ಸಿಬಿಐಗೆ ರಾಜ್ಯದಲ್ಲಿ ಸಾಮಾನ್ಯ ಅನುಮತಿ ನಿರಾಕರಣೆ: ಪಕ್ಷಪಾತಿ ರಾಜಕೀಯದ ವಿರುದ್ಧ ದಿಟ್ಟ ಹೆಜ್ಜೆ?

ಈ ಹಿಂದೆ ಮಿಜೋರಾಂ, ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಪಂಜಾಬ್, ರಾಜಸ್ಥಾನ, ಕೇರಳ, ಜಾರ್ಖಂಡ್, ಮೇಘಾಲಯ, ತೆಲಂಗಾಣ ಸಿಬಿಐಗೆ ನೀಡಲಾಗಿದ್ದ ಮುಕ್ತ ಅನುಮತಿ ಹಿಂಪಡೆದಿದ್ದವು. ಕಳೆದ ವರ್ಷ ತಮಿಳುನಾಡು ಕೂಡ ಅನುಮತಿ ಹಿಂಪಡೆದಿದ್ದು, ಅಂಥ ರಾಜ್ಯಗಳ ಸಾಲಿನಲ್ಲಿ 10ನೆಯದಾಗಿತ್ತು. ಈಗ ಕರ್ನಾಟಕ ರಾಜ್ಯ ಕೂಡ ಸಿಬಿಐಗೆ ನೀಡಿದ್ದ ಮುಕ್ತ ತನಿಖೆ ಅನುಮತಿಯನ್ನು ಹಿಂಪಡೆದಿದೆ.

Update: 2024-09-28 07:34 GMT

ರಾಜ್ಯ ಸರಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಕರ್ನಾಟಕ ರಾಜ್ಯದೊಳಗೆ ತನಿಖೆ ನಡೆಸಲು ಸಿಬಿಐಗೆ ನೀಡಲಾಗಿದ್ದ ಮುಕ್ತ ಅನುಮತಿಯನ್ನು ರಾಜ್ಯ ಸರಕಾರ ಗುರುವಾರ ವಾಪಸ್ ಪಡೆದುಕೊಂಡಿದೆ. ಸಿಬಿಐನ ಪಕ್ಷಪಾತಿ ಕೈಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಇದರಿಂದ ರಾಜ್ಯದಲ್ಲಿ ಯಾವುದೇ ಪ್ರಕರಣದ ತನಿಖೆ ನಡೆಸಲು ಸಿಬಿಐ, ರಾಜ್ಯ ಸರಕಾರದ ಒಪ್ಪಿಗೆ ಪಡೆಯುವುದು ಅನಿವಾರ್ಯವಾಗಿದೆ.

ಇದರೊಂದಿಗೆ ಕರ್ನಾಟಕ, ಸಿಬಿಐಗೆ ನೀಡಲಾಗಿದ್ದ ಮುಕ್ತ ಅನುಮತಿ ವಾಪಸ್ ತೆಗೆದುಕೊಳ್ಳುತ್ತಿರುವ 11ನೇ ರಾಜ್ಯವಾಗಿದೆ.

ಹಿಂದೆ ಬಹುತೇಕ ಎಲ್ಲಾ ರಾಜ್ಯಗಳು ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ್ದವು. ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ 2014ರಿಂದ ಸನ್ನಿವೇಶ ಬದಲಾಗಲು ಶುರುವಾಯಿತು.

ಸಿಬಿಐಗೆ ಸಾಮಾನ್ಯ ಅನುಮತಿ ಹಿಂದೆಗೆದುಕೊಂಡ ಮೊದಲ ರಾಜ್ಯವೆಂದರೆ ಮಿಜೋರಾಂ. 2015ರಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಅನುಮತಿ ಹಿಂಪಡೆಯಲಾಯಿತು. ಈಗ ಅಲ್ಲಿ ಸರಕಾರ ಬದಲಾದರೂ ಈ ನಿರ್ಧಾರ ಬದಲಾಗಿಲ್ಲ.

