ವಿಪರೀತ ಮಳೆ: ಕೊಡಗಿನಲ್ಲಿ ಕಾಫಿ ಬೆಳೆಗೆ ಅಪಾರ ಹಾನಿ

Update: 2024-07-25 07:26 GMT

ಮಡಿಕೇರಿ : ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೋಟ್ಯಂತರ ರೂ. ನಷ್ಟವಾಗಿದೆ. ಇದರ ನಡುವೆಯೇ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಬೆಳೆಗೂ ಹೆಚ್ಚು ಹಾನಿಯಾಗಿದ್ದು, ಬೆಳೆಗಾರರು ಆತಂಕಗೊಂಡಿದ್ದಾರೆ.

ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 1,664.45 ಮಿ.ಮೀ. ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 863.80 ಮಿ.ಮೀ. ಮಳೆಯಾಗಿತ್ತು. ಈ ಬಾರಿಯ ಅಧಿಕ ಮಳೆ ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಆತಂಕ ತಂದೊಡ್ಡಿದೆ.

ಈ ಬಾರಿ ಕಾಫಿಗೆ ಉತ್ತಮ ಬೆಲೆ ಬಂದಿತ್ತು. ಆದರೆ, ಇದರಿಂದ ಬೆಳೆಗಾರರಿಗೆ ಉತ್ತಮ ಪ್ರಯೋಜನವಾಗಲಿಲ್ಲ. ಕಾಫಿಗೆ ಉತ್ತಮ ಬೆಲೆ ಬರುವಷ್ಟರಲ್ಲಿ ಶೇ.80ರಷ್ಟು ಬೆಳೆಗಾರರು ಕಾಫಿ ಮಾರಾಟ ಮಾಡಿದ್ದರು. ಶೇ.20ರಷ್ಟು ರೈತರಿಗೆ ಮಾತ್ರ ಉತ್ತಮ ಬೆಲೆ ದೊರಕಿತ್ತು. ಇದರ ನಡುವೆ ಕಳೆದ ವರ್ಷ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿತ್ತು. ಆದರೂ ಸರಕಾರದಿಂದ ಜಿಲ್ಲೆಯ ರೈತರಿಗೆ ಪರಿಹಾರವೂ ದೊರೆತಿಲ್ಲ. ಇದರ ನಡುವೆಯೇ ಮಳೆಯೂ ರೈತರಿಗೆ ಗಾಯದ ಮೇಲೆ ಬರೆ ಎಂಬಂತೆ ಏಟು ನೀಡಿದೆ.

ಈ ವರ್ಷ ಆರಂಭದಲ್ಲಿ ಉತ್ತಮ ಮಳೆಯಾಗಲಿಲ್ಲ. ಜಿಲ್ಲೆಯ ಜನತೆ ಕಾಫಿ ಗಿಡಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿದರೂ ಬ್ಯಾಕಿಂಗ್ ನೀಡಲು ಮತ್ತೆ ಜಲಮೂಲಗಳಲ್ಲಿ ನೀರಿನ ಕೊರತೆ ಉಂಟಾಯಿತು. ಬ್ಲಾಸಂ ಕೂಡ ನಿರೀಕ್ಷಿತವಾಗಿ ಆಗಲಿಲ್ಲ. ಪರಿಣಾಮ ಮಾರ್ಚ್, ಎಪ್ರಿಲ್‌ನಲ್ಲಿನ ವೀಪರೀತ ಬಿಸಿಲಿಗೆ ಅರ್ಧ ಫಸಲು ಗಿಡದಲ್ಲಿಯೇ ನಾಶವಾಯಿತು. ಇದೀಗ ನಿರಂತರ ಮಳೆಯಿಂದಾಗಿ ಹೆಚ್ಚಿನ ತೊಂದರೆ ಉಂಟಾಗಿದೆ.

