ಹೆಚ್ಚಿದ ಬಿಸಿಲಿನ ಕಾವು: ಕುಂದಾಪುರದಲ್ಲಿ ಸಿಯಾಳಕ್ಕೂ ತತ್ವಾರ!

Update: 2024-04-17 06:45 GMT

ಕುಂದಾಪುರ, ಎ.16: ಕರಾವಳಿಯಾದ್ಯಂತ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಇಷ್ಟು ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಾಪಮಾನದಲ್ಲಿ ಬಾರೀ ಏರಿಕೆ ಕಂಡಿದ್ದು, ಬಿಸಿಯ ವಾತಾವರಣ ಜನರನ್ನು ಹೈರಾಣಾಗಿಸಿದೆ.

ಜನವರಿ ಮಾಸಾಂತ್ಯ, ಫೆಬ್ರವರಿ ಮೊದಲ ವಾರದಿಂದಲೇ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಎಪ್ರಿಲ್ ತಿಂಗಳಿನಲ್ಲಿ ಬೇಸಿಗೆಯ ಬಿಸಲಿನ ಬೇಗುದಿಗೆ ಜನ ತತ್ತರಿಸಿ ಹೋಗಿದ್ದಾರೆ. ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ, ದೇಹವು ನಿರ್ಜಲೀಕರಣಗೊಳ್ಳುತ್ತಿದ್ದು, ಶಕ್ತಿಯ ಮಟ್ಟವು ಕಡಿಮೆಯಾಗುತ್ತದೆ. ದೇಹ ದಣಿವು ಹಾಗೂ ಬಾಯಾರಿಕೆ ತೀರಿಸಲು ಜನ ಎಳನೀರು, ಕಲ್ಲಂಗಡಿ, ತಾಳೆ ಹಣ್ಣು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಸಿಯಾಳ, ಕಲ್ಲಂಗಡಿ ಬೆಲೆ ತುಟ್ಟಿ: ಕುಂದಾಪುರ ನಗರ ಸಹಿತ ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿಯೂ ಕೂಡ ಎಳನೀರಿಗೆ ಬರ ಬಂದಿದೆ. ಯಾವುದೇ ಅಂಗಡಿಯಲ್ಲೂ ಸಿಯಾಳ ದೊರಕುತ್ತಿಲ್ಲ. ಒಂದೊಮ್ಮೆ ಸಿಯಾಳ ಸಿಕ್ಕಿದರೂ ಕೂಡ 45ರಿಂದ 50 ರೂ. ಬೆಲೆ ಇದೆ. ನೀರು ಕೂಡ ರುಚಿಯಾಗಿಲ್ಲ ಎನ್ನುತ್ತಾರೆ ಗ್ರಾಹಕರು.

ಕಲ್ಲಂಗಡಿ ಹಣ್ಣಿನ ಬೆಲೆಯೂ ಕೂಡ ಹೆಚ್ವಿದ್ದು ಕಿಲೋವೊಂದಕ್ಕೆ 35-40 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಸೇಡೊಂದಕ್ಕೆ 20-25ರೂ. ದರವಿದೆ. ಇನ್ನು ಪೈನಾಪಲ್, ಕರಬೂಜಾ, ನಿಂಬೆ, ಮಾವು, ಚಿಕ್ಕು, ಮೋಸಂಬಿ, ಸೇಬು ಇತರೆ ಹಣ್ಣುಗಳ ಬೆಲೆ ಹಾಗೂ ಹಣ್ಣಿನ ರಸಗಳ ಬೆಲೆಯೂ ಹೆಚ್ಚಿದೆ. ಇನ್ನು ಕೆಂದಾಳೆ ಸಿಯಾಳ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಕೆಲವು ಅಂಗಡಿಗಳಲ್ಲಿ ಇದ್ದರೂ 55 ರೂಪಾಯಿಗೂ ಅಧಿಕ. ಇನ್ನು ತಾಳೆ ಹಣ್ಣಿನ 3 ಕಣ್ಣಿಗೆ 30 ರೂ. ಇದೆ.