ಅದಾದ ಬಳಿಕ ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಪಂಜಾಬ್, ರಾಜಸ್ಥಾನ, ಕೇರಳ, ಜಾರ್ಖಂಡ್, ಮೇಘಾಲಯ, ತೆಲಂಗಾಣ ಅನುಮತಿ ಹಿಂಪಡೆದವು. ಕಳೆದ ವರ್ಷ ತಮಿಳುನಾಡು ಕೂಡ ಅನುಮತಿ ಹಿಂಪಡೆದಿದ್ದು, ಅಂಥ ರಾಜ್ಯಗಳ ಸಾಲಿನಲ್ಲಿ 10ನೆಯದಾಗಿತ್ತು. ಈಗ ಕರ್ನಾಟಕ ರಾಜ್ಯ ಕೂಡ ಸಿಬಿಐಗೆ ನೀಡಿದ್ದ ಮುಕ್ತ ತನಿಖೆ ಅನುಮತಿಯನ್ನು ಹಿಂಪಡೆದಿದೆ.

ಈ ಹಿಂದೆ ಎಲ್ಲಾ ರಾಜ್ಯಗಳು ಹೇಳಿದ್ದಂತೆ, ಸಿಬಿಐ ದುರ್ಬಳಕೆಯಾಗುತ್ತಿದೆ ಎಂಬ ಕಾರಣವನ್ನೇ ಕರ್ನಾಟಕ ಕೂಡ ಅನುಮತಿ ವಾಪಸ್ ಪಡೆಯುವಾಗ ಉಲ್ಲೇಖಿಸಿದೆ.

ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ರಾಜ್ಯದೊಳಗೆ ಮುಕ್ತವಾಗಿ ಸಿಬಿಐ ತನಿಖೆ ನಡೆಸಬಹುದಿತ್ತು. ಮುಕ್ತ ತನಿಖೆ ನಡೆಸಲು ಕರ್ನಾಟಕ ಸರಕಾರವೇ ಈ ಹಿಂದೆ ಅವಕಾಶ ಮಾಡಿಕೊಟ್ಟಿತ್ತು.

ದಿಲ್ಲಿ ವಿಶೇಷ ಪೊಲೀಸ್ ಸ್ಥಾಪನೆ ಆ್ಯಕ್ಟ್ 1946 ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ತನಿಖೆ ನಡೆಸಲು ಸಿಬಿಐಗೆ ಮುಕ್ತ ಅವಕಾಶ ನೀಡಲಾಗಿತ್ತು. ಈಗ ಅಂಥ ಸಾಮಾನ್ಯ ಅನುಮತಿಯನ್ನು ಸರಕಾರ ಹಿಂಪಡೆದಿದೆ.

ಸಾಮಾನ್ಯ ಅನುಮತಿ ಎಂದರೇನು?

ಸಿಬಿಐಗೆ ರಾಜ್ಯ ಸರಕಾರ ನೀಡುವ ಅನುಮತಿ ಎರಡು ರೂಪಗಳಲ್ಲಿ ಇರಬಹುದು, ಒಂದು, ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದ್ದು ಇಲ್ಲವೇ ಸಾಮಾನ್ಯ ಅನುಮತಿ.

ಸಾಮಾನ್ಯ ಅನುಮತಿ ಎಂಬುದು ಹೆಸರೇ ಸೂಚಿಸುವಂತೆ, ಸಿಬಿಐಗೆ ರಾಜ್ಯದೊಳಗೆ ತನಿಖೆಗೆ ನೀಡಲಾಗಿರುವ ಮುಕ್ತ ಅನುಮತಿಯಾಗಿದೆ.

ರಾಜ್ಯ ಸರಕಾರದ ಸಾಮಾನ್ಯ ಅನುಮತಿಯನ್ನು ಸಿಬಿಐ ಹೊಂದಿಲ್ಲದೆ ಇದ್ದಲ್ಲಿ ಅದು ಪ್ರತೀ ಪ್ರಕರಣದ ತನಿಖೆಗೂ ರಾಜ್ಯ ಸರಕಾರದ ಒಪ್ಪಿಗೆಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುತ್ತದೆ. ರಾಜ್ಯ ಸರಕಾರದ ಒಪ್ಪಿಗೆ ಸಿಗುವ ಮೊದಲು ಅದು ತನಿಖೆಗೆ ಇಳಿಯಲು ಅವಕಾಶವಿರುವುದಿಲ್ಲ.

