ಕೊಣಾಜೆ: ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲು, ಅಜಾಗರೂಕತೆಯ ಚಾಲನೆಗೆ ದಂಡ

Update: 2023-06-22 05:59 GMT

ಕೊಣಾಜೆ: ತೌಡುಗೋಳಿ ಕ್ರಾಸ್ ಬಳಿ ಏಕಾಏಕಿ ರಸ್ತೆ ದಾಟಿದ ಮಹಿಳೆ ಬಸ್ ಅಪಘಾತದಿಂದ ಪಾರಾದ ಘಟನೆ ಮಂಗಳವಾರ ನಡೆದಿದೆ.

ಮಂಗಳೂರಿನಿಂದ ಮುಡಿಪು ಸಂಪರ್ಕಿಸುವ ಖಾಸಗಿ ಬಸ್ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಈ ಸಂದರ್ಭ ಚಾಲಕನ ಸಮಯಪ್ರಜ್ಞೆಯಿಂದಾಗಿ ಮಹಿಳೆ ಪಾರಾಗಿದ್ದಾರೆ.

ಮಹಿಳೆ ರಸ್ತೆಯಲ್ಲಿ ಬರುವ ವಾಹನಗಳನ್ನು ಗಮನಿಸದೆ ರಸ್ತೆ ದಾಟಿದ್ದಾರೆ. ಈ ವೇಳೆ ಎದುರಿನಿಂದ ಬಸ್ ಬಂದಿದೆ. ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಬಸ್ ಡ್ರೈವರ್ ಬಸ್ಸನ್ನು ಎಡಕ್ಕೆ ಸರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಬಳಿಕ ಎಲ್ಲರೂ ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಜಾಗರೂಕತೆಯ ಚಾಲನೆಗೆ ದಂಡ

ಮಹಿಳೆಗೆ ಬಸ್ ಢಿಕ್ಕಿ ಹೊಡೆಯುವುದನ್ನು ಬಸ್ ಚಾಲಕ ತಪ್ಪಿಸಿರುವುದು ಶ್ಲಾಘನೀಯವಾಗಿದೆ. ಆದರೆ ಕರ್ಕಶ ಹಾರ್ನ್ ನೊಂದಿಗೆ ಅತಿ ಕಿರಿದಾದ ರಸ್ತೆಯಲ್ಲಿ ಅತಿವೇಗ, ಅಜಾಗರೂಕತೆಯ ಬಸ್ ಚಾಲನೆಯನ್ನು ಪೊಲೀಸರು ಗಮನಿಸಿದ್ದು, ಬಸ್ ಗೆ ದಂಡ ವಿಧಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಚಾಲಕನ ವಿರುದ್ಧ ಪ್ರಕರಣ

ಚಾಲಕ ತ್ಯಾಗರಾಜ್ ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಕರ್ಕಶ ಹಾರ್ನ್ ಹಾಕುತ್ತಾ ಬಸ್ಸನ್ನು ಚಲಾಯಿಸಿದ್ದರಿಂದ ಚಾಲಕನ ವಿರುದ್ಧ ಸಂಚಾರ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News