ವಿಪಕ್ಷಗಳ ವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ರಾಜ್ಯಸಭಾ ಸಭಾಪತಿ, ಲೋಕಸಭಾ ಸ್ಪೀಕರ್

ಸ್ಪೀಕರ್ ಆಗಲೀ, ಸಭಾಪತಿಯಾಗಲೀ ಆಡಳಿತ ಪಕ್ಷದ ರಕ್ಷಣೆಗೆ ಮಾತ್ರವೇ ಟೊಂಕ ಕಟ್ಟಿ ನಿಂತವರ ಹಾಗೆ ಕಾಣಿಸುತ್ತಿದ್ದಾರೆ, ವರ್ತಿಸುತ್ತಿದ್ದಾರೆ. ಅವರಿಬ್ಬರೂ ಹಾಗೆ ವರ್ತಿಸಿದ ಮೇಲೆ ವಿಪಕ್ಷಗಳು ಏನು ಮಾಡಬೇಕು? ಈ ದೇಶದ ರೈತರು, ಕಾರ್ಮಿಕರು, ಮೀನುಗಾರರು, ಬಡವರು, ಹಸಿದವರು ಇಂಥವರೆಲ್ಲರ ದನಿಯಾಗಿ ಮಾತಾಡಲು, ಅವರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ವಿಪಕ್ಷ ನಾಯಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದರೆ ಸಂಸತ್ತು ಯಾರಿಗಾಗಿ ಇದೆ?

Update: 2024-08-12 10:06 GMT

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ ಅವರು ವಿಪಕ್ಷಗಳ ಸಂಸದರನ್ನು ಅವಮಾನಿಸುವುದು, ಅವರ ದನಿ ಆಲಿಸುವ ಸಹನೆಯನ್ನು ತೋರಿಸದೇ ಇರುವುದು ಮತ್ತೆ ಮತ್ತೆ ಕಾಣಿಸುತ್ತಲೇ ಇದೆ.

ಇತ್ತೀಚಿನ ಎರಡು ಸನ್ನಿವೇಶಗಳನ್ನು ಗಮನಿಸಬೇಕು.

ಮೊದಲನೆಯದು, ಗುರುವಾರ ರಾಜ್ಯಸಭೆಯಲ್ಲಿ ನಡೆದದ್ದು. ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಅವರನ್ನು ಮಾತನಾಡಲು ಕರೆಯುವಾಗ ಸಭಾಪತಿ ಜಗದೀಪ್ ಧನ್ಕರ್ ಅವರು ‘ಜಯಾ ಬಚ್ಚನ್’ ಎನ್ನದೆ, ‘ಜಯಾ ಅಮಿತಾಭ್ ಬಚ್ಚನ್’ ಎಂದಿದ್ದಾರೆ.

ಅದಕ್ಕೆ ಆಕ್ಷೇಪವೆತ್ತಿದ ಜಯಾ ಬಚ್ಚನ್, ‘‘ನಾನೊಬ್ಬ ಕಲಾವಿದೆ. ನನಗೆ ಜನರ ಮಾತಿನ ಧಾಟಿ ಗೊತ್ತಾಗುತ್ತದೆ. ನಿಮ್ಮ ಧಾಟಿ ನನಗೆ ಸರಿಕಾಣಲಿಲ್ಲ, ಕ್ಷಮೆ ಯಾಚಿಸಬೇಕು’’ಎಂದರು.

ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದವು. ಅದಕ್ಕೂ ಮೊದಲು ವಿಪಕ್ಷಗಳ ನಡೆಗೆ ತೀವ್ರ ಆಕ್ಷೇಪವೆತ್ತಿದ ಧನ್ಕರ್, ಜಯಾ ಬಚ್ಚನ್ ಬಗ್ಗೆಯೂ ಕಟುವಾಗಿ ಮಾತನಾಡಿದರು.

‘‘ನೀವೆಲ್ಲ ನಾನು ಹೇಳಿದ ಹಾಗೆ ಕೇಳಬೇಕು’’ ಎಂದರು.

ಆಮೇಲೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ‘‘ದೇಶವನ್ನು ಅಸ್ಥಿರಗೊಳಿಸುತ್ತಿದ್ದೀರಿ’’ ಎಂದು ಗಂಭೀರ ಆರೋಪ ಮಾಡಿ ಪೀಠ ಬಿಟ್ಟು ಹೊರನಡೆದರು.