ಸಾಮಾನ್ಯ ಅನುಮತಿಯನ್ನು ಹಿಂದೆಗೆದುಕೊಳ್ಳುವುದು ಎಂದರೆ, ಯಾವುದೇ ರಾಜ್ಯದಲ್ಲಿ ಆ ರಾಜ್ಯ ಸರಕಾರದ ಪೂರ್ವಾನುಮತಿ ಇಲ್ಲದೆ ಸಿಬಿಐ ಯಾವುದೇ ಹೊಸ ಪ್ರಕರಣವನ್ನು ದಾಖಲಿಸಲು ಸಾಧ್ಯವಾಗುವುದಿಲ್ಲ.ಆದರೆ ಸಾಮಾನ್ಯ ಅನುಮತಿಯನ್ನು ಹಿಂದೆಗೆದುಕೊಳ್ಳುವ ಮೊದಲು ದಾಖಲಾಗಿದ್ದ ಪ್ರಕರಣಗಳ ತನಿಖೆಯನ್ನು ಸಿಬಿಐ ಮುಂದುವರಿಸಲು ಅವಕಾಶವಿರುತ್ತದೆ ಎಂದು ಹೇಳಲಾಗುತ್ತದೆ.

ಸಿಬಿಐಗೆ ಸಾಮಾನ್ಯ ಅನುಮತಿ ಹಿಂಪಡೆಯುವುದರಿಂದ ಸಹಜವಾಗಿಯೇ ರಾಜ್ಯದೊಳಗೆ ತನಿಖಾ ಏಜೆನ್ಸಿ ಬಲಹೀನವಾಗುತ್ತದೆ.

ಆದರೆ, ಇತ್ತೀಚಿನ ಕೋಲ್ಕತಾ ಹೈಕೋರ್ಟ್ ಆದೇಶದಲ್ಲಿ, ಯಾವುದೇ ರಾಜ್ಯದಲ್ಲೂ ಕೇಂದ್ರ ಸರಕಾರಿ ನೌಕರರ ವಿರುದ್ಧದ ಪ್ರಕರಣವಾಗಿದ್ದಲ್ಲಿ ತನಿಖೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಸಾಮಾನ್ಯ ಅನುಮತಿ ಹಿಂಪಡೆಯುವುದು ರಾಜ್ಯ ಸರಕಾರದವರು ಭಾಗಿಯಾಗಿರುವ ಪ್ರಕರಣಗಳಲ್ಲಿ ಮಾತ್ರ ಅನ್ವಯಿಸುತ್ತವೆ ಎಂದು ತೀರ್ಪು ಹೇಳಿದೆ. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಕರ್ನಾಟಕ ಸರಕಾರ ಸಿಬಿಐಗೆ ಸಾಮಾನ್ಯ ಅನುಮತಿ ವಾಪಸ್ ಪಡೆಯುವ ನಿರ್ಧಾರವನ್ನು ಗುರುವಾರ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದೆ. ಅದಾದ ಬಳಿಕ ವಿಚಾರ ಪ್ರಕಟಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸಿಬಿಐನ ಪಕ್ಷಪಾತಿ ಕ್ರಮಗಳಿಗೆ ತಡೆಯೊಡ್ಡಲು ಸರಕಾರ ಬಯಸಿದೆ ಎಂದು ಹೇಳಿದ್ದಾರೆ. ಅಲ್ಲದೆ ಇದು ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನ ಕೂಡ ಹೌದು ಎಂದು ಹೇಳಿದ್ದಾರೆ.

