ನಾಡು ಕಂಡ ಶ್ರೇಷ್ಠ ಪ್ರತಿಭೆ ಸದಾನಂದ ಸುವರ್ಣ

Update: 2024-07-17 06:31 GMT
Editor : Thouheed | Byline : ಸಾ. ದಯಾ

ಬಹುಮುಖ ಪ್ರತಿಭೆಯ ಸದಾನಂದ ಸುವರ್ಣರು ನಾಡು ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ರಾತ್ರಿ ಶಾಲೆಗಳ ವಾರ್ಷಿಕೋತ್ಸವಗಳಿಗೆ, ಸಂಘ ಸಂಸ್ಥೆಗಳ ವಿಶೇಷ ಸಂದರ್ಭಗಳಿಗಾಗಿ ನಾಟಕಗಳನ್ನು ಬರೆದು, ತರಬೇತುಗೊಳಿಸಿ ನಾಟಕದ ರಂಗಪ್ರಯೋಗಗಳಲ್ಲಿ ತೊಡಗಿಸಿಕೊಂಡದ್ದು ಮುಂಬೈಯಲ್ಲಿ ಸುವರ್ಣರ ರಂಗಭೂಮಿಯ ಮೊದಲ ಘಟ್ಟವಾಗಿದೆ. ಕನ್ನಡ ಕಲಾ ಕೇಂದ್ರದ ನಾಟಕೋತ್ಸವಗಳ ನಂತರದ ಘಟ್ಟ ಎರಡನೆಯದು. ರಂಗಶಿಕ್ಷಣವನ್ನು ಪಡೆದು ಹಿಂದಿ, ಮರಾಠಿ, ಬಂಗಾಳಿ, ಇಂಗ್ಲಿಷ್ ನಾಟಕಗಳನ್ನು ವೀಕ್ಷಿಸಿ ಕನ್ನಡದಲ್ಲಿ ‘ಸುವರ್ಣತನ’ದ ಛಾಪುಮೂಡಿಸಿರುವ ಅವರು ಚಲನಚಿತ್ರ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಕಿರು ತೆರೆಯಲ್ಲಿ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಸದಾನಂದ ಸುವರ್ಣರ ರಂಗಬದುಕಿನ ಮೂರನೇ ಘಟ್ಟ. ಇದು ಕನ್ನಡಿಗರು ಹೆಮ್ಮೆ ಪಡುವ ಸಂಗತಿ.

ಅಭಾಗಿನಿ, ವಿಷಮ ಘಳಿಗೆ, ಕುಲಗೌರವ, ಹಳ್ಳದಿಂದ ಹಾದಿಗೆ, ಕದ್ದವನೆ ಕಳ್ಳ, ಕುರುಡನ ಸಂಗೀತ, ಧರ್ಮಚಕ್ರ, ಕಣ್ಣು ತೆರೆಯಿತು, ಭಗ್ನ ಮಂದಿರ, ರೂಪದರ್ಶನ, ಆಕಸ್ಮಿಕ, ರಜಪೂತ ಪವಾಡ, ಗುಡ್ಡೆದ ಭೂತ ನಾಟಕಗಳನ್ನು ಬರೆದಿರುವ ಸುವರ್ಣರು ಚಕ್ರವ್ಯೆಹ, ಅಣ್ಣನ ಮದುವೆ, ಉರುಳು, ಬಾಲೆ ಬಂಗಾರ್ ಮೊದಲಾದ ನಾಟಕಗಳನ್ನು ಇಂಗ್ಲಿಷ್, ಹಿಂದಿ, ಬಂಗಾಲಿ ಮೊದಲಾದ ಒಳ್ಳೆಯ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿ ಕನ್ನಡ ನಾಟಕ ಶ್ರೀಮಂತಗೊಳ್ಳುವಲ್ಲಿ ಸಹಕರಿಸಿದ್ದಾರೆ.

ಉದಯ ಕಲಾ ನಿಕೇತನ, ಕನ್ನಡ ಕಲಾ ಕೇಂದ್ರ ಇವುಗಳ ಮೂಲಕ ಸ್ವರಚಿತ ನಾಟಕಗಳಲ್ಲದೆ ನೂರಾರು ವಿಭಿನ್ನ ರೀತಿಯ ನಾಟಕಗಳನ್ನು ನಿರ್ದೇಶಿಸಿ ಯಶಸ್ವಿಯಾಗಿ ರಂಗದಮೇಲೆ ತಂದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಕರ್ನಾಟಕ ಸಂಘ, ಮಾಟುಂಗ, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ, ಗೋರೆಗಾಂವ್ ಕರ್ನಾಟಕ ಸಂಘ, ಚಾರ್ಕೊಪ್ ಕನ್ನಡಿಗರ ಬಳಗ, ಕಾಂದಿವಲಿ, ಕನ್ನಡ ವಿಭಾಗ - ಮುಂಬೈ ವಿಶ್ವವಿದ್ಯಾನಿಲಯ ಮೊದಲಾದ ಸಂಸ್ಥೆಗಳಿಗೆ ಸುವರ್ಣರಿಂದ ದತ್ತಿನಿಧಿ ಸಂದಾಯವಾಗಿದೆ. ಗೋರೆಗಾಂವ್ ಕರ್ನಾಟಕ ಸಂಘದ ಆಶ್ರಯದಲ್ಲಿ ರಂಗಶಿಕ್ಷಣ ಕೇಂದ್ರ, ‘ರಂಗಸ್ಥಳ’ ಹುಟ್ಟಿಗೆ ಕಾರಣರಾಗಿ ಅಲ್ಲಿ ಶಿಸ್ತುಬದ್ಧ ರಂಗಶಿಕ್ಷಣ ನೀಡಿದ ಹೆಗ್ಗಳಿಕೆ ಸುವರ್ಣರದ್ದು. ‘ದೃಷ್ಟಿ ಫಿಲ್ಡ್ ಸೊಸೈಟಿ’ಯನ್ನು ಸ್ಥಾಪಿಸಿ ಅದರ ಗೌರವ ಕಾರ್ಯದರ್ಶಿಯಾಗಿದ್ದು, ಆ ಮೂಲಕ ಅತ್ಯುತ್ತಮ ಚಲಚಿತ್ರಗಳನ್ನು ಪರಿಚಯಿಸಿದುದಲ್ಲದೆ, ವಿಚಾರ ಸಂಕಿರಣ, ಉಪನ್ಯಾಸ, ಸಂವಾದಗಳನ್ನು ಏರ್ಪಡಿಸಿ ಸದಭಿರುಚಿಯ ಪ್ರೇಕ್ಷಕ ವರ್ಗದ ನಿರ್ಮಾಣ ಮಾಡಿದ ಶ್ರೇಯಸ್ಸು ಸುವರ್ಣರದ್ದು.

