ಭಾರತೀಯ ಕ್ರೀಡಾ ಇತಿಹಾಸದಲ್ಲಿನ ಫುಟ್‌ಬಾಲ್ ರೋಚಕತೆಯ ದಿನಗಳ ಕಥನ ‘ಮೈದಾನ್’

Update: 2024-04-12 09:08 GMT

ಅಜಯ್ ದೇವಗನ್ ಮುಖ್ಯ ಪಾತ್ರದಲ್ಲಿರುವ ‘ಮೈದಾನ್’ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಬಿಗಿಯಾದ ನಿರೂಪಣೆ, ನಿರ್ದೇಶನ, ಅಜಯ್ ದೇವಗನ್ ನಟನೆ, ಕೊನೆಯ ಇಪ್ಪತ್ತು ನಿಮಿಷಗಳ ರೋಮಾಂಚಕ ದೃಶ್ಯಗಳ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

‘ಮೈದಾನ್’ ಚಿತ್ರ ಬಿಡುಗಡೆ ಬೆನ್ನಲ್ಲೇ ಭಾರತೀಯ ಕ್ರೀಡಾ ಇತಿಹಾಸದಲ್ಲಿನ ಫುಟ್‌ಬಾಲ್ ರೋಚಕತೆಯ ದಿನಗಳ ಕಥನವೂ ಮುನ್ನೆಲೆಗೆ ಬಂದಿದೆ.

ಒಂದು ಕಾಲದಲ್ಲಿ ಫುಟ್‌ಬಾಲ್ ಭಾರತದ ಅತಿ ಹೆಮ್ಮೆಯ ಆಟವಾಗಿತ್ತು. ಅಷ್ಟೇ ಹೆಮ್ಮೆಯ ಕ್ಷಣಗಳನ್ನು ಅದು ಭಾರತದ ಪಾಲಿಗೆ ತಂದುಕೊಟ್ಟದ್ದೂ ಇತ್ತು.

ಹಾಗೆ ಭಾರತೀಯ ಫುಟ್‌ಬಾಲ್ ಅನ್ನು ಅಂತರ್ ರಾಷ್ಟ್ರೀಯವಾಗಿ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದವರು ಸೈಯದ್ ಅಬ್ದುಲ್ ರಹೀಮ್. ಭಾರತೀಯ ಫುಟ್‌ಬಾಲ್‌ನ ಸುವರ್ಣಯುಗದ ಹಿಂದಿನ ಶಕ್ತಿಯಾಗಿದ್ದವರು, ಸಂಚಲನವಾಗಿದ್ದವರು ಅವರು.

ರಹೀಮ್ ಸಾಬ್ ಎಂದೇ ಅವರು ಚಿರಪರಿಚಿತರಾಗಿದ್ದರು.

ಈಗ ಅಜಯ್ ದೇವಗನ್ ನಟಿಸಿರುವ ‘ಮೈದಾನ್’ ಚಿತ್ರದ ಅಸಲಿ ಹೀರೋ ಈ ಭಾರತೀಯ ಫುಟ್ಬಾಲ್ ದಂತಕತೆ ಸೈಯದ್ ಅಬ್ದುಲ್ ರಹೀಮ್.

ಭಾರತೀಯ ಫುಟ್‌ಬಾಲ್‌ನ ಇವತ್ತಿನ ಸ್ಥಿತಿಯ ಬಗ್ಗೆ ಹೇಳಲು ಬೇಕಾದಷ್ಟಿದೆ. ಒಳ್ಳೆಯದು, ಕೆಟ್ಟದು, ಕೊಳಕು ಎಲ್ಲವೂ ಅದರಲ್ಲಿ ಬೆರೆತುಹೋಗಿದೆ. ಆದರೆ ಈಗಿನ ಸ್ಥಿತಿಯಲ್ಲಿ, ಲಾಗಾಯ್ತಿನಿಂದಲೂ ಈ ದೇಶದಲ್ಲಿ ಇದ್ದ ಫುಟ್‌ಬಾಲ್‌ನ ಶ್ರೀಮಂತ ಇತಿಹಾಸವನ್ನು ನಿರಾಕರಿಸಲು ಸಾಧ್ಯವಿಲ್ಲ.