ರಾಜ್ಯ ಸರಕಾರ ಇಂಥದೊಂದು ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ಅದು ಸಿಎಂ ಸಿದ್ದರಾಮಯ್ಯ ಅವರನ್ನು ಸಿಬಿಐ ತನಿಖೆಯಿಂದ ರಕ್ಷಿಸುವ ಯತ್ನ ಎಂದು ಹೇಳುವುದೂ ಶುರುವಾಗಿದೆ. ಆದರೆ ಅದಕ್ಕೆ ಈಗಾಗಲೇ ಪಾಟೀಲ್ ಸಮಜಾಯಿಷಿ ನೀಡಿದ್ದಾರೆ. ಈ ನಿರ್ಧಾರದ ಹಿಂದಿನ ನಿಜವಾದ ಕಾರಣದ ಬಗ್ಗೆ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಅಕ್ರಮ ಆರೋಪಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಸಂಪುಟ ಸಭೆ ಬಳಿಕ ಪಾಟೀಲ್ ಹೇಳಿದ್ದಾರೆ.

‘‘ನಾವು ಸಿಬಿಐ ತನಿಖೆಗೆ ವಹಿಸಿದ ಯಾವ ಪ್ರಕರಣದಲ್ಲಿಯೂ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ. ಇದರಿಂದ ಅನೇಕ ಪ್ರಕರಣಗಳು ಇನ್ನೂ ಬಾಕಿ ಇವೆ. ಅಷ್ಟೇ ಅಲ್ಲದೆ, ನಾವು ಕಳುಹಿಸಿದ ಹಲವಾರು ಪ್ರಕರಣಗಳ ತನಿಖೆ ನಡೆಸಲು ಸಿಬಿಐ ನಿರಾಕರಿಸಿದೆ. ಇಂತಹ ಹಲವಾರು ನಿದರ್ಶನಗಳಿವೆ’’ ಎಂದು ಪಾಟೀಲ್ ಸಿಬಿಐ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

ಕೇಂದ್ರ ಸರಕಾರ ರಾಜಕೀಯ ಕಾರಣಕ್ಕಾಗಿ ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅನೇಕ ಪ್ರಕರಣಗಳಲ್ಲಿ ಸಿಬಿಐ ಪೂರ್ವಗ್ರಹ ಪೀಡಿತವಾಗಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದೇವೆ ಎಂದಿದ್ದಾರೆ.

ಪರೇಶ್ ಮೇಸ್ತಾ ಸಾವು ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೊಡಲಾಗಿತ್ತು. ಆದರೆ ಈ ಯಾವುದೇ ಪ್ರಕರಣಗಳ ತನಿಖೆಯನ್ನು ಸಿಬಿಐ ಈವರೆಗೆ ಪೂರ್ಣಗೊಳಿಸುವುದು ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಕ್ರಿಮಿನಲ್ ಪ್ರಕರಣಗಳ ಬಗ್ಗೆ ರಾಜ್ಯದಲ್ಲಿ ತನಿಖೆ ನಡೆಸಲು ಅವಕಾಶವಿರದಂತೆ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಗುರುವಾರದ ಸಂಪುಟ ಸಭೆ ಮತ್ತೊಂದು ಮಹತ್ವದ ಬೆಳವಣಿಗೆಯ ಹಿನ್ನೆಲೆಯಿಂದಲೂ ಗಮನ ಸೆಳೆದಿದೆ.

ರಾಜ್ಯಪಾಲರು ಸಣ್ಣ ಸಣ್ಣ ವಿಷಯಗಳಿಗೂ ಸರಕಾರಕ್ಕೆ ಪತ್ರ ಬರೆದು ವಿವರಣೆ ಕೇಳುತ್ತಿರುವ ಬಗ್ಗೆ, ಆಡಳಿತದ ಪ್ರತೀ ಹಂತದಲ್ಲೂ ಅವರು ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆ ಸಂಪುಟ ಸಭೆ ತೀವ್ರ ಕಳವಳ ವ್ಯಕ್ತಪಡಿಸಿತು ಎಂದು ಪಾಟೀಲ್ ಹೇಳಿದ್ದಾರೆ.

ಕ್ಯಾಬಿನೆಟ್‌ಗೆ ಮಾಹಿತಿ ನೀಡದೆ ರಾಜ್ಯಪಾಲರ ಯಾವುದೇ ಪತ್ರಕ್ಕೆ ವಿವರಣೆ ನೀಡಬಾರದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ.

