ಸರಕಾರ ಪೂರ್ಣಾವಧಿ ಮುಗಿಸುವುದೇ?

Update: 2024-06-10 04:49 GMT

ಮೊನ್ನೆ ಇಂಗ್ಲಿಷ್ ಸುದ್ದಿ ಚಾನೆಲ್‌ವೊಂದನ್ನು ನೋಡುತ್ತಿದ್ದೆ. ಲೋಕಸಭೆ ಚುನಾವಣೆ ಫಲಿತಾಂ ಶ ಕುರಿತು ಚರ್ಚೆ ಆಗುತಿತ್ತು. ನ್ಯೂಸ್ ರೂಂನಲ್ಲಿದ್ದ ಆ್ಯಂಕರ್‌ಗಳಿಬ್ಬರು ರಾಜಕೀಯ ಚಿಂತಕ ಪ್ರೊ.ಯೋಗೇಂದ್ರ ಯಾದವ್ ಅವರೊಂದಿಗೆ ಸಂವಾದ ನಡೆಸುತ್ತಿದ್ದರು. ಫಲಿತಾಂಶಕ್ಕೆ ಮುನ್ನವೇ ಬಿಜೆಪಿಗೆ ಎಷ್ಟು ಸ್ಥಾನ ಸಿಗಬಹುದೆಂದು ಯಾದವ್ ನಿಖರವಾಗಿ ಹೇಳಿದ್ದರು. ‘ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಡ, ಕೇರಳ, ಕರ್ನಾಟಕ, ತೆಲಂಗಾಣದಲ್ಲಿ ಪ್ರವಾಸ ಮಾಡಿ, ಜನರ ಜತೆ ಮಾತನಾಡಿದ ಬಳಿಕ ಫಲಿತಾಂಶ ಹೀಗೇ ಬರಬಹುದೆಂದು ಊಹಿಸಲು ಸಾಧ್ಯವಾಯಿತು’ ಎಂದು ಅವರು ವಿವರಿಸಿದರು.

ಆ್ಯಂಕರ್‌ಗಳು ಪ್ರಚೋದಿಸಿದರೂ ತಾಳ್ಮೆಯಿಂದಲೇ ಮಾತನಾಡಿದರು ಯಾದವ್. ‘ಬಿಜೆಪಿಗೆ ಸೀಟುಗಳು ಕಡಿಮೆಯಾದರೂ ಇಂಡಿಯಾ ಮೈತ್ರಿ ಕೂಟಕ್ಕಿಂತ ಐದು ಸ್ಥಾನ ಹೆಚ್ಚು ಬಂದಿವೆ’ ಎಂದು ಅವರು ಕೆಣಕಿದರು. ‘ಅಬ್ ಕಿ ಬಾರ್ ಚಾರ್ ಸೌ ಪಾರ್’ ಎಂದು ಬಿಜೆಪಿ ಪ್ರಚಾರ ಮಾಡಿತ್ತು. ಆದರೆ, ಬರೀ 240 ಸ್ಥಾನಗಳನ್ನು ಗೆದ್ದಿತು ಎಂದು ಯಾದವ್ ತಿರುಗೇಟು ಕೊಟ್ಟರು. ಮಾಧ್ಯಮಗಳ ಮೇಲೂ ಅವರು ಹರಿಹಾಯ್ದರು. ಮಾಧ್ಯಮಗಳು ಬಿಜೆಪಿ ವಕ್ತಾರರಂತೆ ನಡೆದುಕೊಂಡಿವೆ ಎಂದೂ ಟೀಕಿಸಿದರು.

