ಬಿರು ಬಿಸಿಲಿಗೆ ಒಣಗುತ್ತಿದೆ ಚಾರ್ಮಾಡಿ ಅರಣ್ಯ

Update: 2024-04-16 04:55 GMT

ಬಣಕಲ್: ಬಿರು ಬಿಸಿಲ ಬೇಗೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು ಚಾರ್ಮಾಡಿ ಅರಣ್ಯ ಪ್ರದೇಶದ ಗಿಡ ಮರ ಹಾಗೂ ಪರಿಸರ ಒಣಗಿದ ಸ್ಥಿತಿಯನ್ನು ತಲುಪುತ್ತಿದೆ.

ಪ್ರಸಕ್ತ ಚಾರ್ಮಾಡಿ ಘಾಟಿ ಪರಿಸರದ ಅರಣ್ಯ ಸಂಪೂರ್ಣ ತನ್ನ ಸ್ವರೂಪ ಬದಲಾಯಿಸಿಕೊಂಡಿದೆ. ಇಲ್ಲಿನ ಬಂಡೆಗಳಲ್ಲಿ ಜನವರಿ ತನಕವೂ ಬೀಳುವ ನೀರಿನ ಜರಿಗಳು ತಮ್ಮ ಇರುವಿಕೆಯನ್ನು ಕಳೆದುಕೊಂಡಿವೆ. ಕಲ್ಲು, ಬಂಡೆ ಹಾಗೂ ಅವುಗಳ ಸುತ್ತಮುತ್ತ ಆಳೆತ್ತರದ ಒಣ ಹುಲ್ಲು ಬೆಳೆದಿದೆ. ಘಾಟಿಯ ಕಂದಕ ಭಾಗಗಳಲ್ಲೂ ಒಣ ಹುಲ್ಲು, ಒಣಗಿದ ಗಿಡಗಂಟಿಗಳು ಎಲ್ಲೆಲ್ಲೂ ಕಂಡು ಬರುತ್ತಿವೆ.

ಬಂಡೆಕಲ್ಲುಗಳಿಗೆ ಬೀಳುವ ಬಿಸಿಲು ಮತ್ತಷ್ಟು ಪ್ರಖರತೆಯನ್ನು ಹೆಚ್ಚಿಸಿದೆ. ರಸ್ತೆಯು ಬಿಸಿಯಾಗುವುದರ ಜತೆ ವಾಹನ ಸಂಚಾರ ಸಮಯ ವಾಹನಗಳು ಉಗುಳುವ ಹೊಗೆ ಬಿಸಿಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಇಷ್ಟಿದ್ದರೂ ಇಲ್ಲಿನ ವ್ಯೆ ಪಾಯಿಂಟ್‌ಗಳಲ್ಲಿ ಈಗಲೂ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸುವುದು, ಧೂಮಪಾನ, ಮದ್ಯಪಾನ ಮೊದಲಾದ ಚಟುವಟಿಕೆಗಳನ್ನು ನಡೆಸುವುದು ಕಂಡುಬರುತ್ತಿದೆ. ಚಾರ್ಮಾಡಿ ಘಾಟಿಯ ಸುತ್ತಲ ಅರಣ್ಯ ಒಣಗಿದ ಸ್ಥಿತಿಯಲ್ಲಿರುವ ಕಾರಣ ಇಲ್ಲಿ ಒಂದು ಕಿಡಿ ಬೆಂಕಿ ಬಿದ್ದರೂ ಅದು ಕಾಡ್ಗಿಚ್ಚಾಗಿ ಮಾರ್ಪಡುವ ಸಾಧ್ಯತೆ ಇದೆ. ಇಲ್ಲಿನ ಪರಿಸರದಲ್ಲಿ ಪ್ರವಾಸಿಗರು ಧೂಮಪಾನ ಮಾಡುವುದು ಮತ್ತಷ್ಟು ಅಪಾಯಕಾರಿ. ಒಣಗಿರುವ ಹುಲ್ಲಿಗೆ ಬೆಂಕಿ ತಗಲಿದರೆ ಅದು ಕಾಡನ್ನು ಆವರಿಸುವ ಸಾಧ್ಯತೆ ಇದೆ. ಕಳೆದ ವರ್ಷ ಚಾರ್ಮಾಡಿ ಘಾಟಿ ಪರಿಸರದಲ್ಲಿ ಅನೇಕ ಬಾರಿ ಬೆಂಕಿ ಕಂಡುಬಂದಿತ್ತು ಹಾಗೂ ಇಲಾಖೆ ಅದನ್ನು ಹತೋಟಿಗೆ ತರಲು ಹರಸಾಹಸ ನಡೆಸಿತ್ತು.