ರಾಜ್ಯಪಾಲರು ಸರಕಾರಕ್ಕೆ ಪದೇ ಪದೇ ಪತ್ರಗಳನ್ನು ಬರೆಯುತ್ತಿದ್ದಾರೆ, ತಕ್ಷಣವೇ ಮಾಹಿತಿ ನೀಡಬೇಕೆಂಬ ಸೂಚನೆಯನ್ನೂ ಕೊಡಲಾಗುತ್ತಿದೆ. ಆದರೆ ರಾಜ್ಯಪಾಲರಿಗೆ ಯಾವುದೇ ಮಾಹಿತಿಯನ್ನು ಕಳುಹಿಸುವಾಗ ಸಂಪುಟದ ನಿರ್ಧಾರದ ಪ್ರಕಾರ ಮುಂದುವರಿಯಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.

ಈ ಹಿಂದೆ ಮುಖ್ಯ ಕಾರ್ಯದರ್ಶಿಗಳು ಇದನ್ನು ವಾಡಿಕೆಯಂತೆ ಕಳುಹಿಸುತ್ತಿದ್ದರು, ಆದರೆ ಇನ್ನು ಮುಂದೆ ರಾಜ್ಯಪಾಲರ ಯಾವುದೇ ಪ್ರಶ್ನೆಗಳಿಗೆ ಸಂಬಂಧಿಸಿ ಸರಕಾರ ಮತ್ತು ಅವರ ನಡುವಿನ ಯಾವುದೇ ಪತ್ರವ್ಯವಹಾರ ಕ್ಯಾಬಿನೆಟ್ ನಿರ್ಧಾರದ ನಂತರವೇ ಆಗುತ್ತದೆ ಎಂದು ಪಾಟೀಲ್ ಹೇಳಿದ್ದಾರೆ.

ಇತ್ತೀಚೆಗೆ ರಾಜ್ಯಪಾಲರು ಕ್ಷುಲ್ಲಕ ವಿಷಯಗಳ ಬಗ್ಗೆ ವರದಿ ಕೇಳಿ ಪತ್ರಗಳನ್ನು ಬರೆಯುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಮುಖ್ಯ ಕಾರ್ಯದರ್ಶಿ ಅವರಿಗೆ ರಾಜ್ಯಪಾಲರು ಈಚೆಗೆ ಬರೆದಿರುವ ಮತ್ತೊಂದು ಪತ್ರದಲ್ಲಿ ಪ್ರತಿಪಕ್ಷದ ಪ್ರಮುಖರ ವಿರುದ್ಧದ ಪ್ರಕರಣದ ತನಿಖೆಗೆ ಅನುಮತಿ ಕೋರಿದ್ದ ಪ್ರಸ್ತಾವದ ರಹಸ್ಯ ಮಾಹಿತಿ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದ್ದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ವಿರುದ್ಧ ಈ ಹಿಂದೆ ಕೇಳಿಬಂದ ಆರೋಪಗಳ ಸಂಬಂಧ, ಲೋಕಾಯುಕ್ತ ಪೊಲೀಸರು ಮುಂದಿನ ಪ್ರಕ್ರಿಯೆಗೆ ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವದ ಮಾಹಿತಿ ಸೋರಿಕೆಯಾದದ್ದರ ಬಗ್ಗೆ ಆಕ್ಷೇಪಿಸಿ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಪತ್ರದಲ್ಲಿ ರಾಜ್ಯಪಾಲರು ಕ್ಯಾಬಿನೆಟ್ ಟಿಪ್ಪಣಿ, ಪೂರಕ ದಾಖಲೆಗಳು ಮತ್ತು ಮಾಹಿತಿಗಳ ಮೂಲದೊಂದಿಗೆ ಉತ್ತರ ಕೋರಿದ್ದರು.

