ದಲಿತರ ಬಗ್ಗೆ ಏಕಿಷ್ಟು ಅಸಹನೆ?

ಮೀಸಲಾತಿ ಅಥವಾ ಉತ್ತೇಜಿತ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸುವವರು ಈ ದೇಶದಲ್ಲಿ ಕೇವಲ ಶೇ. ೪.೫ರಷ್ಟಿಸುವ ಸನಾತನವಾದಿಗಳಿಗೆ ಕೇಂದ್ರ ಸರಕಾರ ಶೇ. ೧೦ ಮೀಸಲಾತಿ ನೀಡಿದಾಗ ಯಾಕೆ ಚಕಾರವೆತ್ತಲಿಲ್ಲ. ಎಸ್‌ಸಿ/ಎಸ್‌ಟಿಗಳು ಸಾಮಾಜಿಕವಾಗಿ ಅನುಭವಿಸಿರುವ ಅನ್ಯಾಯಗಳು ಮತ್ತು ಅಸಮಾನತೆಯನ್ನು ಇವರು ಅನುಭವಿಸಿದ್ದಾರೆಯೇ? ಮಲ ಹೊರುವ, ಕಸ ಗುಡಿಸುವ ಕೆಲಸ ಮಾಡಿದ್ದಾರೆಯೇ?

Update: 2023-11-08 05:07 GMT

ಇತ್ತೀಚೆಗೆ ಕರ್ನಾಟಕ ಸರಕಾರ ಎಸ್‌ಸಿ/ಎಸ್‌ಟಿ ಸಮುದಾಯದ ಮಕ್ಕಳು ಉನ್ನತ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲಿ ಎನ್ನುವ ಉತ್ತೇಜಿತ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡುತ್ತಿರುವುದು ಬಹಳ ಸ್ವಾಗತಾರ್ಹವಾದದ್ದು. ಆದರೆ ಇದನ್ನು ಸಹಿಸದ ಕೆಲವು ಕೋಮುವಾದಿಗಳು ಕೇವಲ ಎಸ್‌ಸಿ/ಎಸ್‌ಟಿಮಕ್ಕಳಿಗಷ್ಟೇ ಯಾಕೆ ಉಚಿತ ಶಿಕ್ಷಣ? ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಎಲ್ಲರಿಗೂ ಈ ಸೌಲಭ್ಯ ನೀಡಬಹುದಲ್ಲವೇ? ಮೊದಲು ಮೀಸಲಾತಿ ವ್ಯವಸ್ಥೆಯನ್ನು ಕಿತ್ತೊಗೆಯಬೇಕು ಎಂದೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂತಹ ಅಸಮಾನತೆಯ ಮನಸ್ಸುಳ್ಳ ಜನರಿಗೆ ಕೆಲವು ವಿಚಾರಗಳನ್ನು ಅರ್ಥ ಮಾಡಿಸಬೇಕಾಗಿದೆ. ಇವರಿಗೆ ಮೊದಲು ಅರ್ಥವಾಗಬೇಕಾದದ್ದು, ಈ ದೇಶದ ಬಡತನ ಯಾವ ಜಾತಿಯ ಜನರಲ್ಲಿ ಎಷ್ಟು ಪ್ರಮಾಣದಲ್ಲಿದೆ? ಯಾವ ಜನರು ಸಂಪತ್ತಿನಿಂದ ವಂಚಿತರಾಗಿದ್ದಾರೆ ಎನ್ನುವುದು.

ಮೀಸಲಾತಿ ಅಥವಾ ಉತ್ತೇಜಿತ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸುವವರು ಈ ದೇಶದಲ್ಲಿ ಕೇವಲ ಶೇ. 4.5ರಷ್ಟಿಸುವ ಸನಾತನವಾದಿಗಳಿಗೆ ಕೇಂದ್ರ ಸರಕಾರ ಶೇ. 10 ಮೀಸಲಾತಿ ನೀಡಿದಾಗ ಯಾಕೆ ಚಕಾರವೆತ್ತಲಿಲ್ಲ. ಎಸ್‌ಸಿ/ಎಸ್‌ಟಿಗಳು ಸಾಮಾಜಿಕವಾಗಿ ಅನುಭವಿಸಿರುವ ಅನ್ಯಾಯಗಳು ಮತ್ತು ಅಸಮಾನತೆಯನ್ನು ಇವರು ಅನುಭವಿಸಿದ್ದಾರೆಯೇ? ಮಲ ಹೊರುವ, ಕಸ ಗುಡಿಸುವ ಕೆಲಸ ಮಾಡಿದ್ದಾರೆಯೇ? ಕಕ್ಕಸ್ ಗುಂಡಿಯೊಳಗೆ ಉಸಿರುಗಟ್ಟಿ ಸತ್ತವರ ಪ್ರಮಾಣ ಈ ಮೀಸಲಾತಿ ವಿರೋಧಿ ಜನರಲ್ಲಿ ಎಷ್ಟಿದೆ? ಅಥವಾ ಅಂತಹ ಕೆಲಸವನ್ನು ಇವರು ಮಾಡಿದ್ದಾರೆಯೇ? ಶತಮಾನಗಳ ಕಾಲ ಅವಕಾಶಗಳಿಂದ ವಂಚಿತರಾದ ಈ ಮಕ್ಕಳಿಗೆ ಉತ್ತೇಜಿತ ಶಿಕ್ಷಣ ನೀಡಬಾರದೇ?