ಯಾದವ್ ಸತ್ಯ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮಾಧ್ಯಮಗಳು ಏಕಪಕ್ಷೀಯವಾಗಿವೆ. ಬಿಜೆಪಿ ಕೈಗೊಂಬೆಯಾಗಿವೆ. ಈ ಚುನಾವಣೆ ಬಳಿಕವೂ ಅವುಗಳ ಧೋರಣೆ ಬದಲಾಗಿಲ್ಲ. ‘ಜಟ್ಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ಪ್ರಚಾರ ಮಾಡುತ್ತಿವೆ. ಒಂದು ಇಂಗ್ಲಿಷ್ ಚಾನೆಲ್, ‘ಅಭ್ಯರ್ಥಿಗಳ ಆಯ್ಕೆ ಸರಿಯಾಗಿಲ್ಲದ್ದರಿಂದ ಬಿಜೆಪಿಗೆ ಸೋಲಾಯಿತು’ ಎಂದು ಸಮರ್ಥನೆ ನೀಡಿದೆ. ಇನ್ನೊಂದು ಚಾನೆಲ್, ‘ಚುನಾವಣೆಯಲ್ಲಿ ಹೊರಗಿನ ದೇಶಗಳು ಹಸ್ತಕ್ಷೇಪ ಮಾಡಿವೆ’ ಎಂದು ದೂರಿದೆ. ಇದು ಮೊಸರಲ್ಲಿ ಕಲ್ಲು ಹುಡುಕುವ ತಂತ್ರ. ಈ ಸಲದ ಸೋಲಿನಿಂದ ಬಿಜೆಪಿಗೆ ಸಂಕಟವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮಾಧ್ಯಮಗಳಂತೂ ರೋದಿಸುತ್ತಿವೆ.

ಮತದಾರರು ಚುನಾವಣೆಯಲ್ಲಿ ಪ್ರಬುದ್ಧ ತೀರ್ಪು ಕೊಟ್ಟಿದ್ದಾರೆ. ಒಂದು ಕಲ್ಲಲ್ಲಿ ಎಷ್ಟೊಂದು ಹಕ್ಕಿಗಳನ್ನು ಹೊಡೆದಿದ್ದಾರೆ. ನಾನು, ನಾನು ಎಂದು ಮೆರೆಯುತ್ತಿದ್ದವರನ್ನು ನಾವು ಎಂದು ಹೇಳುವ ಹಂತಕ್ಕೆ ತಂದಿದ್ದಾರೆ. ಒಂದು ದೇಶ-ಒಂದು ಚುನಾವಣೆ; ಒಂದು ಭಾಷೆ-ಒಂದು ಸಂಸ್ಕೃತಿಯ ಪ್ರತಿಪಾದಕರಿಗೆ ಚುರುಕು ಮುಟ್ಟಿಸಿದ್ದಾರೆ. ಪ್ರಾದೇಶಿಕ ಪಕ್ಷಗಳನ್ನು ಬಲಪಡಿಸಿ, ಒಕ್ಕೂಟ ವ್ಯವಸ್ಥೆಗೆ ಶಕ್ತಿ ತುಂಬಿದ್ದಾರೆ. ಸಿಎಎ ಹಾಗೂ ಎನ್‌ಆರ್‌ಸಿ ಕುರಿತು ಚಕಾರ ಎತ್ತದಂತೆ ಮಾಡಿದ್ದಾರೆ. ಒಂದು ಪಕ್ಷದ ನಿಯಂತ್ರಣ ತಪ್ಪಿಸಿ, ಸಮ್ಮಿಶ್ರ (ಮೈತ್ರಿ) ಸರಕಾರದ ಪರ ಒಲವು ತೋರಿದ್ದಾರೆ. ಇನ್ನು ಸಂವಿಧಾನದ ವಿರುದ್ಧ ದನಿ ಎತ್ತದಂತೆ ಮಾಡಿದ್ದಾರೆ. ‘ಭಾರತವೆಂದರೆ ಹಿಂದುತ್ವ ಅಲ್ಲ, ಬಹುತ್ವ’ ಎಂದು ತೋರಿಸಿಕೊಟ್ಟಿದ್ದಾರೆ.