ಹಾಗೆ ನಿರಾಕರಿಸಲು ಆಗದಂಥ ಘನತೆಯನ್ನು ಭಾರತೀಯ ಫುಟ್‌ಬಾಲ್‌ಗೆ ತಂದುಕೊಟ್ಟಿದ್ದವರಲ್ಲಿ ಪ್ರಮುಖರು, ಆದರೆ ತನ್ನ ಅಮೋಘ ಸಾಧನೆಗೆ ತಕ್ಕ ಶ್ಲಾಘನೆ ಪಡೆಯದೇ ಹೋದವರು ಸೈಯದ್ ಅಬ್ದುಲ್ ರಹೀಮ್.

ಈಗ ‘ಮೈದಾನ್’ ಚಿತ್ರದ ಮೂಲಕವಾದರೂ, ಈ ಭಾರತೀಯ ಫುಟ್‌ಬಾಲ್ ದಂತಕತೆ ರಹೀಮ್ ಅವರಿಗೆ ಅವತ್ತು ಸಲ್ಲಬೇಕಿದ್ದ ಗೌರವ ಸಲ್ಲುವಂತಾಗಿರುವುದು ಖುಷಿಯ ಸಂಗತಿ. ಮೈದಾನ್ ನೆಪದಲ್ಲಿ ಒಮ್ಮೆ ನಮ್ಮ ದೇಶದ ಆ ಹೆಮ್ಮೆಯ ಕ್ರೀಡಾಪಟುವನ್ನು ನೆನೆಯಬೇಕು.

ಸೈಯದ್ ಅಬ್ದುಲ್ ರಹೀಮ್ ಜನಿಸಿದ್ದು, 1909ರ ಆಗಸ್ಟ್ 17ರಂದು ಹೈದರಾಬಾದ್‌ನಲ್ಲಿ. ಅನೇಕ ಕಾಲೇಜುಗಳ ಫುಟ್‌ಬಾಲ್ ತಂಡಗಳನ್ನು ಪ್ರತಿನಿಧಿಸಿದ್ದ ಅವರು ವೃತ್ತಿ ಶುರು ಮಾಡಿದ್ದು ಶಿಕ್ಷಕರಾಗಿ.

ಕಾಚಿಗುಡ ಮಿಡಲ್ ಸ್ಕೂಲ್, ಉರ್ದು ಷರೀಫ್ ಸ್ಕೂಲ್, ದಾರುಲ್-ಉಲೂಮ್ ಹೈಸ್ಕೂಲ್ ಮತ್ತು ಚಾದರ್‌ಘಾಟ್ ಹೈಸ್ಕೂಲ್‌ನಂತಹ ಹಲವಾರು ಸಂಸ್ಥೆಗಳಲ್ಲಿ ಶಿಕ್ಷಕರಾಗಿದ್ದರು.

1943ರಲ್ಲಿ ಹೈದರಾಬಾದ್ ಫುಟ್‌ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿಯಾಗಿ ಮತ್ತು ಮುಖ್ಯ ತರಬೇತುದಾರರಾಗಿ ಆಯ್ಕೆಯಾದಾಗಲೇ ಎಲ್ಲರಿಗೂ ಅವರ ಪರಿಚಯವಾದದ್ದು. ಜೀವನದ ಕೊನೆಯವರೆಗೂ ಅವರು ಆ ಹುದ್ದೆಗಳಲ್ಲಿದ್ದರು.

1950ರಲ್ಲಿ ಅವರು ಹೈದರಾಬಾದ್ ಪೊಲೀಸ್ ಕೋಚ್ ಆಗಿ ನೇಮಕಗೊಂಡಾಗ, ಅವರ ಮಾರ್ಗದರ್ಶನದಲ್ಲಿ ತಂಡ ರೋವರ್ಸ್ ಕಪ್‌ನಲ್ಲಿ ಸತತ ಐದು ಬಾರಿ ಜಯಗಳಿಸಿತು ಮತ್ತು ನಾಲ್ಕು ಬಾರಿ ಡ್ಯುರಾಂಡ್ ಕಪ್ ಅನ್ನು ತನ್ನದಾಗಿಸಿಕೊಂಡಿತ್ತು.