ಎಷ್ಟೋ ವರ್ಷಗಳಿಂದ ದಲಿತರು ಊರಿನ ಹೊರಗಡೆ ಇದ್ದರು. ಇವರ ಹೆಣ್ಣುಮಕ್ಕಳ ಮೇಲೆ ದಲಿತರೆಂಬ ಕಾರಣಕ್ಕಾಗಿ ನಡೆದ ಮೂತ್ರ ಕುಡಿಸುವ ಘಟನೆಗಳು, ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವ ಪ್ರಕರಣಗಳು, ಅತ್ಯಾಚಾರ, ಅನ್ಯಾಯ ಮೀಸಲಾತಿಯನ್ನು ವಿರೋಧಿಸುವ ಜಾತಿಗಳ ಹೆಣ್ಣುಮಕ್ಕಳ ಮೇಲೆ ನಡೆದಿವೆಯೇ? ಆರ್ಥಿಕವಾಗಿ ಬಲಿಷ್ಠರಾಗಿರುವ, ಅಧಿಕಾರದಲ್ಲಿ ಪ್ರಬಲರಾಗಿರುವ, ಜಾತಿಯಲ್ಲಿ ಶ್ರೇಷ್ಠತೆಯನ್ನು ಕಂಡಿರುವ ಇವರಿಗೆ ಸರಕಾರ ಶೇ. 10 ಮೀಸಲಾತಿಯನ್ನು ಜಾರಿಮಾಡಿದೆ. ಕಡಿಮೆ ಜನಸಂಖ್ಯೆಗೆ ಹೆಚ್ಚು ಮೀಸಲಾತಿ!. ಹೆಚ್ಚು ಜನಸಂಖ್ಯೆ ಇರುವ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಿದರೆ ಇವರು ಪ್ರಶ್ನೆ ಮಾಡುತ್ತಾರೆ. ದಲಿತರಿಗೆ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಗಮಗೊಳಿಸಿದರೆ ಇವರಿಗೆ ಸಹಿಸಿಕೊಳ್ಳಲು ಕಷ್ಟವಾಗುತ್ತಿದೆ.

ಮೀಸಲಾತಿ ಉಪಯೋಗವನ್ನು ದಲಿತರಿಗಿಂತ ದಲಿತೇತರರೇ ಹೆಚ್ಚು ಅನುಭವಿಸುತ್ತಿದ್ದಾರೆ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂತಹ ವ್ಯವಸ್ಥೆ ಬೇಡ ಎನ್ನುವುದಾದರೆ, ಅನಿಷ್ಟ ವ್ಯವಸ್ಥೆಯಿಂದ ಮುಕ್ತರಾಗಬೇಕಾದರೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಸಮಾನತೆ ಶೋಷಿತರಿಗೆ ನಿರಾಕರಿಸಿದಂತೆ. ದಲಿತರಲ್ಲಿ ಕೇವಲ ಕೆಲವು ಕುಟುಂಬಗಳು ಅಭಿವೃದ್ಧಿಯಾದರೆ ಇಡೀ ದಲಿತ ಸಮುದಾಯವೇ ಅಭಿವೃದ್ಧಿಯಾಗಿದೆ ಎನ್ನುವುದಾದರೆ, ಎಲ್ಲಾ ಜಾತಿಯಲ್ಲೂ ಶ್ರೀಮಂತರಿದ್ದಾರೆ, ಹಾಗಾದರೆ ಆ ಜಾತಿಗೆ ಮೀಸಲಾತಿ ಯಾಕೆ ಬೇಕು ಎಂದು ಹೇಳಬಹುದಲ್ಲವೇ? ಆ ಜಾತಿಯವರಿಗೆ ತನ್ನ ಶೇ.ಜನಸಂಖ್ಯೆಗಿಂತ ಯಾಕೆ ಹೆಚ್ಚು ಅಧಿಕಾರ, ಅಸ್ತಿ, ಸವಲತ್ತು, ಸಂಪತ್ತು ಬೇಕಾಗಿದೆ. ಕೇವಲ ಶೇ. 4.5 ಜನರ ಕೈಯಲ್ಲಿ ಶೇ. 95ರಷ್ಟು ಅಸ್ತಿ, ಅಧಿಕಾರ, ಸಂಪತ್ತು ಕ್ರೋಡೀಕರಣಗೊಂಡಿದೆ. ಆದರೂ ನಮ್ಮ ಸರಕಾರಗಳು ಅವರಿಗೆ ಶೇ. 10 ಮೀಸಲಾತಿಯನ್ನು ನೀಡಿದೆ. ಇದು ಜೀವ ವಿರೋಧಿ, ಸಮಾನತೆಯ ವಿರೋಧಿ, ಸಂವಿಧಾನ ವಿರೋಧಿ ನೀತಿಗಳಲ್ಲವೇ?