ಕೇಂದ್ರದಲ್ಲಿ ಯಾವುದೇ ಪಕ್ಷ ಸ್ವಂತ ಬಲದ ಮೇಲೆ ಸರಕಾರ ರಚಿಸಲು 272 ಸ್ಥಾನಗಳು ಬೇಕು. ಬಿಜೆಪಿ ಗೆದ್ದಿರುವುದು 240 ಸ್ಥಾನ. ಇನ್ನು 32 ಸ್ಥಾನ ಕಡಿಮೆ ಬಿದ್ದಿವೆ. ಹೀಗಾಗಿ ಜೆಡಿಯು, ತೆಲುಗು ದೇಶಂ ಮತ್ತಿತರ ಸಣ್ಣಪುಟ್ಟ ಪಕ್ಷಗಳ ಬೆಂಬಲ ಪಡೆದಿದೆ. ಈವರೆಗೆ ಬಿಜೆಪಿಯ ‘ಅನಭಿಷಕ್ತ ಸಾಮ್ರಾಟ’ರಾಗಿದ್ದ ಪ್ರಧಾನಿ ಮೋದಿಯವರ 56 ಇಂಚಿನ ಎದೆ ಕುಗ್ಗಿದೆ. ಸದ್ಯ ಮಿತ್ರರಾಗಿರುವ, ಚಾಲಾಕಿ ರಾಜಕಾರಣಿಗಳಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರನ್ನು ‘ಮ್ಯಾನೇಜ್’ ಮಾಡುವ ಸಾಹಸ ಮಾಡಬೇಕಿದೆ. ಇದು ತಂತಿಯ ಮೇಲಿನ ನಡಿಗೆ. ಈ ಹೊಸ ಪಾತ್ರ ಮೋದಿ ಅವರಿಗೆ ಒಗ್ಗುವುದೇ ಎಂದು ಈಗಲೇ ಹೇಳುವುದು ಕಷ್ಟ.

ನಾಯ್ಡು, ನಿತೀಶ್ ಇಬ್ಬರೂ ಅನುಭವಿ ರಾಜಕಾರಣಿಗಳು. ಮೋದಿ ಅವರಿಗೆ ಸಮಕಾಲೀನರಾದರೂ ರಾಜಕಾರಣದಲ್ಲಿ ಪಳಗಿದವರು. 1995ರಲ್ಲೇ ಮುಖ್ಯಮಂತ್ರಿ ಆಗಿದ್ದವರು ನಾಯ್ಡು. ನಿತೀಶ್ ಅವರೂ 1985ರಲ್ಲೇ ಶಾಸಕರಾಗಿದ್ದರು. 1996ರಲ್ಲೇ ಲೋಕಸಭೆಗೆ ಆಯ್ಕೆಯಾಗಿ, ಕೇಂದ್ರ ಸಚಿವರಾಗಿ ಕೆಲಸ ಮಾಡಿದವರು. ಬಿಹಾರದ ಮುಖ್ಯಮಂತ್ರಿಗೆ ಮೈತ್ರಿ ರಾಜಕಾರಣ ಹೊಸದಲ್ಲ. ಅದರಲ್ಲಿ ಮಿಂದೆದ್ದಿದ್ದಾರೆ. ನಾಯ್ಡು ಅವರೂ ಅಷ್ಟೇ.

