ಮಡಿಕೇರಿ | ಹೋಂಸ್ಟೇಯಲ್ಲಿ ಯುವತಿ ಸಾವು ಪ್ರಕರಣ : 37ಲಕ್ಷ ರೂ. ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

Update: 2024-02-05 15:37 GMT

ಮಡಿಕೇರಿ : ಕೊಡಗು ಜಿಲ್ಲೆಗೆ ಪ್ರವಾಸ ಬಂದಿದ್ದ ಮುಂಬಯಿ ಮೂಲದ ಯುವತಿಯೊಬ್ಬಳು ನಗರದ ‘ಅನಧಿಕೃತ ಹೋಂ ಸ್ಟೇ’ ಒಂದರ ಬಾತ್ ರೂಂನಲ್ಲಿ ಕುಸಿದು ಬಿದ್ದು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ’ ಹೋಂ ಸ್ಟೇ ಮಾಲೀಕರು ಮತ್ತು ಅವರ ವ್ಯವಸ್ಥಾಪಕರಿಗೆ 37,50,120 ರೂ.ಗಳ ಪರಿಹಾರವನ್ನು ಮೃತ ಯುವತಿಯ ಕುಟುಂಬಕ್ಕೆ ಪಾವತಿಸುವಂತೆ ಆದೇಶ ನೀಡಿದೆ.

ಮಡಿಕೇರಿ ನಗರದ ಅಗ್ನಿ ಶಾಮಕ ದಳದ ಕಚೇರಿಗೆ ತೆರಳುವ ಮಾರ್ಗದಲ್ಲಿರುವ ‘ಕೂರ್ಗ್ ವ್ಯಾಲಿ ಹೋಂ ಸ್ಟೇ’ ಮಾಲೀಕ ಶೇಕ್ ಮೊಹಮದ್ ಇಬ್ರಾಹಿಂ ಮತ್ತು ಹೋಂ ಸ್ಟೇ ವ್ಯವಸ್ಥಾಪಕ ಮುಕ್ತಾರ್ ಅಹಮದ್ ಅವರುಗಳಿಗೆ ಪರಿಹಾರ ನೀಡಲು ಸೂಚಿಸಲಾಗಿದೆ. ಹೋಂಸ್ಟೇ ಬುಕ್ ಮಾಡಿದ್ದ ಕರ್ಣಂಗೇರಿಯ ಲೀಫ್ ಕ್ಲಾವರ್ ಸ್ಟೇ ವ್ಯವಸ್ಥಾಪಕ ಪಾಂಡಿಯರಾಜನ್ ಎಂಬವರನ್ನು ಪ್ರಕರಣದಿಂದ ಕೈಬಿಡಲಾಗಿದೆ. 

ಪ್ರಕರಣ ಹಿನ್ನೆಲೆ

ಮುಂಬೈ ಮೂಲದ ಈಶ್ವರನ್ ಎಂಬರ ಪುತ್ರಿ ವಿಘ್ನೇಶ್ವರಿ ಈಶ್ವರನ್(24) ಎಂ.ಬಿ.ಎ ಪೂರೈಸಿ, ಮುಂಬೈ ಮೂಲದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಕೋವಿಡ್ ಕಾರಣದಿಂದ ‘ವರ್ಕ್ ಫ್ರಂ ಹೋಂ’ ಮುಂದುವರೆದಿದ್ದ ಸಂದರ್ಭ ಆಕೆ ಮುಂಬೈಯಲ್ಲಿದ್ದು, ಆನ್‍ಲೈನ್ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. 2021ರ ಅ. 23ರಂದು ವಿಘ್ನೇಶ್ವರಿ ಮುಂಬೈನಿಂದ ಹೊರಟು ಬೆಂಗಳೂರಿಗೆ ಆಗಮಿಸಿ ಅಲ್ಲಿದ್ದ ಇತರ ನಾಲ್ವರು ಗೆಳತಿಯರ ಜೊತೆ 24ರಂದು ಮಡಿಕೇರಿಗೆ ಆಗಮಿಸಿದ್ದರು. ಮಡಿಕೇರಿಗೆ ಆಗಮಿಸುವ ಮೊದಲ ಇಲ್ಲಿ ಉಳಿದುಕೊಳ್ಳಲು ನಗರದ ಅಗ್ನಿ ಶಾಮಕ ದಳದ ಕಚೇರಿ ಬಳಿ ಇರುವ ಕೂರ್ಗ್ ವ್ಯಾಲಿ ಹೋಂ ಸ್ಟೇ ಒಂದನ್ನು ಆನ್‍ಲೈನ್ ಮೂಲಕ ಬುಕ್ ಮಾಡಿದ್ದರು. ನಗರಕ್ಕೆ ಆಗಮಿಸಿದ ಐವರು ಯುವತಿಯರು ಹೋಂ ಸ್ಟೇ ಅಲ್ಲಿ ತಂಗಿದ್ದರಲ್ಲದೇ, ಕೊಡಗು ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ತೆರಳಿದ್ದರು. ಈ ಯುವತಿಯರ ಬಳಗ 2021ರ ಅ. 25ರ ಬೆಳಗೆ ಹೋಂಸ್ಟೇ ಅನ್ನು ಖಾಲಿ ಮಾಡಿ ಜೀಪ್‍ನಲ್ಲಿ ಮಾಂದಲ್ ಪಟ್ಟಿಗೆ ತೆರಳುವ ಸಿದ್ದತೆಯಲ್ಲಿದ್ದರು.