ಕಳೆದ ಹತ್ತು ದಿನಗಳಲ್ಲೇ ಜಯಾ ಬಚ್ಚನ್ ಹಾಗೂ ಜಗದೀಪ್ ಧನ್ಕರ್ ನಡುವೆ ಇದು ಮೂರನೇ ಜಟಾಪಟಿ.

ಎರಡನೆಯ ಸನ್ನಿವೇಶ ಬುಧವಾರ ಲೋಕಸಭೆಯಲ್ಲಿ ನಡೆದದ್ದು.

ಅಖಿಲೇಶ್ ಯಾದವ್ ಮಾತನಾಡುತ್ತ, ‘‘ಸ್ಪೀಕರ್ ಅಧಿಕಾರವನ್ನೇ ಮೊಟಕುಗೊಳಿಸಲಾಗುತ್ತಿದೆ. ನಾವು ನಿಮಗಾಗಿ ಹೋರಾಡುತ್ತೇವೆ’’ ಎಂದಾಗ ಥಟ್ಟನೆ ಮಧ್ಯಪ್ರವೇಶಿಸಿದ ಅಮಿತ್ ಶಾ, ‘‘ಸ್ಪೀಕರ್ ಅಧಿಕಾರ ಇಡೀ ಸದನದ ಜವಾಬ್ದಾರಿ, ನೀವು ರಕ್ಷಿಸಬೇಕಾಗಿಲ್ಲ’’ ಎಂದರು. ಅಂದರೆ ವಿಪಕ್ಷಗಳನ್ನು ಸ್ಪೀಕರ್ ಗೆ ಹತ್ತಿರವಾಗಲು ಬಿಡದ ಧೋರಣೆಯೊಂದು ಅಲ್ಲಿ ಕಂಡಿತು.

ವಿಪಕ್ಷಗಳ ದನಿಗೆ ಸದನದಲ್ಲಿ ಅವಕಾಶವಿರಕೂಡದು ಎಂಬುದು ಆಡಳಿತಾರೂಢ ಬಿಜೆಪಿಯ ಧೋರಣೆ. ಬಿಜೆಪಿಯ ಈ ಧೋರಣೆಯನ್ನೇ ಪಾಲಿಸುವ ಕೆಲಸವನ್ನು ಲೋಕಸಭೆಯಲ್ಲಿ ಸ್ಪೀಕರ್, ರಾಜ್ಯಸಭೆಯಲ್ಲಿ ಸಭಾಪತಿ ಮಾಡುತ್ತಿದ್ದಾರೆ. ಈ ದೇಶವನ್ನು ನಿಜವಾಗಿಯೂ ಕಾಡುತ್ತಿರುವ ಸಮಸ್ಯೆಗಳು ಚರ್ಚೆಗೇ ಬರದಂತಾಗಿದೆ ಎಂಬುದು ಇಲ್ಲಿನ ಅಸಲೀಯತ್ತು.

ಆ ಕುರಿತಾಗಿ ಮಾತಾಡುವ ಮತ್ತು ಪ್ರಶ್ನಿಸುವ ವಿಪಕ್ಷಗಳನ್ನು ಸಂಪೂರ್ಣವಾಗಿ ತಡೆಯುವ ಯತ್ನವನ್ನೇ ಸ್ಪೀಕರ್ ಮತ್ತು ಸಭಾಪತಿ ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ.

ಗುರುವಾರ ರಾಜ್ಯಸಭೆಯಲ್ಲಿ ನಡೆದ ಕೋಲಾಹಲದ ಬಳಿಕ ಮತ್ತು ಖರ್ಗೆಯವರನ್ನು ‘‘ದೇಶ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದೀರಿ’’ ಎಂದು ಧನ್ಕರ್ ದೂಷಿಸಿದ ಬಳಿಕ ವಿಪಕ್ಷಗಳು ತೀವ್ರ ಸಿಟ್ಟಾಗಿವೆ. ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಅವು ಮುಂದಾಗಿವೆಯೇ ಎಂಬ ಅನುಮಾನ ಮೂಡಿದೆ.

