ದ್ವೇಷದ ರಾಜಕಾರಣ ಮಾಡುವುದೇ ಬಿಜೆಪಿಯವರ ಕೆಲಸ : ಸಿಎಂ ಸಿದ್ದರಾಮಯ್ಯ

Update: 2024-06-15 07:03 GMT

ಮೈಸೂರು: ದ್ವೇಷದ ರಾಜಕಾರಣ ಮಾಡುವುದೇ ಬಿಜೆಪಿಯವರ ಕೆಲಸ. ನನ್ನ ಮೇಲೆ, ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಮೇಲೆ ಪ್ರಕರಣ ದಾಖಲಿಸಿದ್ದಾರೆ ಅದನ್ನು ಏನೆಂದು ಕರೆಯಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ಗುಡುಗಿದರು.

ನಗರದ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದ್ವೇಷದ ರಾಜಕಾರಣ ಮಾಡುವುದೇ ಬಿಜೆಪಿಯವರ ಕೆಲಸ, ಎದರಿಸುವುದು, ಬೆದರಿಸುವುದು, ಈಡಿ, ಐಟಿ, ಸಿಬಿಐ ಉಪಯೋಗಿಸುವುದು ಅವರ ಕೆಲಸ. ಬಿಜೆಪಿಯವರು ಮೊದಲಿನಿಂದಲೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಅದಕ್ಕಾಗಿ ಈ ಬಾರಿ ಅವರಿಗೆ ಜನ ಬಹುಮತ ನೀಡಿಲ್ಲ ಎಂದು ಹರಿಹಾಯ್ದರು.

ಕಾಂಗ್ರೆಸ್ ನವರು ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ, ನಾನು ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವನಲ್ಲ. ದ್ವೇಷದ ರಾಜಕಾರಣ ಏನಿದ್ದರೂ ಬಿಜೆಪಿಯವರದ್ದು ಎಂದು ತಿರುಗೇಟು ನೀಡಿದರು.

"ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರಲ್ಲ ಅದು ಟಾರ್ಗೆಟ್ ಅಲ್ಲವೇ?. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದರಲ್ಲ ಅದನ್ನು ದ್ವೇಷದ ರಾಜಕಾರಣ ಎಂದು ಕರೆಯಬೇಕೇ? ಪ್ರೀತಿ ರಾಜಕಾರಣ ಎಂದು ಕರೆಯಬೇಕೆ?" ಎಂದು ಪ್ರಶ್ನಿಸಿದರು.

ದಕ್ಷಿಣ ಭಾರತದಲ್ಲಿ ಜನ ಬಿಜೆಪಿ ಬೆಂಬಲಿಸಲ್ಲ :

ಬಿಜೆಪಿಯವರು ಏನೇ ಮಾಡಿದರೂ ದಕ್ಷಿಣ ಭಾರತದಲ್ಲಿ ಜನ ಬಿಜೆಪಿ ಬೆಂಬಲಿಸಲ್ಲ. ಬಿಜೆಪಿ ಆರೆಸ್ಸೆಸ್‌ನ ರಾಜಕೀಯ ಪಕ್ಷ ಮತ್ತು ಅದರ ಮುಖವಾಡ ಎಂದು ಜನರಿಗೆ ಗೊತ್ತಿದೆ. ಹಾಗಾಗಿ ದಕ್ಷಿಣ ಭಾರತದ ಜನ ಬಿಜೆಪಿ ಬೆಂಬಲಿಸಲ್ಲ. ಉತ್ತರಪ್ರದೇಶ, ಮುಂಬೈಗಳಲ್ಲೂ ಅವರಿಗೆ ಹಿನ್ನಡೆಯಾಗಿದೆ. ಆರೆಸ್ಸೆಸ್ ಮುಖಂಡರೊಬ್ಬರು ಅಹಂಕಾರಕ್ಕೆ ಜನ ಪಾಠ ಕಲಿಸಿದ್ದಾರೆ ಎಂದು ಹೇಳಿರುವುದೇ ಅದಕ್ಕೆ ಉದಾಹರಣೆ ಎಂದು ಹೇಳಿದರು.‌

ನೀಟ್ ಮರು ಪರೀಕ್ಷೆ ನಡೆಸಬೇಕು :

ನೀಟ್ ನಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಅದರ ಬಗ್ಗೆ ತನಿಖೆಯಾಗಬೇಕು ಮತ್ತು ಮರು ಪರೀಕ್ಷೆ ನಡೆಸಬೇಕು ಎಂದು ಈಗಾಗಲೇ ಒತ್ತಾಯಿಸಿದ್ದೇನೆ. ಹಾಗಾಗಿ ನೀಟ್ ಮರುಪರೀಕ್ಷೆ ಮಾಡಬೇಕು ಎಂದು ಹೇಳಿದರು.

ನೀಟ್ ನಲ್ಲಿ ಕೆಲವರಿಗೆಲ್ಲಾ ರ್ಯಾಂಕ್ ನೀಡಿರುವುದರಿಂದ ಅನ್ಯಾಯ ಆಗಿದೆ. ಅದರ ಬಗ್ಗೆ ತನಿಖೆ ಆಗಬೇಕು ಮರುಪರೀಕ್ಷೆ ಆಗಬೇಕು.  ಗ್ರೇಸ್ ಮಾರ್ಕ್ಸ್‌ ಕೊಟ್ಟು ಪಾಸ್ ಮಾಡುವುದು ಕೆಟ್ಟ ಸಂಸ್ಕೃತಿ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News