1950ರಿಂದ ರಹೀಮ್ ಸಾಬ್ ಭಾರತೀಯ ಫುಟ್‌ಬಾಲ್ ತಂಡಕ್ಕೆ ತರಬೇತಿ ನೀಡಲು ಆರಂಭಿಸಿದರು.ಅಲ್ಲಿಂದ 13 ವರ್ಷಗಳಲ್ಲಿ ಭಾರತೀಯ ಫುಟ್‌ಬಾಲ್ ಅನ್ನು ಅತ್ಯುನ್ನತ ಹಂತಕ್ಕೆ ಕೊಂಡೊಯ್ದರು. ಅದನ್ನು ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗ ಎಂದು ಪರಿಗಣಿಸಲಾಗುತ್ತದೆ.

ಭಾರತೀಯ ಫುಟ್‌ಬಾಲ್‌ನ ವಾಸ್ತುಶಿಲ್ಪಿ ಎಂದೇ ಸೈಯದ್ ಅಬ್ದುಲ್ ರಹೀಮ್ ಪರಿಗಣಿತರಾಗಿದ್ದಾರೆ. 1950ರಿಂದ 1963ರವರೆಗೆ ಅವರು ಭಾರತೀಯ ಫುಟ್‌ಬಾಲ್‌ನ ವ್ಯವಸ್ಥಾಪಕರಾಗಿದ್ದರು.

ಅವರ ನೇತೃತ್ವದಲ್ಲಿ ಅನೇಕ ಸುಧಾರಣೆಗಳಾದವು. ಭಾರತೀಯ ಫುಟ್‌ಬಾಲ್ ತಂಡ 1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಫುಟ್‌ಬಾಲ್‌ನ ಸೆಮಿ ಫೈನಲ್‌ಗೆ ಅರ್ಹತೆ ಗಳಿಸಿತು. ಅಂಥದೊಂದು ಗೌರವಾನ್ವಿತ ಮೈಲಿಗಲ್ಲನ್ನು ತಲುಪಿದ ಏಶ್ಯದ ಮೊದಲ ತಂಡವಾಯಿತು.

1950ರ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಲು ನಿರಾಕರಿಸಿದ ನಂತರ, 1951ರ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನ ಗೆದ್ದಿತು. ಆ ಅದ್ಭುತ ಕ್ಷಣಕ್ಕೆ ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಸಾಕ್ಷಿಯಾಗಿದ್ದರೆಂಬುದು ವಿಶೇಷ.

ಭಾರತ ಮಾತ್ರವಲ್ಲ ಏಶ್ಯನ್ ಫುಟ್ಬಾಲ್ ವಿಶ್ವದಲ್ಲಿ ಅಗ್ರಸ್ಥಾನ ಮುಟ್ಟುವಲ್ಲಿ ರಹೀಮ್ ಸಾಬ್ ಅವರ ದೂರದೃಷ್ಟಿಯ ಪಾತ್ರ ದೊಡ್ಡದಿತ್ತು. ಫುಟ್‌ಬಾಲ್‌ನ ಒನ್-ಟಚ್ ಶೈಲಿಗೆ ಹೆಚ್ಚು ಒತ್ತು ಕೊಟ್ಟಿದ್ದ ಅವರು, ತರಬೇತಿಗೆ ವಿಶೇಷ ಗಮನ ನೀಡುತ್ತಿದ್ದರು.

ಭಾರತದ ಈ ಪ್ರತಿಭೆಯ ಪಾಲಿನ ಅದ್ಭುತ ಘಳಿಗೆ ಎನ್ನಿಸಿದ್ದು ಇವರ 4-2-4 ಕ್ರಮವನ್ನು ಬ್ರೆಝಿಲಿಯನ್ನರು ಅಳವಡಿಸಿಕೊಂಡಾಗ. 2-3-5 ವ್ಯವಸ್ಥೆಯ ಪ್ರಾಬಲ್ಯವಿದ್ದ ಹೊತ್ತಿನಲ್ಲಿ, 1958 ಮತ್ತು 1962ರ ವಿಶ್ವಕಪ್‌ನಲ್ಲಿ ರಹೀಮ್ ಅವರ ಕ್ರಮವನ್ನು ಬ್ರೆಝಿಲಿಯನ್ನರು ಹೆಚ್ಚು ಜನಪ್ರಿಯಗೊಳಿಸಿದರು.