ಈ ನಡುವೆಯೇ, ಆಗಸ್ಟ್ 12ರವರೆಗೆ ನಡೆಯಬೇಕಿದ್ದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಇಲ್ಲಿಯೂ ಸರಕಾರದ ಇಚ್ಛೆಯಂತೆಯೇ ಸ್ಪೀಕರ್ ಮತ್ತು ಸಭಾಪತಿ ನಡೆದುಕೊಂಡಿದ್ದಾರೆಯೇ?

ಕೆಲ ಸಮಯದ ಹಿಂದೆ ಟಿಎಂಸಿ ಸಂಸದ ಸಂಸತ್ತಿನ ಹೊರಗೆ ತಮ್ಮ ಮಿಮಿಕ್ರಿ ಮಾಡಿದ್ದಾಗ ತಾವು ಪ್ರತಿನಿಧಿಸುವ ಜಾಟ್ ಸಮುದಾಯಕ್ಕೆ ಮಾಡಿದ ಅಪಮಾನ ಅದು ಎಂದಿದ್ದರು ಇದೇ ಧನ್ಕರ್. ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡಿದ್ದರ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆಗೆ ನಿರಾಕರಿಸಲಾಯಿತು. ಆಗ ಜಾಟ್ ಸಮುದಾಯಕ್ಕೆ ಅವಮಾನವಾಗಲಿಲ್ಲವೆ?

ಯಾವ ವ್ಯಕ್ತಿ ಇವರಿಗೆ ಇಷ್ಟವಿಲ್ಲವೋ, ಯಾರು ಪ್ರಶ್ನಿಸುವುದು ಇವರಿಗೆ ಸರಿಬರುವುದಿಲ್ಲವೋ ಅವರೆಲ್ಲ ಇವರಿಗೆ ದೇಶ ವಿರೋಧಿಗಳಾಗಿಬಿಡುತ್ತಾರೆ.

ಧನ್ಕರ್ ಆರೋಪ ಪೂರ್ತಿಯಾಗಿ ಅಸಾಂವಿಧಾನಿಕ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ಒಬ್ಬ ವಿಪಕ್ಷ ನಾಯಕನಿಗೆ ಮಾತನಾಡುವ ಅವಕಾಶ ಕೊಡದ ಸಭಾಪತಿಯ ರೀತಿ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗೆಲ್ಲ ದಿನದಿನವೂ ನಡೆಯುತ್ತಿರುವಾಗ ವಿಪಕ್ಷ ಏನು ಮಾಡಲಿದೆ ಎಂಬುದು ಈಗ ಪ್ರಶ್ನೆ.

ಧನ್ಕರ್ ಪಕ್ಷಪಾತ ನಡೆಯ ಬಗ್ಗೆ ವಿಪಕ್ಷಗಳು ಆರೋಪಿಸುತ್ತಲೇ ಇವೆ. ಜಯಾ ಬಚ್ಚನ್ ತಮ್ಮ ವಿಚಾರದಲ್ಲಿನ ಧನ್ಕರ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಪಕ್ಷ ನಾಯಕನಿಗೆ ಮಾತಾಡುವ ಅವಕಾಶ ನೀಡದ ವಿಚಾರದಲ್ಲಿಯೂ ಜಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮಾತಾಡುವಾಗ ಮೈಕ್ ಸ್ವಿಚ್ ಆಫ್ ಮಾಡಲಾಗುತ್ತದೆ. ವಿಪಕ್ಷ ನಾಯಕನಿಗೆ ಮಾತಾಡಲು ಅವಕಾಶ ಕೊಡಬೇಕಲ್ಲವೆ? ಅವಕಾಶವನ್ನೇ ಕೊಡುವುದಿಲ್ಲ ಮಾತ್ರವಲ್ಲ, ಅವರೇನು ಮಾತಾಡುತ್ತಿದ್ದಾರೆ ಎಂಬುದನ್ನು ಕೇಳಿಸದ ಹಾಗೆ ಮಾಡುತ್ತೀರಿ. ಮೈಕ್ ಆಫ್ ಮಾಡುವ ನಡೆ ಸದನದ ಪರಂಪರೆಗೆ ವಿರುದ್ಧವಾದದ್ದು ಎಂದು ಆಕ್ಷೇಪಿಸಿದ್ದಾರೆ.