ಅ.24ರ ರಾತ್ರಿ 9 ಗಂಟೆಯ ವೇಳೆಗೆ ವಿಘ್ನೇಶ್ವರಿ ಅವರು ಸ್ನಾನ ಮಾಡಲೆಂದು ಬಾತ್ ರೂಂಗೆ ತೆರಳಿದ್ದರು. ಸಮಯ ಕಳೆದರು ಆಕೆ ಹೊರ ಬಾರದನ್ನು ಗಮನಿಸಿದ ಇತರ ಯುವತಿಯರು ಬಾತ್ ರೂಂಗೆ ತೆರಳಿದಾಗ ವಿಘ್ನೇಶ್ವರಿ ಕುಸಿದು ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ದೇಹವನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಮೃತ ಯುವತಿಯ ತಂದೆ ಈಶ್ವರನ್ ಅವರು ಮಡಿಕೇರಿಗೆ ಆಗಮಿಸಿ, ಮಗಳ ಸಾವಿನ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರು ಎಫ್.ಎಸ್.ಎಲ್ ವರದಿ ಪಡೆದುಕೊಂಡು ಪರಿಶೀಲಿಸಿದಾಗ ಗ್ಯಾಸ್ ಗೀಸರ್ ನ ಕಾರ್ಬನ್ ಮೊನಾಕ್ಸೈಡ್ ವಿಷಾನಿಲದಿಂದ ವಿಘ್ನೇಶ್ವರಿ ಸಾವನಪ್ಪಿರುವುದು ದೃಡಪಡಿಸಿತ್ತು. ಹೋಂ ಸ್ಟೇ ಪರಿಶೀಲನೆ ನಡೆಸಿದ ಸಂದರ್ಭ ಬಾತ್ ರೂಂನಲ್ಲಿ ವೆಂಟಿಲೇಷನ್ ಇಲ್ಲದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಮಾತ್ರವಲ್ಲದೇ ಗ್ಯಾಸ್ ಗೀಸರ್ ಅನ್ನು ವಶಕ್ಕೆ ಪಡೆದುಕೊಂಡು ಅದರ ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಈ ಕುರಿತು ಮೃತ ಯುವತಿಯ ತಂದೆ ಈಶ್ವರನ್ ಅವರು 2023ರ ಜೂನ್ 30ರಂದು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದರು.

ಮಹತ್ವದ ಆದೇಶ

ಪ್ರಕರಣದ ವಿಚಾರಣೆ ನಡೆಸಿದ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹೋಂ ಸ್ಟೇ ಮಾಲೀಕರಾದ ಶೇಕ್ ಮೊಹಮದ್ ಶೇಕ್ ಇಬ್ರಾಹಿಂ ಮತ್ತು ಹೋಂ ಸ್ಟೇ ವ್ಯವಸ್ಥಾಪಕ ಮುಕ್ತಾರ್ ಅಹಮದ್ ಅವರುಗಳು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ವಿಘ್ನೇಶ್ವರಿ ಮೃತಪಟ್ಟ 2021ರ ಅಕ್ಟೋಬರ್ 24ರಿಂದ ಈ ಆದೇಶ ಪಾಲನೆ ಮಾಡುವವರೆಗೆ ಆಕೆ ಪಡೆಯುತ್ತಿದ್ದ ಪ್ರತಿ ತಿಂಗಳ ಸಂಬಳದ ಅರ್ಧದಷ್ಟು(ರೂ.10,417) ಮೊತ್ತವನ್ನು ಸರಿ ಸುಮಾರು 30 ವರ್ಷಗಳಿಗೆ 37,50,120 ರೂ.ಗಳನ್ನು ಶೇ.6ರ ಬಡ್ಡಿಯನ್ನು ಸೇರಿಸಿ ಪಾವತಿಸಬೇಕು. ಸೇವಾ ನ್ಯೂನ್ಯತೆಗೆ ಪರಿಹಾರವಾಗಿ ಮಾನಸಿಕ ವೇದನೆ ಮತ್ತು ವ್ಯಾಜ್ಯದ ಖರ್ಚು ವೆಚ್ಚಗಳಿಗೆ 2 ಲಕ್ಷ ರೂ.ಗಳನ್ನು ಶೇ.6 ಬಡ್ಡಿಯನ್ನು ಸೇರಿಸಿ ಆದೇಶ ಪಾಲನೆ ಆಗುವವರೆಗೂ ನೀಡಬೇಕು. ತಪ್ಪಿದಲ್ಲಿ ಸದರಿ ಮೊತ್ತಕ್ಕೆ ಶೇ.10ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿಸಬೇಕು ಎಂದು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು(ಪ್ರಭಾರ) ರೇಣುಕಾಂಬ ಮತ್ತು ಸದಸ್ಯರಾದ ಗೌರಮ್ಮಣ್ಣಿ ಅವರುಗಳು ಆದೇಶ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News