ಭಾರತೀಯ ಫುಟ್‌ಬಾಲ್‌ಗೆ ರಹೀಮ್ ಅವರ ಕೊಡುಗೆಗಳು ಅವರ ನಿವೃತ್ತಿಯೊಂದಿಗೆ ಮುಗಿದುಹೋಗಲಿಲ್ಲ. ಆಟಗಾರರನ್ನು ಸ್ವತಃ ತರಬೇತುದಾರರಾಗುವಂತೆ ಬೆಳೆಸಬೇಕೆಂಬ ಅವರ ನಿಲುವು ದೊಡ್ಡ ಬಲವಾಗಿತ್ತು. 1955ರಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ್ದ ಸಂದರ್ಶನದಲ್ಲಿಯೂ ಅವರು ಅದನ್ನು ಹೇಳಿದ್ದರು.

ತರಬೇತುದಾರರ ಜಾಲವನ್ನೇ ನಿರ್ಮಿಸಬೇಕೆಂಬುದು ಮತ್ತು ದೇಶಾದ್ಯಂತದ ಪ್ರತಿಭೆಗಳನ್ನು ಬೆಳೆಸಬೇಕೆಂಬುದು ಅವರ ಕನಸಾಗಿತ್ತು.

ಆದರೆ ಭಾರತೀಯ ಫುಟ್‌ಬಾಲ್‌ನ ವಾಣಿಜ್ಯೀಕರಣ ಮತ್ತದು ಬಂಡವಾಳಶಾಹಿಗಳ ಏಕಸ್ವಾಮ್ಯದಲ್ಲಿಯೇ ಮುಂದುವರಿದಿದ್ದರ ಪರಿಣಾಮವಾಗಿ ರಹೀಮ್ ಅವರ ಆ ಕನಸು ಬಹುತೇಕ ಕನಸಾಗಿಯೇ ಉಳಿಯಿತು.

ಅದೇನೇ ಇದ್ದರೂ, ಈಗ ಬಂದಿರುವ ‘ಮೈದಾನ್’ ಚಿತ್ರ, ಭಾರತೀಯ ಫುಟ್‌ಬಾಲ್‌ನ ಶ್ರೀಮಂತ ಇತಿಹಾಸದ ಬಗ್ಗೆ ಗೊತ್ತಿರದವರಿಗೂ ರಹೀಮ್ ಸಾಬ್ ಬಗ್ಗೆ ಗೊತ್ತಾಗುವಂತೆ ಮಾಡಿದೆ.

‘ಮೈದಾನ್’ ಬಿಡುಗಡೆಯಾಗಿರುವ ಈ ಹೊತ್ತು ರಹೀಮ್ ಅವರ ನೆಲ ಹೈದರಾಬಾದಿನ ಎಲ್ಲ ಕ್ರೀಡಾ ಪ್ರೇಮಿಗಳ ಪಾಲಿನ ಹೆಮ್ಮೆಯ ಗಳಿಗೆಯಾಗಿದೆ.

1952ರಿಂದ 1962ರವರೆಗಿನ ಅವಧಿಯನ್ನು ಒಳಗೊಂಡಿರುವ ಈ ಸಿನೆಮಾ, ರಹೀಮ್ ಅವರ ಬದುಕಿನ ಗಮನಾರ್ಹ ಕಾಲಘಟ್ಟವನ್ನು ಕಟ್ಟಿಕೊಡುತ್ತದೆ. ಮಧ್ಯಂತರದ ನಂತರ ಸಿನೆಮಾ ನಿರೂಪಣೆ ತೀವ್ರ ಚುರುಕು ಪಡೆದಿದೆ ಮತ್ತು ಅದ್ಭುತ ಫಿನಾಲೆಯೂ ಸೇರಿದಂತೆ ಮರೆಯಲಾರದ ರೋಚಕ ಕ್ಷಣಗಳ ಮೂಲಕ ಪ್ರೇಕ್ಷಕರನ್ನು ಹಿಡಿದು ನಿಲ್ಲಿಸುತ್ತದೆ.ರಹೀಮ್ ಸಾಬ್ ಅವರ ಪಾತ್ರ ಮಾಡಿರುವ ಅಜಯ್ ದೇವಗನ್ ಅವರ ನಟನೆ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಭಾರತೀಯ ಫುಟ್‌ಬಾಲ್‌ನ ದಂತಕತೆ ಸೈಯದ್ ಅಬ್ದುಲ್ ರಹೀಮ್ ಅವರಿಗೆ ಈ ಚಿತ್ರ ಪರಿಪೂರ್ಣ ಗೌರವವಾಗಿದೆ ಎನ್ನುತ್ತಿವೆ ವಿಮರ್ಶೆಗಳು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News