ಬೆಳೆಗಳಿಗೆ ರೋಗಕಾರಕ: ಈ ಮಳೆ ಬೆಳೆಗಳಿಗೆ ರೋಗಕಾರಕವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಿಡುವು ನೀಡಿದರೆ ಬೆಳೆ ಉಳಿಸಿಕೊಳ್ಳಲು ಅನುಕೂಲವಾಗಲಿದೆ. ಜುಲೈ ತಿಂಗಳಿನಲ್ಲಿಯೇ ಬಹುತೇಕ ಕಡೆಗಳಲ್ಲಿ ಕಾಫಿ ಕೊಳೆ ರೋಗ ಕಾಣಿಸಿಕೊಳ್ಳುತ್ತಿರುವುದರೊಂದಿಗೆ ಉದುರುವಿಕೆಯೂ ಹೆಚ್ಚಾಗುತ್ತಿದೆ. ಇನ್ನೂ ಒಂದೂವರೆ ತಿಂಗಳು ಮಳೆಗಾಲ ಮುಂದುವರಿಯುವ ಸಾಧ್ಯತೆಯಿದ್ದು, ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಫಸಲು ಉದುರುವಿಕೆ: ಹಲವೆಡೆಗಳಲ್ಲಿ ಕಾಫಿಗೆ ಕೊಳೆ ರೋಗ ಕಾಣಿಸಿಕೊಂಡಿದೆಯಲ್ಲದೆ ಫಸಲು ಉದುರುವಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಗಿಡಗಳಲ್ಲಿ ಕಾಫಿ ಕಾಯಿಗಟ್ಟಿದ್ದು, ದಪ್ಪವಾಗುತ್ತಿವೆ. ಈ ಕಾಫಿ ಗೊಂಚಲಿನಲ್ಲೇ ಕೊಳೆತು ನಾಶವಾಗುತ್ತಿರುವುದು ಕಂಡು ಬಂದಿದೆ. ಇದರೊಂದಿಗೆ ಉದುರುವಿಕೆಯೂ ಅಧಿಕವಾಗುತ್ತಿದ್ದು, ಬೆಳೆಗಾರರು ಆತಂಕ ಪಡುವಂತಾಗಿದೆ.

ಮಳೆ ಹೆಚ್ಚು-ಆತಂಕ: ಶ್ರೀಮಂಗಲ ವಿಭಾಗದ ಕುರ್ಚಿ, ಬೀರುಗ, ಕುಟ್ಟ, ನಾಲ್ಕೇರಿ, ಪಲ್ಲೇರಿ, ನೆಮ್ಮಲೆ, ಬಿರುನಾಣಿ, ತೆರಾಲು, ಪರಕಟಗೇರಿ, ಬಾಡಗರಕೇರಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಈ ಪರಿಸ್ಥಿತಿ ಎದುರಾಗಿದೆ. ಪ್ರಸಕ್ತ ಕಾಫಿಗೆ ಒಂದಷ್ಟು ದರ ಹೆಚ್ಚಿದ್ದರೂ, ಸಮಸ್ಯೆಗಳು ಮಾತ್ರ ಹಲವಷ್ಟು ಎದುರಾಗುತ್ತಿವೆ. ದಕ್ಷಿಣ ಕೊಡಗಿನ ಶ್ರೀಮಂಗಲ, ಕುರ್ಚಿ, ಬೀರುಗ, ಟಿ. ಶೆಟ್ಟಿಗೇರಿ, ನೆಮ್ಮಲೆ ಭಾಗದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಕಾಫಿ ಬೆಳೆ ನೆಲಕಚ್ಚಿದೆ. ಇದಲ್ಲದೆ ಜಿಲ್ಲೆ ಪಾಲಂಗಾಲ, ಕೆದಮುಳ್ಳೂರು, ಹೆಗ್ಗಳ, ತೋರ, ಕಂಡಂಗಾಲ, ಬಾಡಗ, ಒಂಟಿಯಂಗಡಿ, ನಾಪೊಕ್ಲು, ಕಕ್ಕಬ್ಬೆ, ನೆಲಜಿ ವಿಭಾಗಗಳಲ್ಲೂ ಕಾಫಿ ನೆಲ ಕಚ್ಚಿದೆ. ಜೂನ್, ಜುಲೈನಲ್ಲಿ ಮಳೆಯ ಅಬ್ಬರಕ್ಕೆ ಶೇ.8-10ರಷ್ಟು ಕಾಫಿ ಫಸಲು ಉದುರುವುದು ಸಾಮಾನ್ಯವಾದರೂ ಮಳೆ ಹೆಚ್ಚಾಗುತ್ತಲೇ ಇರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಕಾಫಿ ಮಾತ್ರವಲ್ಲದೆ ಕರಿಮೆಣಸು, ಅಡಿಕೆಗೂ ಈ ಮಳೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿ, ಕೊಳೆರೋಗ ಎದುರಾಗಿದೆ. ಶೀಘ್ರವೇ ಈ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಕೆಲಸವನ್ನು ಮಳೆ ಮಧ್ಯೆಯೇ ಹಲವು ತೋಟಗಳಲ್ಲಿ ಆರಂಭಿಸಿದ್ದರಾದರೂ ಹೆಚ್ಚಿನ ಪರಿಣಾಮವಿಲ್ಲ ಎನ್ನಲಾಗುತ್ತಿದೆ. ಸಾಕಷ್ಟು ಕಾಫಿ ಬೆಳೆಗಾರರು ಕ್ರಿಮಿನಾಶಕ ಸಿಂಪಡಣೆಗೆ ಮಳೆ ಬಿಡುವು ನೀಡುವುದನ್ನೇ ಕಾಯುತ್ತಿದ್ದಾರೆ.

