ಪಂಚ ಗ್ಯಾರಂಟಿ‌ಗಳನ್ನು ಪರಿಷ್ಕರಣೆ ಮಾಡುವ ಪ್ರಶ್ನೆಯೇ ಇಲ್ಲ : ಸಚಿವ ಶಿವರಾಜ್ ತಂಗಡಗಿ

Update: 2024-08-15 07:51 GMT

Photo: fb.com/Shivarajtangadagi

ಕೊಪ್ಪಳ : ರಾಜ್ಯದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ‌ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಪರಿಷ್ಕರಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, "ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಯಾವುದೇ ಹೊರೆಯಾಗಿಲ್ಲ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕುಂಠಿತವಾಗಿಲ್ಲ" ಎಂದು ಹೇಳಿದರು.

ʼಬಡವರು, ನಿರ್ಗತಿಕರಿಗೆ ಜೀವನ ನಡೆಸಲು ಕಷ್ಟ ಇರುವವವರಿಗೆ ನಮ್ಮ ಗ್ಯಾರಂಟಿಯಿಂದ ಅನುಕೂಲವಾಗಿದೆ. ಇದು ಬಡವರ ಗ್ಯಾರಂಟಿ. ಹೈಕಮಾಂಡ್ ನಾಯಕರು ಕೂಡ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಜೊತೆ ಚರ್ಚೆ ನಡೆಸಿದ್ದು, ಗ್ಯಾರಂಟಿ ಯೋಜನೆಯನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಗ್ಯಾರಂಟಿ ಆಶ್ವಾಸನೆ ಕೊಟ್ಟು ನಾವು 135 ಸೀಟು ಗೆದ್ದಿದ್ದೇವೆ. ಅದರಂತೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನನದಲ್ಲಿ ಗೆಲುವು ಸಾಧಿಸಿದ್ದ, ನಾವು ಆ ಸಂಖ್ಯೆಯನ್ನು ಇದೀಗ 9ಕ್ಕೆ ಹೆಚ್ಚಿಸಿಕೊಂಡಿದ್ದೇವೆ. ಹೀಗಾಗಿ ನಮ್ಮ ಸರ್ಕಾರ ಇರುವ ತನಕ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲʼ ಎಂದು ತಿಳಿಸಿದರು.

ತುಂಗಭದ್ರಾ ಅಣೆಕಟ್ಟೆ | ಗೇಟ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ :

ತುಂಗಭದ್ರಾ ಅಣೆಕಟ್ಟೆಯ ನಿರ್ವಹಣೆಗೆ 135 ಕೋಟಿ ಹಣವನ್ನು ಮೀಸಲಿಡಲಾಗಿದೆ. ಈ ಪೈಕಿ ಪ್ರಸ್ತುತ ನಡೆಯುತ್ತಿರುವ ಕೆಲಸಕ್ಕಾಗಿ ಐದು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಅಣೆಕಟ್ಟೆಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಶೇ.65ರಷ್ಟು ಹಣವನ್ನು ಭರಿಸುತ್ತದೆ.‌ ಅಲ್ಲದೆ, ಮಂಡಳಿ ಕೇಳಿದ ಅನುದಾನವನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

ಇನ್ನು 19ನೇ ಕ್ರಸ್ಟ್ ಗೇಟ್ ಮುರಿದಿರುವ ಹಿನ್ನೆಲೆಯಲ್ಲಿ ಗೇಟ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. 64 ಅಡಿ ಎತ್ತರದ ಗೇಟ್ ಜಿಂದಾಲ್ ನಿಂದ ಬಂದಿದ್ದು, ಕ್ರೇನ್ ಮೂಲಕ ಗೇಟ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. 53ರಿಂದ 60 ಟಿಎಂಸಿ ನೀರನ್ನು ಜಲಾಶಯದಿಂದ ಖಾಲಿ ಮಾಡಿದ ಬಳಿಕ ಗೇಟ್ ಅಳವಡಿಸುವ ಬಗ್ಗೆ ಪರಿಣತರು ಹೇಳಿದ್ದರು. ಆದರೆ ಅದಕ್ಕೂ ಮುನ್ನ ನೀರಿನೊಳಗೆ ಗೇಟ್ ಅಳವಡಿಸುವ ಪ್ರಯೋಗವನ್ನು ಕೂಡ ಮಾಡುತ್ತಿದ್ದೇವೆ. ಇಲ್ಲಿ ತನಕ ಅಂದಾಜು 25‌ರಿಂದ 30ಟಿಎಂಸಿ ನೀರು ಜಲಾಶಯದಿಂದ ಖಾಲಿಯಾಗಿದೆ. ಗೇಟ್ ಅಳವಡಿಸುವ ಕಾರ್ಯದಲ್ಲಿ ಯಶಸ್ವಿಯಾಗುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News