ಮೈಸೂರು : ಆಸ್ತಿಗಾಗಿ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯನ್ನು ಹತ್ಯೆ ಮಾಡಿದ ಪತಿ..!

Update: 2024-02-19 12:26 GMT

ಮೈಸೂರು : ಆಸ್ತಿಗಾಗಿ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯನ್ನು ಪತಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ನಾಯ್ಡುನಗರದಲ್ಲಿ ವರದಿಯಾಗಿದೆ.

ಮೃತರನ್ನು ಅಖಿಲಾ ಭಾನು (46) ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿ ಅಬ್ಬ ತಯ್ಯೂಬ್, ಆತನ ಮೊದಲನೇ ಹೆಂಡತಿಯ ಮಕ್ಕಳಾದ ಮುಹಮ್ಮದ್ ಆಸಿಫ್, ಮುಹಮ್ಮದ್ ತೌಸೀಪ್ ಹಾಗೂ ಮುಹಮ್ಮದ್ ಹೈದರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಅಬ್ಬ ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದು,  2013 ರಲ್ಲಿ ಅಖಿಲಾ ಭಾನು ಅವರನ್ನು ಎರಡನೇ ವಿವಾಹವಾಗಿದ್ದ. ಆತನ ಮೊದಲ ಹೆಂಡತಿಗೆ ನಾಲ್ವರು ಮಕ್ಕಳಿದ್ದರು. ಎರಡನೇ ಪತ್ನಿ ಅಖಿಲಾ ಬಾನು ಕ್ಯಾನ್ಸರ್​​ ನಿಂದ ಬಳಲುತ್ತಿದ್ದು, ಬಳಿಕ ಗುಣಮುಖರಾಗಿದ್ದರು. ಆಕೆಗೆ ಮಕ್ಕಳಿರಲಿಲ್ಲ. 6 ತಿಂಗಳ ಹಿಂದಷ್ಟೇ ಅಖಿಲಾ ಭಾನು ಅವರ ಅಕ್ಕನ ಮಗ ಸೈಯದ್ ಇರ್ಫಾನ್ ಎಂಬವರು ಅವರಿಗಾಗಿ ನಾಯ್ಡುನಗರದಲ್ಲಿ ಒಂದು ಮನೆ ಖರೀದಿಸಿಕೊಟ್ಟಿದ್ದರು. ತಯ್ಯೂಬ್ ಹಾಗೂ ಅಖಿಲಾ ಭಾನು ಇಬ್ಬರ ಹೆಸರಲ್ಲಿ ಮನೆಯ ಜಂಟಿ ನೋಂದಣಿಯಾಗಿತ್ತು ಎನ್ನಲಾಗಿದೆ.

ಅಖಿಲಾ ಭಾನು ಅವರ ಮನೆಯನ್ನು ಇತ್ತೀಚೆಗೆ ಮೊದಲ ಹೆಂಡತಿಯ ಮಕ್ಕಳಿಗೆ ಬರೆದು ಕೊಡಲು ತಯ್ಯೂಬ್ ಪ್ರಯತ್ನಿಸಿದ್ದ. ಈ ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಫೆ.16 ರ ಬೆಳಿಗ್ಗೆ ಇದ್ದಕ್ಕಿದ್ದಂತೆ ಸೈಯದ್ ಇರ್ಫಾನ್ ಮನೆಗೆ ಬಂದ ತಯ್ಯೂಬ್ ಕಣ್ಣೀರಿಡುತ್ತಾ, ‘ಅಖಿಲಾಬಾನು ಮೃತಪಟ್ಟಿದ್ದಾಳೆ’ ಎಂದು ತಿಳಿಸಿದ್ದ ಎನ್ನಲಾಗಿದೆ.

ಅಖಿಲಾ ಬಾನು ಮೃತದೇಹವನ್ನು ಸೈಯದ್ ಇರ್ಫಾನ್ ಪರಿಶೀಲನೆ ಮಾಡಿದಾಗ ಕುತ್ತಿಗೆಯ ಮೇಲೆ ತರಚಿದ ಗಾಯಗಳು ಕಂಡು ಬಂದಿದ್ದವು. ಇದರಿಂದ ಅನುಮಾನಗೊಂಡ ಸೈಯದ್ ಇರ್ಫಾನ್ ತಮ್ಮ ಚಿಕ್ಕಮ್ಮ ಸಾವು ಸಹಜವಲ್ಲ ಕೊಲೆ ಎಂದು ದೂರು ನೀಡಿದ್ದರು.

ಇರ್ಫಾನ್ ದೂರಿನ ಹಿನ್ನೆಲೆಯಲ್ಲಿ ತನಿಖೆ‌ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಮೈಸೂರಿನ ಎನ್ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News