ಬುದ್ಧಿಹೀನರು ಇತ್ಯಾದಿ ಅಸಂಸದೀಯ ಪದಗಳನ್ನೇ ಸಭಾಪತಿ ಪ್ರತೀ ಬಾರಿಯೂ ಬಳಸುವ ಬಗ್ಗೆಯೂ ಜಯಾ ತಕರಾರೆತ್ತಿದ್ದಾರೆ.

‘‘ನೀವು ಸೆಲೆಬ್ರಿಟಿಯಾಗಿರಬಹುದು, ಐ ಡೋಂಟ್ ಕೇರ್’’ ಎಂದದ್ದರ ಬಗ್ಗೆಯೂ ಆಕ್ಷೇಪಿಸಿದ ಜಯಾ, ಇದಕ್ಕಾಗಿ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ವಾಜಪೇಯಿ ಕಾಲದಲ್ಲಿ ಲೋಕಸಭೆ ಸ್ಪೀಕರ್ ಶಿವಸೇನೆಯವರಾಗಿದ್ದರು. ಆಗ ಸ್ಪೀಕರ್ ವಿರುದ್ಧ ವಿಪಕ್ಷಗಳೆಂದೂ ಆರೋಪ ಮಾಡುವ ಸಂದರ್ಭವೇ ಬಂದಿರಲಿಲ್ಲ.

ಎಡಪಕ್ಷದ ಸೋಮನಾಥ್ ಚಟರ್ಜಿ ಲೋಕಸಭೆ ಸ್ಪೀಕರ್ ಆಗಿದ್ದರು. ಅವರ ವಿರುದ್ಧವೂ ತಕರಾರುಗಳಿರಲಿಲ್ಲ. ಚಟರ್ಜಿ ಎಷ್ಟೋ ಸಲ ತಮ್ಮ ಪಕ್ಷದವರನ್ನೇ ತರಾಟೆಗೆ ತೆಗೆದುಕೊಂಡದ್ದಿತ್ತು. ಆ ರೀತಿಯಲ್ಲಿ ಅವರು ಸ್ಪೀಕರ್ ಪೀಠದಲ್ಲಿ ಕುಳಿತಾಗ ನಿಷ್ಪಕ್ಷವಾಗಿ ವರ್ತಿಸಿದ್ದರು.

ಆದರೆ ಈಗ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಸಭಾಪತಿ ಇಬ್ಬರೂ ಬಿಜೆಪಿಯವರೇ ಆಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ನಿತ್ಯವೂ ಕೇಳಿಬರುತ್ತಿರುವ ಆರೋಪವಾಗಿದೆ.

ಲೋಕಸಭೆಯಲ್ಲಿ ಮೋದಿ ಬಂದು ಕೈಕುಲುಕುವಾಗ ತಲೆಬಾಗುವ ಸ್ಪೀಕರ್ ಓಂ ಬಿರ್ಲಾ, ರಾಹುಲ್ ಎದುರಲ್ಲಿ ಸೆಟೆದು ನಿಲ್ಲುವ ರೀತಿಯನ್ನು ಗಮನಿಸಬಹುದು.

ವಿಪಕ್ಷ ನಾಯಕ ಮಾತಾಡುತ್ತಿದ್ದರೆ ಮೈಕ್ ಆಫ್ ಆಗುತ್ತದೆ.

ಕ್ಯಾಮರಾ ಬೇರೆಡೆ ತಿರುಗುತ್ತದೆ.

ಓಂ ಬಿರ್ಲಾ ನಡೆಯನ್ನು ಪ್ರತೀ ಬಾರಿಯೂ ವಿಪಕ್ಷಗಳು ಬಯಲು ಮಾಡುತ್ತಲೇ ಬಂದಿವೆ.

ವಿಪಕ್ಷಗಳು ನೋಟ್ ಬ್ಯಾನ್ ಬಗ್ಗೆ ಮಾತಾಡಿದರೆ ಅದನ್ನು ಹಳೇ ವಿಚಾರವೆನ್ನುವ ಬಿರ್ಲಾ, ಅದೇ 50 ವರ್ಷಗಳ ಹಿಂದಿನ ಎಮರ್ಜೆನ್ಸಿ ಬಗ್ಗೆ ಚರ್ಚೆಯಾದರೆ, ಮೋದಿ, ನೆಹರೂ ಬಗ್ಗೆ ಮಾತಾಡಿದರೆ ತಕರಾರು ತೆಗೆಯದೇ ಇರುವುದರ ಬಗ್ಗೆ ಅಭಿಷೇಕ್ ಬ್ಯಾನರ್ಜಿ ಹೇಳಿದ್ದರು.

