ಕಲಬುರಗಿಯಲ್ಲಿ 12ನೇ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶ : ಡಾ.‌ಶಾಂತಾ ಅಸ್ಟಿಗೆ

Update: 2024-10-24 17:05 GMT

ಕಲಬುರಗಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಶನಿವಾರದಿಂದ ಎರಡು ದಿನಗಳ ಕಾಲ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶ ನಡೆಯಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಹಿರಿಯ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣೆ ಹಾಗೂ ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಡಾ.‌ಶಾಂತಾ ಅಸ್ಟಿಗೆ ತಿಳಿಸಿದರು.

ನಗರದ ಜೈಭವಾನಿ ಭವನದಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸಾಹಿತಿ ಡಾ.ಮೀನಾಕ್ಷಿ ಬಾಳಿ ಸರ್ವಾಧ್ಯಕ್ಷತೆಯಲ್ಲಿ ಅ.26, 27ರಂದು ಸಮಾವೇಶ ಜರುಗಲಿದ್ದು, ಸಮಾವೇಶಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದ 30 ಜಿಲ್ಲೆಗಳಿಂದ ಸುಮಾರು 600 ಪ್ರತಿನಿಧಿಗಳು ಹಾಗೂ ಸ್ಥಳೀಯವಾಗಿ 400 ಜನ ಸೇರಿದಂತೆ 1000ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಜಯನಗರದ ಅನುಭವ ಮಂಟಪದಿಂದ ಜೈಭವಾನಿ ಕನ್ವನ್ಷನ್ ಹಾಲ್ ವರೆಗೆ ವಚನಗಳ ಕಟ್ಟು ಹಾಗೂ ಅಕ್ಕಮಹಾದೇವಿ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ವಚನ ಕಲಾಕೃತಿಗಳ ಪ್ರದರ್ಶನ ಮತ್ತು ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ನೆರವೇರಿಸಲಿದ್ದಾರೆ ಎಂದರು.

ಶನಿವಾರ ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಶರಣಬಸವೇಶ್ವರ ಸಂಸ್ಥಾನದ ಚೇರ್ ಪರ್ಸನ್ ಡಾ.ದಾಕ್ಷಾಯಿಣಿ ಶರಣಬಸಪ್ಪ ಉದ್ಘಾಟಿಸಲಿದ್ದಾರೆ. ಮೈಸೂರಿನ ಸುತ್ತೂರು ಶಿವರಾತ್ರಿ ದೇಶಿಕಕೇಂದ್ರ ಮಹಾಸ್ವಾಮಿಗಳು, ಗದಗನ ಡಾ.ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮಿಗಳು, ಸುಲಫಲಮಠ ಹಾಗೂ ಶ್ರೀಶೈಲಂ ಸಾರಂಗಮಠದ ಡಾ.ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಲ್ಯಾಣ ಕದಳಿ, ಅಕ್ಕ ಕೇಳವ್ವ ಎಂಬ ಎರಡು ಸ್ಮರಣ ಸಂಚಿಕೆ, ಶರಣ ಪ್ರಸಾದ, 63 ಪುರಾತನರ ಚಿತ್ರಪಟಗಳು, ವಚನ ನಿದರ್ಶನ, ಜಡದಲ್ಲಿ ಜಂಗಮ ಸೇರಿ ಒಟ್ಟು 6 ಕೃತಿಗಳು ಬಿಡುಗಡೆಯಾಗಲಿವೆ ಎಂದರು.

ಜಿಲ್ಲಾಧ್ಯಕ್ಷೆ ಡಾ.‌ಮಲ್ಲಿಕಾರ್ಜುನ ವಡ್ಡನಕೇರಿ, ಪ್ರಧಾನ ಕಾರ್ಯದರ್ಶಿ ಶಾಂತಲಿಂಗ ಪಾಟೀಲ ಕೋಳಕೂರ, ಜಯಶ್ರೀ ಚಟ್ನಳ್ಳಿ, ಬಸವರಾಜ ಮೊರಬದ ಇತರರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News