ಈ ರಾಷ್ಟ್ರದಲ್ಲಿ ಹಲವು ವರ್ಷಗಳು ಬಜೆಟ್ ಮಂಡನೆಗೆ ಬೇಕಾಗುವಷ್ಟು ಹಣವನ್ನು ಕೇವಲ ಮೇಲುಜಾತಿಯ ಜನರೇ ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇದಕ್ಕೆ ಯಾರು ಉತ್ತರ ಕೊಡಬೇಕು. ಇವರೆಲ್ಲಾ ಸಬ್ಸಿಡಿ ನೆಪದಲ್ಲಿ ಬ್ಯಾಂಕುಗಳನ್ನು ವಂಚಿಸಿದ್ದಾರೆ/ವಂಚಿಸುತ್ತಿದ್ದಾರೆ. ಆ ಪಟ್ಟಿಯಲ್ಲಿ ಯಾವುದೇ ದಲಿತರ ಹೆಸರಿಲ್ಲ ಎನ್ನುವುದು ಮೀಸಲಾತಿ ವಿರೋಧಿಗಳಿಗೆ ತಿಳಿದಿರಲಿ. ಯಾವ ದಲಿತ ಕಾರ್ಪೊರೇಟ್‌ಗಳು ದೇಶದ ಹಣದೋಚಿ ದೇಶಬಿಟ್ಟು ಪರಾರಿಯಾಗಿದ್ದಾರೆ ಎನ್ನುವುದು ಚಿಂತಿಸಬೇಕಾಗಿದೆ. ಇತ್ತೀಚೆಗೆ ಸರಕಾರ ಜನಪರವಾಗಿ ಚಿಂತಿಸಿ, ಅಸಹಾಯಕರ ಜೀವನೋಪಾಯಕ್ಕಾಗಿ ಒಂದಿಷ್ಟು ಹಣ ನೀಡಿದರೆ ಜಾತಿವಾದಿಗಳಿಗೆ ಕಣ್ಣುರಿ ಬರುತ್ತಿದೆ.

ದಲಿತರ ಮಕ್ಕಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಭದ್ರತೆ ಪಡೆಯಲು ಉತ್ತೇಜಿತ ಶಿಕ್ಷಣ ನೀಡಿದರೆ ಅದು ಅವರ ಜೀವನ ನಿರ್ವವಣೆಗಾಗಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿಯೇ ಹೊರತು, ದೇಶ ಬಿಟ್ಟು ಪರಾರಿಯಾಗುವುದಕ್ಕಲ್ಲ. ಬ್ಯಾಂಕುಗಳನ್ನು ವಂಚಿಸುವಷ್ಟು ಕೆಟ್ಟ ಮನಸ್ಥಿತಿ ಈ ದೇಶದ ಶೋಷಿತರುಗಳಿಗೆ ಇಲ್ಲ. ಕೇಂದ್ರ ಮತ್ತು ಇತರ ರಾಜ್ಯ ಸರಕಾರಗಳು ನಿಜವಾಗಿಯೂ ಎಲ್ಲಾ ಕಟ್ಟಕಡೆಯ ಜನರಿಗೂ ಸಮಾನತೆಯನ್ನು ಒದಗಿಸುವ ಮನೋಭಾವ ಹೊಂದಿದೆ ಎನ್ನುವುದಾದರೆ ಜಾತಿ ಜನಸಂಖ್ಯಾವಾರು ಜನಗಣತಿ ಮತ್ತು ಸಂಪತ್ತಿನ ಅಸಮಾನ ಹಂಚಿಕೆ ಮತ್ತು ಕ್ರೋಡೀಕರಣದ ಬಗ್ಗೆ ಸರ್ವೇ ಮಾಡಿಸಲಿ. ಅದನ್ನು ಸಮಾನವಾಗಿ ಹಂಚುವ ಕೆಲಸಕ್ಕೆ ಮುಂದಾಗಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದಮ್ಮಪ್ರಿಯ, ಬೆಂಗಳೂರು

contributor

Similar News