ಸರಕಾರ ರಚನೆಗೆ ಮೊದಲೇ ಈ ಇಬ್ಬರೂ ಹಲವು ಬೇಡಿಕೆಗಳನ್ನು ಮೋದಿ ಅವರ ಮುಂದಿಟ್ಟಿದ್ದಾರೆ. ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕೊಡಬೇಕು. ಹೆಚ್ಚಿನ ಹಣಕಾಸು ನೆರವು ನೀಡಬೇಕು ಎಂದಿದ್ದಾರೆ . ಹಿಂದಿನ ಸರಕಾರ ಜಾರಿಗೆ ತಂದಿದ್ದ ‘ಅಗ್ನಿವೀರ್’ ಯೋಜನೆ ರದ್ದುಪಡಿಸಲು ನಿತೀಶ್ ಆಗ್ರಹಿಸಿದ್ದಾರೆ. ಕೇಂದ್ರ ಸಂಪುಟದಲ್ಲಿ ಎಷ್ಟು ಮಂತ್ರಿ ಸ್ಥಾನ ಬೇಕು. ಯಾವ ಇಲಾಖೆಗಳನ್ನು ಕೊಡಬೇಕು ಎಂದು ಪಟ್ಟಿ ಕೊಟ್ಟಿದ್ದಾರೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೂ ಕೃಷಿ ಖಾತೆಗೆ ಆಗ್ರಹಿಸಿದ್ದಾರೆ. ಮೈತ್ರಿಯಲ್ಲಿ ಸ್ನೇಹಕ್ಕಿಂತ ‘ವ್ಯವಹಾರ’ವೇ ಹೆಚ್ಚಿರುತ್ತದೆ. ಮೈತ್ರಿಯಿಂದ ತಮಗೆಷ್ಟು ಲಾಭ ಎಂಬ ಲೆಕ್ಕಾಚಾರ ಮಿತ್ರ ಪಕ್ಷಗಳದ್ದು. ಲೆಕ್ಕಾಚಾರಗಳು ತಪ್ಪಿದಾಗ ಸರಕಾರಗಳು ಪತನವಾಗಿವೆ. ಮೋದಿಯವರು 10 ವರ್ಷಗಳಲ್ಲಿ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯಗಳಿಂದ ಸಂಗ್ರಹವಾಗಿದ್ದ ತೆರಿಗೆ ಪಾಲನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ. ಅನುದಾನ ಸರಿಯಾಗಿ ಕೊಟ್ಟಿಲ್ಲ ಎಂಬ ಕೂಗೆದ್ದಿತ್ತು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ್ದು ಕೆಲವು ಜವಾಬ್ದಾರಿಗಳಿವೆ. ರಾಜ್ಯಗಳದ್ದು ಒಂದಷ್ಟು ಹೊಣೆಗಾರಿಕೆ ಇರುತ್ತವೆ. ಎನ್‌ಡಿಎ ಸರಕಾರ ರಾಜ್ಯಗಳ ಅಧಿಕಾರ ಅತಿಕ್ರಮಿಸಿತ್ತು. ಬಿಜೆಪಿಯೇತರ ಸರಕಾರಗಳ ವಿರೋಧದ ನಡುವೆ ಹೊಸ ಶಿಕ್ಷಣ ನೀತಿ ಜಾರಿಯಾಯಿತು. ಈ ರೀತಿಯ ತೀರ್ಮಾನಗಳನ್ನು ಕೈಗೊಳ್ಳಲು ಸಮ್ಮಿಶ್ರ ಸರಕಾರದಲ್ಲಿ ಅವಕಾಶವಿರುವುದಿಲ್ಲ. ಹೆಜ್ಜೆಹೆಜ್ಜೆಗೆ ಮಿತ್ರರ ಒಪ್ಪಿಗೆ ಪಡೆಯಬೇಕು. ಅವರು ಒಪ್ಪಿದರೆ ಮುಂದುವರಿಯಬೇಕು, ಇಲ್ಲದಿದ್ದರೆ ಸುಮ್ಮನಾಗಬೇಕು.

ಎನ್‌ಡಿಎ ಮೈತ್ರಿಕೂಟದಲ್ಲಿ ಸಣ್ಣ ಸಮಸ್ಯೆಯಿದೆ. ಇದು ಚುನಾವಣಾ ಪೂರ್ವ ಮೈತ್ರಿಯಾಗಿದ್ದರೂ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ಗಳನ್ನು (ಸಿಎಂಪಿ) ಇಟ್ಟುಕೊಂಡು ಜನರ ಮುಂದೆ ಹೋಗಿಲ್ಲ. ಹೀಗಾಗಿ, ಯಾವುದೇ ಕ್ಷಣದಲ್ಲಿ ಬಿಕ್ಕಟ್ಟು ತಲೆದೋರಬಹುದು. ಇಂಥ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೆ ಜವಾಬ್ದಾರಿ ಹೆಚ್ಚಿ ರುತ್ತದೆ. ಚುನಾವಣೋತ್ತರ ಹೊಂದಾಣಿಕೆಯಾಗಿದ್ದರೆ ಸಮಸ್ಯೆ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ರಾಷ್ಟ್ರಪತಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಕಾನೂನು ತಜ್ಞರನ್ನು ಅವಲಂಬಿಸಬೇಕಾಗುತ್ತದೆ.

