ಸತೀಶ್ ಜಾರಕಿಹೊಳಿ ಸಿಎಂ ಆಗಲು ಕುಮಾರಸ್ವಾಮಿ ಅವರ ಬೆಂಬಲ ಕೇಳಿರಬಹುದು : ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ

ಜಿ.ಟಿ.ದೇವೇಗೌಡ
ಮೈಸೂರು : ಸಚಿವ ಸತೀಶ್ ಜಾರಕಿ ಹೊಳಿ ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್ ಬೆಂಬಲಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿಗೆ ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್ ಬೆಂಬಲಬೇಕು ಎಂದು ಕೇಳಿರಬಹುದು. ಜೆಡಿಎಸ್ ನ 18 ಶಾಸಕರ ಬೆಂಬಲವನ್ನು ಸತೀಶ್ ಜಾರಕಿಹೊಳಿ ಕೇಳಿರಬಹುದು. ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು. ಸದ್ಯದ ಪರಿಸ್ಥಿತಿ ನೋಡಿದರೆ ಅವರು ಬೇರೆ ಕಾರಣಕ್ಕೆ ಕುಮಾರಸ್ವಾಮಿ ಅವರನ್ನ ಭೇಡಿ ಮಾಡಿಲ್ಲ. ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಅಂದರೆ ಸಿಎಂ ಆಗಬೇಕು ಎಂಬುದೇ ಕಾರಣ ಎಂದು ಹೇಳಿದರು.
ಒಂದು ವೇಳೆ ಜೆಡಿಎಸ್ ಸತೀಶ್ ಜಾರಕಿಹೊಳಿಗೆ ಬೆಂಬಲ ನೀಡಿದರೂ ನಾನು ತಟಸ್ಥನಾಗಿರುತ್ತೇನೆ. ಈ ವಿಚಾರದಲ್ಲಿ ಮಾತ್ರ ಅಲ್ಲ ನಾನು ಎಂದೂ ತಟಸ್ಥ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಿ.ಟಿ.ದೇವೇಗೌಡ, ಅದು ಬಿಜೆಪಿಯ ಆಂತರಿಕ ವಿಚಾರ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಈ ಹಿಂದೆ ಅವರ ಬಗ್ಗೆ ಮಾತನಾಡಿದ್ದೆ. ಆಗ ಅವರೇ ಫೋನ್ ಮಾಡಿ ಮಾತನಾಡಿ ಸರಿ ಮಾಡಿಕೊಂಡರು. ಈಗ ನಮ್ಮ ಮಧ್ಯೆ ಏನೂ ಇಲ್ಲ. ಮೇಲಾಗಿ ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಮುಂದೆ ಇನ್ನೂ ಏನೇನು ಬೆಳವಣಿಗೆ ನಡೆಯುತ್ತೆ ಕಾದು ನೋಡೋಣ ಎಂದರು.
ಹನಟ್ರ್ಯಾಪ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸದನದಲ್ಲಿ ಸುನಿಲ್ ಕುಮಾರ್, ರಾಜಣ್ಣ ಮಾತನಾಡಿದ್ದಾರೆ. ಕರ್ನಾಟಕದ ರಾಜಕಾರಣಕ್ಕೆ ಇತಿಹಾಸ ಇದೆ. ಇತ್ತೀಚಿನ ದಿನಗಳ ಘಟನೆ ನೋಡಿದರೆ ಪ್ರಜಾಪ್ರಭುತ್ವ ವೇಗವಾಗಿ ಬೆಳೆಯುತ್ತಿದೆ ಎಂದು ವ್ಯಂಗ್ಯವಾಡಿದರು.
ಸದನದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರ ಚರ್ಚೆ ಆಗಬೇಕಿತ್ತು. ಕೇವಲ ಗಲಾಟೆ ಗದ್ದಲದಲ್ಲೇ ಸದನ ಮುಗಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಬಜೆಟ್ ಮಂಡನೆ ಮಾಡಿದರು ಎಂದು ಜನತೆಗೆ ಗೊತ್ತಾಗಲೇ ಇಲ್ಲ. ಅಭಿವೃದ್ಧಿ ವಿಚಾರ ಚರ್ಚೆ ಆಗಿದ್ರೆ ಜನ ಖುಷಿ ಪಡುತ್ತಿದ್ದರು. ಹನಿಟ್ರ್ಯಾಪ್ ಯಾಕೆ ಆಯ್ತು? ಏನು ಎಂಬುದನ್ನು ತನಿಖೆ ಮಾಡಬೇಕು. ತನಿಖೆ ಮಾಡಿದಾಗಲೇ ಎಲ್ಲವೂ ತಿಳಿಯುತ್ತದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.