ಸಂಸತ್ತಿನೊಳಗೆ ರಾಹುಲ್ ಭೇಟಿಗಾಗಿ ಬಂದಿದ್ದ ರೈತರನ್ನು ಒಳಗೆ ಬಿಡಲಿಲ್ಲ. ಮೀನುಗಾರರು ಬಂದರೆ ಬಿಡಲಿಲ್ಲ. ಇಲ್ಲಿ ಸಂಸದರಿಗೆ ಮಾತ್ರ ಪ್ರವೇಶ ಎಂದು ಓಂ ಬಿರ್ಲಾ ಹೇಳುತ್ತಾರೆ.ಆದರೆ ಸೆಲೆಬ್ರಿಟಿಗಳನ್ನೆಲ್ಲ ಇದೇ ಸಂಸತ್ತಿಗೆ ಆಹ್ವಾನಿಸಲಾಗಿತ್ತು ಎಂಬುದು ಬಿರ್ಲಾ ಅವರಿಗೆ ಮರೆತುಹೋಗಿದೆಯೆ? ತಮನ್ನಾ ಭಾಟಿಯಾ, ಕಂಗನಾ ಅವರೆಲ್ಲ ತಮ್ಮ ಸಿನೆಮಾ ಪ್ರಮೋಷನ್ ಹೊತ್ತಿನಲ್ಲಿಯೇ ಬಂದಿದ್ದರಲ್ಲವೆ?

ನಟಿಯರು ಯಾವ ಷರತ್ತುಗಳೂ ಇಲ್ಲದೆ ಒಳಬರಬಹುದು, ಆದರೆ ರೈತರಿಗೆ, ಮೀನುಗಾರರಿಗೆ ಮಾತ್ರ ಷರತ್ತುಗಳು ಅನ್ವಯಿಸುತ್ತವೆ!.

ಹಿಂದೆಂದೂ ಎರಡು ಸದನಗಳಲ್ಲಿ ಕಂಡಿರದ ರೀತಿಯ ಪಕ್ಷಪಾತಿ ನಡೆ ಈಗ ಕಾಣಿಸುತ್ತಿದೆ.

ಸಭಾಪತಿ ವಿಪಕ್ಷ ನಾಯಕನ ಬಗ್ಗೆ ದೇಶ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದೀರಿ ಎಂದು ಆರೋಪಿಸುವುದು, ಬಿಜೆಪಿಯ ಧಾಟಿಯಲ್ಲಿ ಮಾತಾಡುವುದು ನಿಜಕ್ಕೂ ಆಘಾತಕಾರಿ.

ಪ್ರಜಾಸತ್ತೆಯ ಹೃದಯದಂತಿರುವ ಸಂಸತ್ತಿನಲ್ಲಿ ಬಡಿತವೇನೋ ಇದೆ. ಆದರೆ ಅಲ್ಲಿ ಈ ದೇಶದ ಜನರ ದನಿ ಮಾತ್ರ ಕೇಳಿಸದ ಹಾಗಾಗಿದೆ.

ತನ್ನ ಮೇಲೆ ದಾಳಿಯಾಗುತ್ತಿದೆ, ತನ್ನನ್ನು ಅವಮಾನಿಸಲಾಗುತ್ತಿದೆ ಎಂದು ಧನ್ಕರ್ ಪೀಠ ಬಿಟ್ಟು ಹೋಗಿಬಿಡುತ್ತಾರೆ. ಇದೇ ಪೀಠದಲ್ಲಿ ಕೂತು ಆರೆಸ್ಸೆಸ್ ಅನ್ನು ಹಾಡಿ ಹೊಗಳುವ ಧನ್ಕರ್, ವಿಪಕ್ಷಗಳ ವಿನಂತಿಯನ್ನು ಕೇಳಿಸಿಕೊಳ್ಳಲು ತಯಾರಿಲ್ಲ.