ರಾಜ್ಯಪಾಲರ ಪತ್ರದ ನಂತರ ತನಿಖೆ ನಡೆಸಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸರಕಾರ ರಚಿಸಿದ ದಿನದಿಂದಲೇ ಬಿಜೆಪಿಯ ಅಸಹನೆ ಶುರುವಾಗಿದೆ. ಜನಾದೇಶ ಪಡೆದ ಸರಕಾರವೇ ಉಳಿಯುವುದಿಲ್ಲ ಎಂಬ ಜನವಿರೋಧಿ ಹೇಳಿಕೆಯನ್ನು ಬಿಜೆಪಿ ಮುಖಂಡರು ಈ ಸರಕಾರ ಬಂದ ದಿನದಿಂದಲೇ ಹೇಳುತ್ತಿದ್ದಾರೆ. ಜೆಡಿಎಸ್‌ನ ಕುಮಾರಸ್ವಾಮಿ ಕೂಡ ಅದೇ ಧಾಟಿಯಲ್ಲಿ ಮಾತಾಡುತ್ತಿದ್ದಾರೆ.

ಪೂರ್ಣ ಬಹುಮತವಿರುವ ಸರಕಾರ ಐದು ವರ್ಷಗಳ ಮೊದಲೇ ಉರುಳುತ್ತದೆ ಎಂದು ಹೇಳುವುದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಲ್ಲವೇ?

ಲೋಕಸಭಾ ಚುನಾವಣೆ ಬಳಿಕವಂತೂ ಇನ್ನೇನು ಉರುಳಿಸಿಯೇ ಬಿಡುತ್ತೇವೆ ಎಂಬಂತಹ ಧಾವಂತ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಕಾಣುತ್ತಿದೆ. ಬಿಜೆಪಿಯ ದಿಲ್ಲಿ ವರಿಷ್ಠರ ಪೂರ್ಣ ಸಹಕಾರ, ಪ್ರೋತ್ಸಾಹ ಇದಕ್ಕಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಸಿದ್ದರಾಮಯ್ಯ ಸರಕಾರ ರಾಜ್ಯದ ಜನರಿಗೆ, ಬಡವರಿಗೆ ನೆರವಾಗಲು ಗ್ಯಾರಂಟಿಗಳನ್ನು ಕೊಟ್ಟಿದ್ದನ್ನೂ ವಿರೋಧಿಸುವ ಜನವಿರೋಧಿ ರಾಜಕೀಯ ಬಿಜೆಪಿ, ಜೆಡಿಎಸ್‌ನದ್ದು.

ಅಂದರೆ ರಾಜ್ಯದ ಜನರಿಗೆ ಏನೂ ಸಿಗಬಾರದು ಎಂಬಂತಹ ಖಟ್ಟರ್ ಜನವಿರೋಧಿ ಧೋರಣೆಯೇ?

ಈಗ ಸಿದ್ದರಾಮಯ್ಯ ಸರಕಾರ ಕೂಡ ಎಲ್ಲದಕ್ಕೂ ಸಿದ್ಧವಾಗಿರಬೇಕು ಎಂದು ನಿರ್ಧರಿಸಿದ ಹಾಗೆ ಕಾಣುತ್ತಿದೆ. ಸೂಕ್ತ ತಿರುಗೇಟು ಕೊಡಲು ರಾಜಕೀಯವಾಗಿ, ಆಡಳಿತಾತ್ಮಕವಾಗಿ ಸನ್ನದ್ಧವಾಗಿರುವುದು ಅಗತ್ಯ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಿರ್ಧರಿಸಿದ ಹಾಗೆ ಕಾಣುತ್ತಿದೆ. ಅದರ ಭಾಗವಾಗಿಯೇ ಈಗ ಸಿಬಿಐಗೆ ಕೊಟ್ಟಿದ್ದ ಸಾಮಾನ್ಯ ಅನುಮತಿಯನ್ನು ವಾಪಸ್ ಪಡೆಯಲಾಗಿದೆ.

ಗುರುವಾರದ ಸಂಪುಟ ಸಭೆ ರಾಜಭವನ ಹಾಗೂ ಮೋದಿ ಸರಕಾರದ ವಿರುದ್ಧ ನೇರ ಸಮರಕ್ಕೆ ತಯಾರಾದಂಥ ಸೂಚನೆ ಕೊಟ್ಟಿರುವಂತಿದೆ. ಈ ಸಂಘರ್ಷ ಎಲ್ಲಿಗೆ ಮುಟ್ಟಬಹುದು ಎಂಬುದು ಸದ್ಯದ ಕುತೂಹಲ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News