ಕಿರುತೆರೆಯಲ್ಲಿ ತಮ್ಮ ತುಳು ನಾಟಕ ‘ಗುಡ್ಡೆದ ಭೂತ’ ಆಧರಿಸಿ ಕನ್ನಡದಲ್ಲಿ ಹದಿಮೂರು ಕಂತುಗಳಲ್ಲಿ ಧಾರಾವಾಹಿಯಾಗಿ ಬೆಂಗಳೂರು ಮತ್ತು ಮುಂಬೈಯ ದೂರದರ್ಶನಗಳಲ್ಲಿ ಪ್ರಸಾರವಾಗಿ ಮನ್ನಣೆ ಗಳಿಸಿ ‘ಆರ್ಯಭಟ’, ’ಸಂದೇಶ ಪ್ರತಿಷ್ಠಾನ’ದ ಪ್ರಶಸ್ತಿಗಳಿಗೆ ಪಾತ್ರವಾಗಿದೆ. ಡಾ.ಶಿವರಾಮ ಕಾರಂತರ ಆತ್ಮಕತೆ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಆಧರಿಸಿ ತಯಾರಿಸಿದ ಸಾಕ್ಷ್ಯಚಿತ್ರ ಹನ್ನೊಂದು ಕಂತುಗಳಲ್ಲಿ ಪ್ರಸಾರಕಂಡು ಎಲ್ಲರ ಮನಸ್ಸನ್ನು ಸೂರೆಗೊಂಡಿದೆ.

ಕೇವಲ ನಾಟಕಗಳಲ್ಲದೆ ಚಲಚಿತ್ರ ನಿರ್ಮಾಪಕರಾಗಿ ‘ಘಟಶ್ರಾದ್ಧ’ ಚಿತ್ರಕ್ಕೆ ಸ್ವರ್ಣಕಮಲ ಪಡೆದ ಹೆಮ್ಮೆಯ ಸುವರ್ಣರಿಗೆ, ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ದಾದಾ ಸಾಹೇಬ ಪಾಲ್ಕೆ, ಜರ್ಮನಿಯ ಡ್ಯುಕಾಡ್ಸ್ ಪ್ರಶಸ್ತಿ ಮುಂತಾದ ಹದಿನೆಂಟು ಪ್ರಶಸ್ತಿಗಳು ಸಂದಿವೆ. ‘ಕುಬಿ ಮತ್ತು ಇಯಾಲ’ ಚಲಚಿತ್ರಕ್ಕೆ ಅತ್ಯುತ್ತಮ ಚಿತ್ರ, ಉತ್ತಮ ನಿರ್ದೇಶಕ, ಉತ್ತಮ ಕತೆ ಹೀಗೆ ಮೂರು ಕರ್ನಾಟಕ ರಾಜ್ಯ ಪ್ರಶಸ್ತಿಗಳು ಬಂದಿವೆ.

ಸುವರ್ಣರ ಸಾಧನೆಯ ಹಾದಿಯಲ್ಲಿ ಹತ್ತು ಹಲವು ಪ್ರಶಸ್ತಿಯ ಗರಿಗಳು ಸೇರಿಕೊಂಡಿವೆ. ಅವುಗಳಲ್ಲಿ ‘ಕಲಾತಪಸ್ವಿ ಪ್ರಶಸ್ತಿ’, ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’, ‘ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ’, ‘ಗುರುನಾರಾಯಣ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’, 2023-24ರ ಸಾಲಿನ ‘ಬಿ.ವಿ.ಕಾರಂತ ಪ್ರಶಸ್ತಿ’ ಮೊದಲಾದ ಪ್ರಶಸ್ತಿಗಳು ಸುವರ್ಣರ ಕಲಾ ಸಾಧನೆಗೆ ನ್ಯಾಯೋಚಿತವಾಗಿ ಸಂದ ಗೌರವ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಾ. ದಯಾ

contributor

Similar News