ಹಾವೇರಿಯಲ್ಲಿ ಭಾರೀ ಮಳೆ: ಕಾಲುವೆ ನೀರಲ್ಲಿ ಕೊಚ್ಚಿ ಹೋಗಿ ಬಾಲಕ ಮೃತ್ಯು

Update: 2024-10-17 08:18 GMT

ಹಾವೇರಿ: ಭಾರೀ ಮಳೆಯ ವೇಳೆ ಬಾಲಕನೋರ್ವ ಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ನಗರದ ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಶಿವಾಜಿ ನಗರದ 3ನೇಕ್ರಾಸ್ ನಲ್ಲಿ ಸಂಭವಿಸಿದೆ.

ಮೃತನನ್ನು ನಿವೇದನ್ ಗುಡಗೇರಿ(10) ಎಂದು ಗುರುತಿಸಲಾಗಿದೆ.

ನಗರದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ನಸುಕಿನ ವರೆಗೆ ಭಾರೀ ಮಳೆಯಾಗಿದೆ. ಮಳೆಯಬ್ಬರಕ್ಕೆ ಕಾಲುವೆ ಹಾಗೂ ರಸ್ತೆಯಲ್ಲಿ ನೀರು ಹರಿದಿದೆ. ರಸ್ತೆ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ.

ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಹಾಗೂ ನಗರಸಭೆ ಸಿಬ್ಬಂದಿ ಬಾಲಕನನ್ನು ಪತ್ತೆ ಹಚ್ಚಿದ್ದರು. ತಕ್ಷಣ ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ. ಜಿಲ್ಲಾಸ್ಪತ್ರೆ ಎದುರು ಜನರು ಜಮಾವಣೆಗೊಂಡಿದ್ದಾರೆ.

ಪ್ರತಿಭಟನೆ: ಕಾಲುವೆ ಒತ್ತುವರಿಯಾಗಿದೆ ಮತ್ತು ಸರಿಯಾಗಿ ದುರಸ್ತಿ ಮಾಡದಿರುವುದೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿ ಸ್ಥಳೀಯರು ಶಿವಾಜಿ ನಗರದ 1 ನೇ ಕ್ರಾಸ್ ನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News