ಅರಮನೆಯ ದಂತ ಗೋಪುರದಡಿ ಬೆಳೆದಿರುವ ಯದುವೀರ್ ಗೆ ಜನ ಸಾಮಾನ್ಯರ ಕಷ್ಟ ಗೊತ್ತಿಲ್ಲ: ಯತೀಂದ್ರ ಸಿದ್ದರಾಮಯ್ಯ

Update: 2024-04-06 16:46 GMT

ಮೈಸೂರು : ಅರಮನೆಯ ದಂತ ಗೋಪುರದಡಿ ಬೆಳೆದಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ಜನ ಸಾಮಾನ್ಯರ ಕಷ್ಟ ಗೊತ್ತಿಲ್ಲ, ಜನರೊಂದಿಗೆ ಬೆರೆತು ಸಾಮಾನ್ಯ ವ್ಯಕ್ತಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಿ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಮನವಿ ಮಾಡಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಜೊತೆ ಪ್ರಚಾರ ನಡೆಸಿದರು.

ನಗರದ ಕೆ.ಆರ್.ಮಿಲ್ ಕಾಲೊನಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಡಾ.ಯತೀಂದ್ರ ಸಿದ್ಧರಾಮಯ್ಯ , "ಬಿಜೆಪಿ ಅಭ್ಯರ್ಥಿ ಅರಮನೆಯ ದಂತಗೋಪುರದಡಿ ಬೆಳೆದವರು. ಅವರಿಗೆ ಸಾಮಾನ್ಯ ಜನರ ಕಷ್ಟ ಗೊತ್ತಿಲ್ಲ. ಅರಮನೆಗೆ ನಾವ್ಯಾರೂ ಹೋಗಲು ಸಾಧ್ಯವಿಲ್ಲ.‌ ಕಾರ್ಯಕರ್ತರೂ ಅರಮನೆಗೆ ಹೋಗಲು ಸಾಧ್ಯವಿಲ್ಲ" ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಸಾಮಾನ್ಯ ಕಾರ್ಯಕರ್ತರಾಗಿ ಜನರೊಂದಿಗೆ ಬೆಳೆದಿರುವ ವ್ಯಕ್ತಿ.‌ಇವರಿಗೆ ಸಾಮಾನ್ಯ ಜನರ ಕಷ್ಟದ ಅರಿವಿದೆ. ಹಾಗಾಗಿ ಇವರನ್ನು ಲೋಕಸಭೆಗೆ ಕಳುಹಿಸಿದರೆ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಶ್ರೀಮಂತರ, ಬಂಡವಾಳಶಾಹಿಗಳ ಪರವಾಗಿರುವ ಸರಕಾರ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಶ್ರೀಮಂತರ ತೆರಿಗೆ ಹಣ ಕಡಿಮೆ ಮಾಡಿ, ಜನಸಾಮಾನ್ಯರ ಮೇಲೆ ಜಿಎಸ್ ಟಿ ಹಾಕಿದ್ದಾರೆ. ಇದರಿಂದ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಬಡವರ, ರೈತರ, ಕಾರ್ಮಿಕ, ದಲಿತರ ಪರ ಕೆಲಸ ಮಾಡಿದೆ. ಕಳೆದ. 70 ವರ್ಷಗಳಲ್ಲಿ ಕಾಂಗ್ರೆಸ್ ಬಡವರ ಪರವಾಗಿ ಕೆಲಸ ಮಾಡಿದೆ. ಸಂವಿಧಾನ ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಪಕ್ಷಕ್ಲೆ ಮತ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News