ಈ ಬಾರಿಯೂ ಬೆಂಕಿ ರೇಖೆಯನ್ನು ಇಲಾಖೆ ವತಿಯಿಂದ ರಚಿಸಲಾಗಿದೆ ಆದರೆ ಪ್ರಸಕ್ತ ಬೆಂಕಿ ರೇಖೆ ರಚಿಸಿದ ಭಾಗಗಳಲ್ಲಿ ಸಾಕಷ್ಟು ಒಣಹುಲ್ಲು ತರಗೆಲೆಗಳು ಕಂಡು ಬರುತ್ತಿವೆ. ಘಾಟಿ ಮೂಲಕ ಪ್ರಯಾಣಿಸುವ ಪ್ರವಾಸಿಗರು ಬೆಂಕಿಯ ಉಪಯೋಗ ಮಾಡದಂತೆ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.

ವನ್ಯಜೀವಿಗಳ ತಾಣ:ಚಾರ್ಮಾಡಿ ಅರಣ್ಯ ಸೇರಿದಂತೆ ಘಾಟಿ ರಸ್ತೆಯ ಇಕ್ಕೆಲಗಳಲ್ಲಿರುವ ಅರಣ್ಯ ವನ್ಯಜೀವಿಗಳ ತಾಣವಾಗಿದೆ. ನೀರು ಹಾಗೂ ತಂಪು ಪ್ರದೇಶವನ್ನು ಅರಸುತ್ತಾ ತಿರುಗಾಟ ನಡೆಸುವ ಇವು ಕೆಲವೊಮ್ಮೆ ರಸ್ತೆಯನ್ನು ದಾಟುತ್ತವೆ. ಈ ಕಾರಣದಿಂದ ಘಾಟಿ ಪ್ರದೇಶದ ಪ್ರಯಾಣ ಸಂದರ್ಭ ಹೆಚ್ಚಿನ ಎಚ್ಚರಿಕೆ ಮತ್ತು ವನ್ಯಜೀವಿಗಳಿಗೆ, ಪರಿಸರಕ್ಕೆ ತೊಂದರೆಯಾಗದಂತೆ ಸಾಗುವುದು ಅಗತ್ಯವಾಗಿದೆ.

ಘಾಟಿ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು ಬೀಡಿ, ಸಿಗರೇಟು ಸೇದಿ ಎಸೆಯುವುದರಿಂದ ಅದರ ಕಿಡಿ ಹಾರಿ ಹುಲ್ಲು, ಒಣಗಿದ ತ್ಯಾಜ್ಯ ವಸ್ತುಗಳಿಗೆ ತಗಲಿದಾಗ ಬೆಂಕಿ ಹರಡುವ ಸಾಧ್ಯತೆ ಹೆಚ್ಚು. ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳು ಗಸ್ತು ತಿರುಗಬೇಕು.

-ಲೋಹಿತ್ ಬಿದ್ರಹಳ್ಳಿ, ಪರಿಸರವಾದಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ತನು ಕೊಟ್ಟಿಗೆಹಾರ

contributor

Similar News