ಕಲಬುರಗಿ | ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ : ಎಸ್ಪಿ ಶ್ರೀನಿವಾಸಲು ಎಚ್ಚರಿಕೆ

Update: 2024-10-25 11:49 GMT

ಕಲಬುರಗಿ : ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರು ತಮ್ಮ ನಡತೆಯಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದರು.

ಚಿತ್ತಾಪೂರ ತಾಲೂಕಿನ ಮಾಡಬೂಳ ಪೊಲೀಸ್ ಠಾಣೆ ಆವರಣದಲ್ಲಿ ಮಾಡಬೂಳ, ಚಿತ್ತಾಪುರ, ವಾಡಿ, ಶಹಾಬಾದ್, ಕಾಳಗಿ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಈ ಹಿಂದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ಪರೇಡ್ ನಡೆಸಿದ ಅವರು, ಈ ಹಿಂದೆ ಅಪರಾಧ ಚಟುವಟಿಕೆ ನಡೆಸಿ ಆರೋಪಿಗಳಾದವರು, ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಅಪರಾಧ ಚಟುವಟಿಕೆಗಳಿಂದ ಸಮಾಜದಲ್ಲಿ ನಿಮ್ಮ ವೈಯಕ್ತಿಕ ಗೌರವ ಹಾಳಾಗುವುದರ ಜೊತೆಗೆ ನಿಮ್ಮ ಕುಟುಂಬದ ಗೌರವ ಹಾಳಾಗುತ್ತದೆ. ನಿಮ್ಮ ಕುಟುಂಬದವರು ಸಮಾಜದಲ್ಲಿ ಮುಜುಗರ, ಅವಮಾನ ಅನುಭವಿಸಬೇಕಾಗುತ್ತದೆ. ಸಮಾಜದಲ್ಲಿ ಗೌರವದ ಜೀವನ ನಡೆಸಬೇಕಾದರೆ, ಅಪರಾಧ ಚಟುವಟಿಕೆಗಳಿಂದ ದೂರ ಇರಬೇಕು ಎಂದರು.

ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವುದು, ಸಾಕ್ಷಿಗಳಿಗೆ ಹೆದರಿಸುವುದು ಮಾಡಬಾರದು. ಪ್ರಕರಣದ ಕುರಿತು ದ್ವೇಷ ಇಟ್ಟುಕೊಂಡು ಪರಸ್ಪರ ಜಗಳ ಮಾಡುವುದಾಗಲಿ ಮಾಡಬಾರದು. ಕುಟುಂಬದ ನೆಮ್ಮದಿ, ಸಂತೋಷದ ಬದುಕಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ 200ಕ್ಕೂ ಅಧಿಕ ಸಂಖ್ಯೆಯಲ್ಲಿ ಹಾಜರಿದ್ದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರ ಪ್ರಸ್ತುತ ಜೀವನ ಕ್ರಮ, ಮಾಡುತ್ತಿರುವ ಉದ್ಯೋಗ, ಅಪರಾಧ ಚಟುವಟಿಕೆಯಲ್ಲಿ ಮತ್ತೆ ಭಾಗಿಯಾದವರ, ಭಾಗಿಯಾಗದೆ ಇರುವವರ ಚಲನವಲನದ ಮೇಲೆ ಮೇಲೆ ನಿಗಾವಹಿಸಬೇಕು. ಅವರ ಜೀವನ ಕ್ರಮದಲ್ಲಿ ಸುಧಾರಣೆ ಮಾಡಿಕೊಂಡಿರುವವರ ಕುರಿತು ಮಾಹಿತಿ ನೀಡುವಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಸೂಚಿಸಿದರು.

ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಕಾಳಗಿ ಸಿಪಿಐ ಜಗದೇವಪ್ಪಾ ಪಾಳಾ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಶಹಾಬಾದ್ ಪಿಎಸ್‌ಐ ನಟರಾಜ್ ಲಾಡೆ, ಮಾಡಬೂಳ ಪಿಎಸ್‌ಐ ಚೇತನ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News