ಶೀಘ್ರ ಕ್ರಮಕ್ಕೆ ಬೆಳೆಗಾರರ ಆಗ್ರಹ

ವನ್ಯಪ್ರಾಣಿಗಳ ಉಪಟಳ, ಕಾರ್ಮಿಕರ ಸಮಸ್ಯೆ, ಅಧಿಕ ಕೂಲಿ ಮತ್ತಿತರ ಸಮಸ್ಯೆಗಳ ಜೊತೆಯಲ್ಲೇ ಇದೀಗ ಮುಂದಿನ ಸಾಲಿನ ಫಸಲು ಈ ವೇಳೆಯಲ್ಲೇ ನೆಲಕಚ್ಚುತ್ತಿರುವುದು ಭವಿಷ್ಯದ ಬಗ್ಗೆ ಬೆಳೆಗಾರರು ಚಿಂತಿತರಾಗುವಂತಾಗಿದೆ. ಕೊಡಗು ಜಿಲ್ಲೆಯ ಜನರು ಬಹುತೇಕ ಕಾಫಿ ಬೆಳೆಯನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯ ಆರ್ಥಿಕತೆಯಲ್ಲಿ ಕಾಫಿಯೇ ಪ್ರಾಮುಖ್ಯತೆ ಪಡೆದಿದ್ದು, ಇದರ ಪರಿಣಾಮ ಇನ್ನಿತರ ಎಲ್ಲಾ ವಹಿವಾಟುಗಳ ಮೇಲೂ ಬೀರುವುದರಿಂದ ತ್ವರಿತವಾಗಿ ಕಾಫಿ ಮಂಡಳಿ, ಜಿಲ್ಲಾಡಳಿತ, ಸರಕಾರ ಬೆಳೆಗಾರರ ಈ ಸಮಸ್ಯೆ ಬಗ್ಗೆ ತ್ವರಿತ ಗಮನ ಹರಿಸಬೇಕಾಗಿದೆ ಎಂಬುದು ಬೆಳೆಗಾರರ ಆಗ್ರಹವಾಗಿದೆ.

ಕಾಫಿಗೆ ಕೊಳೆ ರೋಗ ಬಂದಿದೆ. ಬಿತ್ತನೆ ಬೀಜ ಕೊಳೆತು ಹೋಗಿದೆ. ಇದರೊಂದಿಗೆ ಪಾರಿವಾಳ ಹಾಗೂ ಗೀಜ ಪಕ್ಷಿಗಳ ಹಾವಳಿಯೂ ಹೆಚ್ಚಾಗಿದೆ. ಬಿತ್ತನೆ ನಂತರವೇ 40 ಇಂಚಿಗೂ ಅಧಿಕ ಮಳೆಯಾಗಿದೆ. ನನ್ನ ಬಳಿಯಿಂದಲೇ ಹಲವು ರೈತರೂ ಮರು ಬಿತ್ತನೆಗೆ ಬಿತ್ತನೆ ಬೀಜ ತೆಗೆದುಕೊಂಡು ಹೋಗಿದ್ದಾರೆ. ಕಾರ್ಮಿಕರ ಕೊರತೆ, ನಷ್ಟದ ನಡುವೆಯೂ ಗದ್ದೆ ಪಾಳು ಬಿಡಬಾರದೆಂಬ ಕಾರಣಕ್ಕೆ ಕೃಷಿ ಮಾಡುತ್ತಿದ್ದೇನೆ.

