ಕಲಬುರಗಿ | ಸದನದಲ್ಲಿ 18 ಜನ ಶಾಸಕರ ಅಮಾನತು ಆದೇಶ ರದ್ದತಿಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ

ಕಲಬುರಗಿ: ರಾಜ್ಯದಲ್ಲಿ ಮುಸಲ್ಮಾನರಿಗೆ ಸರಕಾರಿ ಕಾಮಗಾರಿಯಲ್ಲಿ ಶೇ.4 ರಷ್ಟು ಮೀಸಲಾತಿ ನೀಡಿರುವುದನ್ನು ಮತ್ತು ಸದನದಿಂದ 18 ಜನ ಬಿಜೆಪಿ ಶಾಸಕರನ್ನು ಅಮಾನತ್ತು ಮಾಡಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿ, ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು ನಗರದ ಎಸ್ ವಿ ಪಿ ವೃತ್ತದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಿ, ಟೈಯರ್'ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಇಲ್ಲಿನ ಎಸ್.ವಿ.ಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಿದರು.
ರಾಜ್ಯ ಸರ್ಕಾರ ಮುಸಲ್ಮಾನರಿಗೆ ಬಜೆಟ್ನಲ್ಲಿ ಶೇ.4ರಷ್ಟು ಧರ್ಮಾಧರಿತ ಮೀಸಲಾತಿ ನೀಡಿರುವುದು ಸಂವಿಧಾನ ಬಾಹಿರವಾಗಿದ್ದು, ಇದರಿಂದ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಹಿಂದುಳಿದ ಸಣ್ಣ ಸಮುದಾಯಗಳನ್ನು ಗುರುತಿಸಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುವುದರ ಮೂಲಕ ಅವರನ್ನು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು 2,000 ಕೋಟಿ ರೂ.ಅನುದಾನ ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದವರಿಗೆ ಬಜೆಟ್ನಲ್ಲಿ ಒಂದು ಪೈಸೆಯೂ ಕೂಡ ಘೋಷಣೆ ಮಾಡದೆ ಮುಸಲ್ಮಾನರಿಗೆ ಶೇ.4 ರಷ್ಟು ಮೀಸಲಾತಿ ನೀಡಿರುವುದು ಸಂವಿಧಾನ ಬಾಹಿರವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಾಧ್ಯವಾದರೆ ಸಂವಿಧಾನ ಬದಲಾಯಿಸಿ ಮುಸಲ್ಮಾನರಿಗೆ ಮೀಸಲಾತಿ ನೀಡುತ್ತೇವೆ ಎಂದು ಅತಿರೇಕದ ಮಾತುಗಳನ್ನು ಆಡಿರುವುದು ಖಂಡನೀಯವಾಗಿದೆ. ಶೇ.4 ರಷ್ಟು ಮೀಸಲಾತಿ ರದ್ದುಪಡಿಸಬೇಕು ಮತ್ತು ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿಯ 18 ಜನ ಸದಸ್ಯರನ್ನು ಸಭಾಪತಿಗಳು ಅಮಾನತ್ತುಗೊಳಿಸಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ನಗರ ಅಧ್ಯಕ್ಷ ಚಂದು ಪಾಟೀಲ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಮುಖಂಡರಾದ ಅಮರನಾಥ ಪಾಟೀಲ, ನಿತೀನ್ ಗುತ್ತೇದಾರ, ಮಂಜುನಾಥ, ಅವ್ವಣ್ಣ ಮ್ಯಾಕೇರಿ, ಅಪ್ಪು ಕಣಕಿ, ರಾಜು ಗೌಡ ನಾಗನಳ್ಳಿ, ಗಿರಿರಾಜ ಯಳಮೇಲಿ, ಸಂಜಯ ಯಳಸಂಗಿಕರ, ಚನ್ನು ದಿಗ್ಗಾವಿ, ನಾಗರಾಜ, ವೀರಣ್ಣ ಬೇಲೂರೆ, ಮಹಾದೇವ ಬೆಳಮಗಿ, ಶಿವಕುಮಾರ, ಜ್ಯೋತಿ ಪಾಟೀಲ, ರಾಜೇಶ್ವರಿ ಮೇತ್ರೆ, ಸವಿತಾ ಪಾಟೀಲ, ಪ್ರಭಾವತಿ ದೊಡ್ಡಮನಿ, ಜಯಶ್ರೀ, ಸಂಗಮ್ಮ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಪಕ್ಷದ ಮುಖಂಡರು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಕೆಲವರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ. ಕೈ ಯಲ್ಲಿ ಸಂವಿಧಾನ ಬುಕ್ ಹಿಡಿದುಕೊಂಡು ಹೋಗುತ್ತಾರೆ ವಿನಃ ಸಂವಿಧಾನಕ್ಕೆ ಬೆಲೆ ಕೊಡುವುದು ಗೊತ್ತಿಲ್ಲ, ಸದನದಲ್ಲಿ 18 ಬಿಜೆಪಿ ಶಾಸಕರನ್ನು 6 ತಿಂಗಳು ಅಮಾನತು ಖಂಡನೀಯವಾಗಿದೆ.
- ಶಶೀಲ ಜಿ.ನಮೋಶಿ (ವಿಧಾನ ಪರಿಷತ್ ಸದಸ್ಯ)