ಧನ್ಕರ್ ಪಶ್ಚಿಮ ಬಂಗಾಳದ ಗವರ್ನರ್ ಆಗಿದ್ದಾಗಲೂ ಬಿಜೆಪಿ ಮನುಷ್ಯನಾಗಿ ನಡೆದುಕೊಂಡಿದ್ದರೇ ಹೊರತು ರಾಜ್ಯಪಾಲ ಹುದ್ದೆಯ ಘನತೆಯನ್ನು ಪಾಲಿಸಿರಲೇ ಇಲ್ಲ.

ಖರ್ಗೆಯವರ ಬಗ್ಗೆ ಕೆಟ್ಟ ರೀತಿಯಲ್ಲಿ ಮಾತಾಡುವ ಧನ್ಕರ್, ಅದೇ ಬಿಜೆಪಿಯ ಜೆ.ಪಿ. ನಡ್ಡಾ ಜೊತೆ ವಿನಯದಿಂದ ಮಾತಾಡು ವಾಗ ಸಭಾಪತಿ ಪೀಠದಲ್ಲಿದ್ದೇನೆ ಎಂಬುದನ್ನೂ ಮರೆಯುತ್ತಾರೆ.

ರಾಜ್ಯಸಭೆಯಲ್ಲಿ ಸಭಾಪತಿ ಹಾಗೂ ಲೋಕಸಭೆಯಲ್ಲಿ ಸ್ಪೀಕರ್ ಜನಸಾಮಾನ್ಯರ ವಿಚಾರಗಳನ್ನೆತ್ತುವ ವಿಪಕ್ಷ ನಾಯಕರಿಗೆ ಮಾತಾಡುವುದಕ್ಕೇ ಅವಕಾಶ ಕೊಡುತ್ತಿಲ್ಲ.

ಒಂದು ಸಣ್ಣ ಪ್ರಶ್ನೆಯನ್ನೂ ಸರಕಾರಕ್ಕೆ ಕೇಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಮಾಡಲಾಗಿದೆ.

ಸ್ಪೀಕರ್ ಆಗಲಿ, ಸಭಾಪತಿಯಾಗಲಿ ಆಡಳಿತ ಪಕ್ಷದ ರಕ್ಷಣೆಗೆ ಮಾತ್ರವೇ ಟೊಂಕ ಕಟ್ಟಿ ನಿಂತವರ ಹಾಗೆ ಕಾಣಿಸುತ್ತಿದ್ದಾರೆ, ವರ್ತಿಸುತ್ತಿದ್ದಾರೆ. ಅವರಿಬ್ಬರೂ ಹಾಗೆ ವರ್ತಿಸಿದ ಮೇಲೆ ವಿಪಕ್ಷಗಳು ಏನು ಮಾಡಬೇಕು? ಈ ದೇಶದ ರೈತರು, ಕಾರ್ಮಿಕರು, ಮೀನುಗಾರರು, ಬಡವರು, ಹಸಿದವರು ಇಂಥವರೆಲ್ಲರ ದನಿಯಾಗಿ ಮಾತಾಡಲು, ಅವರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ವಿಪಕ್ಷ ನಾಯಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದರೆ ಸಂಸತ್ತು ಯಾರಿಗಾಗಿ ಇದೆ?

ಕಲಾಪ ನಡೆಯುವ ಪ್ರತೀ ನಿಮಿಷವೂ ಆಡಳಿತ ಪಕ್ಷವನ್ನು ಕಾಯಲೆಂದೇ ನಿಂತವರ ಹಾಗೆ ನಡೆದುಕೊಳ್ಳುತ್ತಿರುವ ಸ್ಪೀಕರ್ ಮತ್ತು ಸಭಾಪತಿ ತಾವು ಗೆದ್ದಿದ್ದೇವೆ ಎಂದುಕೊಳ್ಳುತ್ತಿರಬಹುದು.

ಆದರೆ, ಈ ದೇಶದ ಜನರ ನಿಜವಾದ ದನಿಯಾದ ವಿಪಕ್ಷಗಳ ವಿಶ್ವಾಸವನ್ನು ಅವರಿಬ್ಬರೂ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಅವರೆಷ್ಟೇ ನಿರಾಕರಿಸಿದರೂ ಕಾಣಿಸುವ ನಿಚ್ಚಳ ಸತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಚ್. ವೇಣುಪ್ರಸಾದ್

contributor

Similar News