ಬಿ.ಪಿ. ರವಿಶಂಕರ್, ಪ್ರಗತಿಪರ ರೈತ, ಹುದೂರು, ಪೊನ್ನಂಪೇಟೆ

ನಿರಂತರವಾಗಿ ಸುರಿಯುತ್ತಿರುವ ಮಳೆ ಕಾಫಿ, ಕರಿಮೆಣಸು ಹಾಗೂ ಅಡಿಕೆ ಫಸಲಿಗೆ ಹಾನಿ ಉಂಟು ಮಾಡಿದೆ. ಇನ್ನೂ ಒಂದೂವರೆ ತಿಂಗಳು ಮಳೆ ಮುಂದುವರಿಯುವ ಆತಂಕವಿದ್ದು, ಬೆಳೆಗಾರರು ಪರದಾಡುವ ಸ್ಥಿತಿ ಬಂದಿದೆ. ಈ ಬಾರಿ ಆರಂಭದಲ್ಲಿ ತೀವ್ರ ಬಿಸಿಲಿನಿಂದಲೇ ಜಿಲ್ಲೆಯಲ್ಲಿ ಶೇ.40ರಷ್ಟು ಫಸಲು ನಾಶವಾಗಿದೆ. ಇದೀಗ ಮಳೆ ಮತ್ತೆ ಏಟು ನೀಡುತ್ತಿದೆ.

ಡಾ. ಸಣ್ಣುವಂಡ ಕಾವೇರಪ್ಪ, ಮಾಜಿ ಉಪಾಧ್ಯಕ್ಷ, ಕಾಫಿ ಮಂಡಳಿ

ದಕ್ಷಿಣ ಕೊಡಗಿನ ಬಹುತೇಕ ರೈತರ ಭತ್ತದ ಗದ್ದೆಗಳು ಈ ಬಾರಿ ಸುರಿದ ಭಾರೀ ಮಳೆಗೆ ನಷ್ಟಗೊಂಡಿವೆ. ಇದರಿಂದಾಗಿ ಭತ್ತ ಬೆಳೆಯುವ ರೈತ ಮತ್ತೊಮ್ಮೆ ಸಂಕಷ್ಟಕ್ಕೊಳಗಾಗಿದ್ದಾನೆ. ಆದರೂ ತನ್ನ ಭೂಮಿಯನ್ನು ಪಾಳು ಬಿಡಬಾರದೆಂಬ ಕಾರಣಕ್ಕೆ ರೈತ 2ನೇ ಬಾರಿಗೆ ತನ್ನ ಭತ್ತದ ಗದ್ದೆಯಲ್ಲಿ ಮರು ಬೀಜ ಬಿತ್ತನೆ ಅಣಿಯಾಗಿದ್ದಾರೆ. ಮಳೆಯಿಂದಾಗಿ ಭತ್ತದ ಗದ್ದೆಯಲ್ಲಿ ಬಿತ್ತಿದ್ದ ಭತ್ತದ ಬೀಜಗಳು ಮಳೆಯ ರಭಸಕ್ಕೆ ಕೊಚ್ಚಿ ಹೋಗಿವೆ. ಹಲವು ಭತ್ತದ ಗದ್ದೆಗಳಲ್ಲಿ ಬೀಜಗಳು ಕೊಳೆತು ಹೋಗಿವೆ. ಇದೀಗ ಮಳೆಯ ಅಬ್ಬರ ಕಡಿಮೆಯಾಗಿದ್ದು, ರೈತ ಮರು ಬಿತ್ತನೆಗೆ ತಯಾರಿ ನಡೆಸಿದ್ದಾನೆ. ಇದರಿಂದಾಗಿ ಮುಂದಿನ 20 ದಿನಗಳ ಕಾಲ ಬಿತ್ತನೆ ಮಾಡಿದ ಬೀಜ ಪೈರು ಬರುವ ತನಕ ರೈತ ಕೃಷಿ ಚಟುವಟಿಕೆ ನಡೆಸಲು ಕಾಯಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಂ ಇಸ್ಮಾಯಿಲ್ ಕಂಡಕರೆ

contributor

Similar News