾಚರಣೆ ಮಾತ್ರವಲ್ಲದೆ, ಗಲ್ಫ್ ಕರ್ನಾಟಕೋತ್ಸವವು ಜಾಗತಿಕ ಪಾಲುದಾರಿಕೆ ಹಾಗೂ ಜಂಟಿ ಸಹಭಾಗಿತ್ವದ ಗುರಿಯನ್ನೂ ಹೊಂದಿದೆ. ಉದ್ಯಮಿಗಳು, ಚಿಂತಕ ನಾಯಕರು ಹಾಗೂ ವಿಭಿನ್ನ ಹಿನ್ನೆಲೆಯ ಪ್ರಭಾವಶಾಲಿಗಳನ್ನು ಪರಸ್ಪರ ಒಟ್ಟಾಗಿಸುವ ಮೂಲಕ ಜಾಗತಿಕ ಗಡಿಗಳನ್ನು ಮಾರ್ಪಡಿಸಿ, ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವುದು, ಆವಿಷ್ಕಾರ ಹಾಗೂ ಗಲ್ಫ್ ಪ್ರಾಂತ್ಯ, ಕರ್ನಾಟಕಗಳೆರಡೂ ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಂಪರ್ಕವನ್ನು ಅಭಿವೃದ್ಧಿಪಡಿಸುವ ಆಶಯವನ್ನೂ ಈ ಸಮಾರಂಭ ಹೊಂದಿದೆ.

ಸೆಪ್ಟೆಂಬರ್ 10, 2023ರಂದು ನಿಗದಿಯಾಗಿರುವ ಗಲ್ಫ್ ಕರ್ನಾಟಕೋತ್ಸವ-2023 ಸಮಾರಂಭವು ಉತ್ಕೃಷ್ಟತೆ, ಸಂಸ್ಕೃತಿ ಹಾಗೂ ಮನರಂಜನೆಯ ಸಮ್ಮಿಲನವಾಗುವ ಭರವಸೆ ಇದ್ದು, ಗಲ್ಫ್ ಪ್ರಾಂತ್ಯದಲ್ಲಿನ ಸಾಧಕ ಉದ್ಯಮಿಗಳೊಂದಿಗೆ ಸಂಭ್ರಮಾಚರಣೆ ನಡೆಸುವತ್ತ ಎಲ್ಲರ ಚಿತ್ತವೂ ಕೇಂದ್ರೀಕೃತಗೊಂಡಿದೆ. ಈ ಸಮಾರಂಭದ ಕುರಿತು ನಿರೀಕ್ಷೆಗಳು ಗರಿಗೆದರಿದ್ದು, ಸಮಾರಂಭದ ದಿನ ಹತ್ತಿರವಾಗುತ್ತಿರುವಂತೆಯೇ, ಆಹ್ವಾನಿತರು ಉದ್ಯಮ ಜಗತ್ತು ಹಾಗೂ ಸಂಸ್ಕೃತಿಯ ಶ‍್ರೀಮಂತಿಕೆಯನ್ನು ಅವುಗಳೆಲ್ಲ ಭವ್ಯತೆಯೊಂದಿಗೆ ಅನುಭವಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News