ಅಮಿತ್ ಶಾ ಸ್ವಾಗತ ವಿಚಾರ: ಸಂಸದ ಪ್ರತಾಪ್ ಸಿಂಹ, ಪ್ರೀತಂ ಗೌಡ ನಡುವೆ ವಾಕ್ಸಮರ

Update: 2024-02-11 07:24 GMT

Photo: ಪ್ರತಾಪ್ ಸಿಂಹ, ಪ್ರೀತಂ ಗೌಡ

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ರವಿವಾರ ಬೆಳಗಿನ ಜಾವ ಮೈಸೂರಿಗೆ ಆಗಮಿಸಿದ ವೇಳೆ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ  ಪ್ರೀತಂ ಗೌಡ ನಡುವೆ  ಕಿತ್ತಾಟ ನಡೆದಿದೆ ಎಂದು ತಿಳಿದು ಬಂದಿದೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೇಂದ್ರ ಗೃಹ ಸಚಿವರ ಸ್ವಾಗತಕ್ಕೆ ಸರದಿ ಸಾಲು ಬಗ್ಗೆ ಸೂಚನೆ ನೀಡಲಾಗಿತ್ತು. ಇದರ ನೇತೃತ್ವವನ್ನು ಮಾಜಿ ಶಾಸಕ ಪ್ರೀತಂ ಗೌಡರಿಗೆ ವಹಿಸಲಾಗಿತ್ತು. ಈ ವೇಳೆ ಸಂಸದ ಪ್ರತಾಪ್ ಸಿಂಹ ಅವರಿಗೆ ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ. ಇದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾಜಿ ಶಾಸಕ ಪ್ರೀತಂ ಗೌಡ, ʼನನ್ನ ಬಳಿ ನೀನು ಮಾತನಾಡಬೇಡʼ ಎಂದು ಹೇಳಿದ್ದಾರೆ. ಇದರಿಂದ ಕೆರಳಿದ ಸಂಸದ ಪ್ರತಾಪ್ ಸಿಂಹ, ʼಇದೆಲ್ಲವನ್ನು ಹಾಸನದಲ್ಲಿ ಇಟ್ಕೊ, ನಮ್ಮಲ್ಲಿ ನಡೆಯಲ್ಲʼ ಎಂದು ತಿರುಗೇಟು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಮಾಜಿ ಶಾಸಕ ಪ್ರೀತಂ ಗೌಡ, ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇಬ್ಬರ ಜಗಳ ತಾರಕ್ಕೇರುತ್ತಿದ್ದಂತೆ ಮಧ್ಯಪ್ರವೇಶಿಸಿದ ಬಿಜೆಪಿ ನಾಯಕರು ಇಬ್ಬರನ್ನು ಸಮಾಧಾನ ಮಾಡಿದ್ದಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News