ದೇಶಕ್ಕೆ ಸಮ್ಮಿಶ್ರ ಸರಕಾರ ಹೊಸದೇನೂ ಅಲ್ಲ.

ದಿ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಬಳಿಕ 1977ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪರಿವಾರದ ಪಕ್ಷಗಳು ವಿಲೀನವಾಗಿ ಜನತಾ ಪಕ್ಷವಾಗಿತ್ತು. ಬಳಿಕ ಮೊರಾರ್ಜಿ ದೇಸಾಯಿ ಅವರ ನಾಯಕತ್ವದಲ್ಲಿ ಅಧಿಕಾರಕ್ಕೆ ಬಂದಿದ್ದವು. ಅಲ್ಲಿಂದ ಸಮ್ಮಿಶ್ರ ಸರಕಾರ ಉದಯವಾಯಿತು. ಆಂತರಿಕ ಕಿತ್ತಾಟದಿಂದ ಅದು ಬಹಳ ಸಮಯ ಉಳಿಯಲಿಲ್ಲ.

ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 1989ರ ಚುನಾವಣೆಯಲ್ಲಿ ಅಗತ್ಯ ಬಹುಮತ ಪಡೆಯಲು ವಿಫಲವಾಯಿತು. ಸರಕಾರ ರಚಿಸಲು ಅವರು ಹಿಂಜರಿದಾಗ ವಿ.ಪಿ.ಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂತು. ಅದೂ ಹೆಚ್ಚು ಸಮಯ ಉಳಿಯಲಿಲ್ಲ. ಆ ಸಮಯದಲ್ಲಿ ರಾಷ್ಟ್ರಪತಿ ಆಗಿದ್ದ ಆರ್.ವೆಂಕಟರಾಮನ್ ರೂಲ್ ಪುಸ್ತಕ ಇಟ್ಟುಕೊಂಡೇ ತೀರ್ಮಾನಗಳನ್ನು ಕೈಗೊಂಡಿದ್ದರು. ಸಮ್ಮಿಶ್ರ ಸರಕಾರ ಸಾಧಕ- ಬಾಧಕ ಕುರಿತು ತಳಬುಡ ಜಾಲಾಡಿದ್ದರು. ದೇಶದಲ್ಲಿ ಮುಂದೆ ಸಮ್ಮಿಶ್ರ ಸರಕಾರದ ಪರಂಪರೆ ಮುಂದುವರಿಯಲಿದೆ ಎಂದು ಅವರು ಸುಳಿವು ನೀಡಿದ್ದರು. ಅವರ ಮಾತು ನಿಜವಾಗಿದೆ.

2014 ಹಾಗೂ 2019ರಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಸಣ್ಣಪುಟ್ಟ ಪಕ್ಷಗಳ ಬೆಂಬಲದಿಂದ ಕೇಂದ್ರದಲ್ಲಿ ಸರಕಾರ ಮಾಡಿತ್ತು. ಮೋದಿ ಪ್ರಭಾವಿ ನಾಯಕರಾಗಿದ್ದರಿಂದ ಅವರನ್ನು ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ. ಏಕ ವ್ಯಕ್ತಿ ಸಾಮ್ರಾಜ್ಯ ಅದಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಮೋದಿ ಅವರೇ ಮಿತ್ರ ಪಕ್ಷಗಳ ಮರ್ಜಿಗೆ ಬಿದ್ದಿದ್ದಾರೆ. ಇದು ಪೂರ್ಣಾವಧಿ ಮುಗಿಸುವುದೇ ಅಥವಾ ಮಧ್ಯದಲ್ಲೇ ಉರುಳುವುದೇ ಎಂದು ಬಲ್ಲವರಾರು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹೊನಕೆರೆ ನಂಜುಂಡೇಗೌಡ

contributor

Similar News