ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊಣಕಾಲು ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆ ಯಶಸ್ವಿ

ರಾಯಚೂರು : ಕಳೆದ 10 ವರ್ಷಗಳಿಂದ ವಿಪರೀತ ಮೊಣಕಾಲು ಕೀಲು ನೋವಿನಿಂದ ಬಳಲುತ್ತಿದ್ದ ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದ ನಿವಾಸಿಯಾದ ಗಂಗಮ್ಮ (75) ಅವರಿಗೆ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಎ.6ರಂದು ಯಶಸ್ವಿ ಮೊಣಕಾಲು ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಸಿಂಧನೂರು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ನಾಗರಾಜ್ ಅವರು ತಿಳಿದ್ದಾರೆ.
ಮೊಣಕಾಲು ಕೀಲು ಮರು ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ದೆಹಲಿಯ ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಏಮ್ಸ್)ನ ನುರಿತ ವೈದ್ಯರಾದ ಡಾ.ವಿಜಯಕುಮಾರ್ ಮತ್ತು ಡಾ.ತುಷಾರ್ ನಾಯಕ್ ಅವರ ನೇತೃತ್ವದಲ್ಲಿ ಮಾಡಲಾಯಿತು.
ಈ ಶಸ್ತ್ರ ಚಿಕಿತ್ಸೆಗೆ ತಜ್ಞರಾದ ಡಾ.ಸಲಾವುದ್ದಿನ್ ಖಾಲಿದ್, ಅರವಳಿಕೆ ತಜ್ಞರಾದ ಡಾ.ಕೋನಿಕಾ ನಾಗರಾಜ ಕಾಟ್ವಾ, ಮುಖ್ಯ ವೈದ್ಯಾಧಿಕಾರಿಗಳಾದ ಡಾ.ನಾಗರಾಜ್ ಕಾಟವಾ, ಸಿಬ್ಬಂದಿ ಅನ್ನಪೂರ್ಣ, ತಿಮ್ಮೇಶ್, ಶಿವನಮ್ಮ, ರಾಜಾವಲಿ, ಅಡವಿಕಾಂತ್, ಅನಿಲ್ ಕುಮಾರ್, ರಾಜೇಶ್ ಸೇರಿದಂತೆ ಇನ್ನೀತರರು ಸಹಕಾರ ನೀಡಿದರು.
ಡಿ.ಸಿ ಹಾಗೂ ಸಿಇಓ ಅಭಿನಂದನೆ :
ಮೊಣಕಾಲು ಕೀಲು ಮರು ಮರುಜೋಡಣೆ ಶಸ್ತ್ರ ಚಿಕಿತ್ಸೆಯನ್ನು ನಡೆಸಿದ ಕರ್ನಾಟಕದ ಮೊದಲ ತಾಲೂಕು ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಸಿಂಧನೂರು ಸರ್ಕಾರಿ ಆಸ್ಪತ್ರೆ ಪಾತ್ರವಾದ ಕಾರಣ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ, ಶುಶ್ರೂಷಕ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ನಂದಿತಾ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಆಯುಷ್ಮಾನ್ ಕಾರ್ಡಿನಡಿ ಚಿಕಿತ್ಸೆ :
ಮಹಿಳೆಯರನ್ನೇ ಹೆಚ್ಚಾಗಿ ಕಾಡುವ ಈ ಮೊಣಕಾಲು ಕೀಲು ನೋವಿನ ಶಸ್ತ್ರ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 5 ಲಕ್ಷ ರೂ. ವೆಚ್ಚವಾಗಲಿದೆ. ಗೋರೆಬಾಳ ಗ್ರಾಮದ ಗಂಗಮ್ಮನಿಗೆ ಆಯುಷ್ಮಾನ್ ಕಾರ್ಡ್ ನಡಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕಾರ್ಡ್ ಹೊಂದಿದವರಿಗೆ 5 ಲಕ್ಷ ರೂ. ಗಳ ಸಹಾಯಧನವನ್ನು ಸರಕಾರವೇ ಭರಿಸಲಿದೆ. ಮೊಣಕಾಲು ನೋವಿನಿಂದ ಬಳಲುತ್ತಿರುವವರು ಈ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಬೇಕು ಎಂದು ಇದೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರುಸಲಹೆ ಮಾಡಿದ್ದಾರೆ.
ತಪ್ಪು ಕಲ್ಪನೆ ಬೇಡ :
ತಿಂಗಳಿಗೆ ಹಲವಾರು ಜನ ಮೊಣಕಾಲು ಕೀಲು ನೋವಿನಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಾರೆ. ಕೀಲು ನೋವು ಶಸ್ತ್ರಚಿಕಿತ್ಸೆ ಬಗ್ಗೆ ರೋಗಿಗಳಲ್ಲಿ ಇರುವ ತಪ್ಪು ಭಾವನೆಯಿಂದ ಚಿಕಿತ್ಸೆ ಪಡೆಯಲು ಭಯಪಡುತ್ತಾರೆ. ಮೊಣಕಾಲು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಯಿಂದ ರೋಗಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಶಸ್ತ್ರ ಚಿಕಿತ್ಸೆಗೆ ಒಳಗಾಗಿ 7-8 ದಿನದಲ್ಲಿ ಮೊದಲಿನಂತೆ ಯಾವುದೇ ನೋವಿಲ್ಲದೆ ತಿರುಗಾಡಬಹುದಾಗಿದೆ ಎನ್ನುತ್ತಾರೆ ಡಿಎಚ್ ಓ ಡಾ.ಸುರೇಂದ್ರ ಬಾಬು.