ಸೆಕೆ ತಾಳಲಾರದೆ ದೇಹ ತಂಪು ಮಾಡಲು ಏನಾದರೂ ಕುಡಿಯಲು ಹೊರಟರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಎಳನೀರು, ಕಲ್ಲಂಗಡಿ ಹಣ್ಣಿಗೆ ಅಭಾವ ಇದ್ದರೆ ವಿದೇಶಿ ತಂಪು ಪಾನೀಯಗಳು ದೇಹವನ್ನು ಇನ್ನಷ್ಟು ಉಷ್ಣ(ತಾಪ) ಮತ್ತಷ್ಟು ಹೆಚ್ಚಿಸುತ್ತದೆ. ಮನೆಯಲ್ಲಿಯೇ ತಯಾರಿಸಿ ಕುಡಿಯ ಬಹುದಾದ ತಂಪಿನ ಬೀಜದ ಜ್ಯೂಸ್, ಎಳ್ಳು, ಹೆಸರು, ರಾಗಿ ಜ್ಯೂಸ್, ತಾಜಾ ಹಣ್ಣಿನ ರಸಗಳು ದೇಹವನ್ನು ತಂಪಾಗಿಸುವುದಲ್ಲದೆ ಆರೋಗ್ಯಕ್ಕೂ ಉತ್ತಮ ಎನ್ನುತ್ತಾರೆ ತಜ್ಞರು.

ಘಾಟಿ ಬೊಂಡವೂ ಇಲ್ಲ, ನಾಟಿ ಬೊಂಡವೂ ಸಿಗಲ್ಲ!

ಕರಾವಳಿ ಭಾಗಕ್ಕೆ ಮೊದಲು ಘಟ್ಟದಿಂದ ಸಿಯಾಳ ತರಿಸಲಾಗುತ್ತಿತ್ತು. ಆದರೆ ಈ ಬಾರಿ ಘಟ್ಟದಿಂದ ಸಿಯಾಳ ಬರುತ್ತಿಲ್ಲ. ಬಿಸಿಲಿನ ಝಳ ಜಾಸ್ತಿಯಾಗಿರುವುದರಿಂದ ಸಿಯಾಳ ಕುಡಿಯುವರ ಸಂಖ್ಯೆಯೂ ಹೆಚ್ಚಿದೆ.

ಆದರೆ ಬೇಡಿಕೆ ತಕ್ಕಂತೆ ಮಾರುಕಟ್ಟೆಗೆ ಸಿಯಾಳ ಪೂರೈಕೆಯಾಗುತ್ತಿಲ್ಲ. ಕರಾವಳಿಯಲ್ಲಿ ಊರಿನ ಸಿಯಾಳಕ್ಕೆ ಬಾರೀ ಬೇಡಿಕೆಯಿದ್ದರೂ ಕೂಡ ತೆಂಗು ಬೆಳೆಗಾರರು ತೆಂಗಿನ ಕಾಯಿ ಹಾಗೂ ತೆಂಗಿನ ಉತ್ಪನ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಕಾರಣ ಮೊದಲಿನಿಂದಲೂ ನಾಟಿ ಸಿಯಾಳ ನಿರೀಕ್ಷಿತ ಮಟ್ಟಿಗೆ ಸಿಗುತ್ತಿಲ್ಲ ಎಂದು ಕುಂದಾಪುರದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧೀಶ್ ಕೆ.ಜೆ. ಅಭಿಪ್ರಾಯಪಟ್ಟಿದ್ದಾರೆ.

ಮಳೆ ಕಮ್ಮಿಯಿರುವ ಕಾರಣ ಸಿಯಾಳಕ್ಕೆ ಬೆಳೆ ಇಲ್ಲ. ಮೊದಲು ಚಿಕ್ಕಮಗಳೂರಿನ ಕಡೂರು ಮೊದಲಾದೆಡೆಯಿಂದ ಘಾಟಿ ಸಿಯಾಳ ಅಂಗಡಿಗಳಿಗೆ ಪೂರೈಕೆಯಾಗುತ್ತಿತ್ತು ಅವರು ನಮಗೆ ನೀಡುವುದೇ 33 ರೂಗೆ. ಅಲ್ಲಿನ ಎಳನೀರು ಅಂತಹ ಗುಣಮಟ್ಟವು ಇರಲ್ಲ. ಸ್ಥಳೀಯ ಸಿಯಾಳದ ಬೆಳೆ ಕಮ್ಮಿಯಾದ್ದರಿಂದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಸಿಗುತ್ತಿಲ್ಲ. ವಿಪರೀತ ಬಿಸಿಲಿನಿಂದಾಗಿ ಸಿಯಾಳಕ್ಕೆ ಬೇಡಿಕೆಯಿದ್ದರೂ ಅಗತ್ಯಕ್ಕೆ ತಕ್ಕಂತೆ ಸಿಗದ ಕಾರಣ ಗ್ರಾಹಕರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ.

 - ಪ್ರಭಾಕರ ಬೆಟ್ಟಿನಮನೆ ಬೀಜಾಡಿ, ಅಂಗಡಿ ಮಾಲಕ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೀಶ್ ಕುಂಭಾಸಿ

contributor

Similar News