ಕಲಬುರಗಿ | ಆಟೋ ಚಾಲಕರಿಗೆ ಕ್ಷುಲ್ಲಕ ಕಾರಣಕ್ಕೆ ಪೊಲೀಸರಿಂದ ದಂಡ ಆರೋಪ ; ಕಲ್ಯಾಣ ನಾಡು ವಿಕಾಸ ವೇದಿಕೆಯಿಂದ ಪ್ರತಿಭಟನೆ

ಕಲಬುರಗಿ : ನಗರದಲ್ಲಿ ಆಟೋ ಚಾಲಕರಿಗೆ ಕ್ಷುಲ್ಲಕ ಕಾರಣಕ್ಕೆ ಸಂಚಾರಿ ಪೊಲೀಸರು ದಂಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ನೇತೃತ್ವದಲ್ಲಿ ಆಟೋ ಚಾಲಕರು ನಗರದ ಎಸ್.ವಿ.ಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬಹೃತ್ ಪ್ರತಿಭಟನೆ ನಡೆಸಿ ಸಂಚಾರಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಪರ್ಮಿಟ್ ವಾಹನಗಳು ಕಲಬುರಗಿ ನಗರದಲ್ಲಿ ಓಡಾಡಿಸುತ್ತಿರುವರ ವಿರುದ್ಧ ಕಠಿಣ ಕ್ರಮಕೈಗೊಂಡು ವಾಹನಗಳನ್ನು ತಡೆಗಟ್ಟಬೇಕು. ಇನ್ಸೂರೇನ್ಸ್ ಮತ್ತು ತಾಲೂಕು ಪರ್ಮೀಟ್ ರದ್ದುಗೊಳಿಸಿ ನಗರ ವ್ಯಾಪ್ತಿಯ ಆಟೋ ಚಾಲಕರಿಗೆ ಅನುವು ಮಾಡಿಕೊಡಬೇಕು ಹಾಗೂ ವಿಭಾಗೀಯ ಕೇಂದ್ರ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರಿಗಾಗಿ ಇರುವ ಆಟೋ ನಿಲ್ದಾಣ ಪುನಃ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಪತ್ರ ರವಾನಿಸಲಾಯಿತು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರಿಗಾಗಿ ಇದ್ದ ಆಟೋ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಅದರಲ್ಲೂ ವೃದ್ಧರಿಗೆ, ವಿಕಲಚೇತನರಿಗೆ ಮತ್ತು ಆಟೋ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ವಿಭಾಗೀಯ ಕೇಂದ್ರ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರಿಗಾಗಿ ಇರುವ ಆಟೋ ನಿಲ್ದಾಣ ಪುನಃ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಸಂಚಾರಿ ಪೊಲೀಸರು ಸಿಕ್ಕಾಪಟ್ಟೆ ದಂಡ ವಿಧಿಸಿ ಆಟೋ ಚಾಲಕರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಆಟೋ ಚಾಲಕರು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಈಗ ಕಲಬುರಗಿ ನಗರದಲ್ಲಿ ಆಟೋ ಚಾಲಕರಿಗೆ ಹೆಚ್ಚಿಗೆ ದಂಡ ವಿಧಿಸುತ್ತಿದ್ದಾರೆ. ಇದರಿಂದ ಆಟೋ ಚಾಲಕರಿಗೆ ಮನೆಯ ಬಾಡಿಗೆ ಕಟ್ಟಲು, ಮಕ್ಕಳ ಶಾಲಾ ಫೀಸ್, ಮಕ್ಕಳ ಪಾಲನೆ ಪೋಷಣೆ ಮತ್ತು ಕುಟುಂಬ ನಿರ್ವಹಣೆ ತುಂಬಾ ತೊಂದರೆಯಾಗುತ್ತಿದೆ. ಸರ್ಕಾರವು ದಂಡದ ಮೊತ್ತವನ್ನು ಕಡಿಮೆ ಮಾಡಬೇಕು ಮತ್ತು ಸಂಚಾರಿ ಪೊಲೀಸರ ದೌರ್ಜನ್ಯ ತಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುತ್ತಣ್ಣ ಎಸ್.ನಡಗೇರಿ, ಬಾಬು ಮದನಕರ್, ಜೈಭೀಮ ಮಾಳಗೆ, ಅವಿನಾಶ ಕಪನೂರ, ಮೋಹನ ಸಾಗರ, ಅರುಣ ತಾವಣೆ, ಪ್ರಮೀಣ್ ಖೇಮನ್, ದತ್ತು ಜಮಾದಾರ, ಮಲ್ಲು ದೋರೆ ಸೇರಿದಂತೆ ಅಟೋ ಚಾಲಕರು ಇದ್ದರು.