ಸಾಂಸ್ಕೃತಿಕ ಪರಂಪರೆಗೆ ಕಲೆ, ಸಾಹಿತ್ಯ ಅನನ್ಯ: ಡಾ ಅಜಯಸಿಂಗ್

Update: 2024-10-24 02:20 GMT

ಕಲಬುರಗಿ: ನಮ್ಮ ಬದುಕನ್ನು ಕಟ್ಟಿಕೊಡುವ ಮತ್ತು ಸಾಂಸ್ಕೃತಿಕ ಪರಂಪರೆಗೆ ಕಲೆ, ಸಾಹಿತ್ಯಗಳು ಅನನ್ಯವಾಗಿವೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಅಭಿಪ್ರಾಯ ಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಬಾಪೂಗೌಡ ದರ್ಶನಾಪೂರ ರಂಗಮಂದಿರದ ಎಡ ಭಾಗದಲ್ಲಿ ಸ್ಥಾಪಿಸಲ್ಪಟ್ಟ ಕಲಾ ಸೌಧದಲ್ಲಿ ದಶವರ್ಣ ಕಲಾವಿದರ ಚಿತ್ರಕಲಾ ಪ್ರದರ್ಶನದಲ್ಲಿ ಬುಧವಾರದಂದು ಭಾಗವಹಿಸಿ ಚಿತ್ರಕಲಾವಿದರನ್ನು ಗೌರವಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕವಿ, ಕಲಾವಿದರಿಗೆ ಸದಾ ಸಹಾಯ ಸಹಕಾರ ಮುಖ್ಯವಾಗಿದೆ. ಸಾಹಿತ್ಯ ಮತ್ತು ಕಲೆ ಎರಡು ಪೂರಕವಾಗಿದ್ದು ಸಂಸ್ಕೃತಿ ಉಳಿಸಿ ಬೆಳೆಸಬಹುದಾಗಿದೆ ಎಂದರು. ಜಿಲ್ಲೆಯಲ್ಲಿ ಚಿತ್ರ ಕಲಾವಿದರ ಸಂಖ್ಯೆ ಹೆಚ್ಚಿದೆ. ಅವರಿಗೆ ಫ್ರೋತ್ಸಾಹ ನೀಡುವಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೀಡಲಾಗುವುದು. ಇಲ್ಲಿ ಶಾಶ್ವತ ಕಲಾ ಚಟುವಟಿಕೆಗಳು ನಡೆಯಲು ಮಂಡಳಿಯಿಂದ ಸಹಾಯ ಸಹಕಾರ ನೀಡಲಾಗುವುದು. ಈ ಕುರಿತು ಕ್ರಿಯಾ ಯೋಜನೆ ರೂಪಿಸಿ ಮಂಡಳಿಗೆ ಸಲ್ಲಿಸಿದರೆ ಚಿತ್ರಕಲಾವಿದರಿಗೆ ಅನುಕೂಲ ಮಾಡಿ ಕೊಡಲಾಗುತ್ತದೆ ಎ೦ದು ಅವರು ಭರವಸೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ದೂರದೃಷ್ಟಿಯನ್ನಿಟ್ಟುಕೊಂಡು ಎಲ್ಲಾ ಪ್ರಕಾರದ ಕಲಾವಿದರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಆ ಮೂಲಕ ಕಲಬುರಗಿ ನೆಲದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದ್ದಾರೆ ಎಂದು ಮನದುಂಬಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಅಧ್ಯಕ್ಷತೆ ವಹಿಸಿ, ಜಿಲ್ಲೆಯ ಚಿತ್ರಕಲಾವಿದರಿಗೆ ತಮ್ಮ ಚಿತ್ರ ಪ್ರದರ್ಶನಕ್ಕಾಗಿ ಅವಕಾಶ ಕಲ್ಪಿಸಿ ಕೊಡಲಾಗಿದೆ. ಈ ದಿಸೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸಹಾಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಚಿತ್ರಕಲೆ ಕೇವಲ ಕಲಾವಿದನ ಕಲೆಯಷ್ಟೇ ಆಗಿರದೆ ನಮ್ಮ ಸುತ್ತಮುತ್ತಲಿನ ಸಂಸ್ಕೃತಿಗಳ ಬಿಂಬಕ ರೂಪಕವಾಗಿದೆ. ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಚಿತ್ರ ಕಲಾವಿದರು ಮಾಡುತ್ತಿರುತ್ತಾರೆ. ಕಲಾವಿದರಿಗೆ ಗೌರವ ಮತ್ತು ಪ್ರೋತ್ಸಾಹ ಕೊಡುವ ಸದಾ ಕಾಲ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಡಾ.ಅಜಯಸಿಂಗ ಚಿತ್ರಕಲಾ ಪ್ರದರ್ಶನ ವೀಕ್ಷಿಸಿದರು. ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಕಲಾ ಸೌಧ ದ ಸಂಚಾಲಕ ಡಾ. ರೆಹಮಾನ್ ಪಟೇಲ್, ಧರ್ಮರಾಜ ಜವಳಿ, ರಮೇಶ ಡಿ ಬಡಿಗೇರ, ಸಂತೋಷ ಕುಡ್ಡಳ್ಳಿ, ಎಸ್ ಕೆ ಬಿರಾದಾರ, ಗಣೇಶ ಚಿನ್ನಾಕಾರ, ಎಂ ಎನ್ ಸುಗಂಧಿ, ಶಿವಶರಣ ಬಡದಾಳ ಇತರರಿದ್ದರು.

ಹಿರಿಯ ಚಿತ್ರ ಕಲಾವಿದರಾದ ಬಸವರಾಜ ಉಪ್ಪಿನ್, ಮಹ್ಮದ್ ಅಯಾಜೋದ್ದೀನ್ ಪಟೇಲ್, ಶಿವಲೀಲಾ ಉಪ್ಪಿನ್, ರಾಘವೇಂದ್ರ ಭುರ್ಲಿ, ಡಾ. ಸುಬ್ಬಯ್ಯಾ ನೀಲಾ, ಡಾ. ಶಾಹೇದ್ ಪಾಷಾ, ರಾಜಶೇಖರ ಶ್ಯಾಮಣ್ಣ, ರಾಜೇಶ ಸಾಂಗ್ವಿಕರ್ ಅವರನ್ನು ವಿಶೇಷವಾಗಿ ಸತ್ಕರಿಸಿ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News