ರಾಯಚೂರು | ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ರಾಯಚೂರು : ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ಮಾಡಲಾಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ ಹಾಲಿನ ದರ, ವಿದ್ಯುತ್ ದರ, ಬಸ್ ಪ್ರಯಾಣ ದರ, ಸ್ಟಾಂಪ್ ಶುಲ್ಕ, ಮದ್ಯದ ದರ ಹೆಚ್ಚಳ ಮಾಡಿದ್ದು, ಜನಸಾಮಾನ್ಯರು, ಮಧ್ಯಮ ವರ್ಗದವರ ಬದುಕಿಗೆ ಕೊಡಲಿ ಏಟು ನೀಡಿದೆ ಎಂದು ಪ್ರತಿಭಟನಾನಿರತರು ದೂರಿದರು.
‘ದಿನೇದಿನೇ ಹೊಸ ಹೊಸ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 3 ರೂ. ಹೆಚ್ಚಳ ಮಾಡಿ ಬೆಲೆ ಏರಿಕೆ ಆರಂಭಿಸಿದ ರಾಜ್ಯ ಸರ್ಕಾರ, ಈಗ ಹಾಲಿನ ದರ 4 ರೂ. ಹೆಚ್ಚಳ ಮಾಡಿದೆ. ಒಂದಾದ ಮೇಲೆ ಒಂದು ಪದಾರ್ಥದ ಬೆಲೆ ಹೆಚ್ಚಳ ಮಾಡಿದೆ. ಹಾಲಿನ ದರವನ್ನು ಎರಡು ವರ್ಷದಲ್ಲಿ ಮೂರು ಬಾರಿ ಒಟ್ಟು 9ರೂ. ಹೆಚ್ಚಳ ಮಾಡಲಾಗಿದೆ. ಆ ಮೂಲಕ ಬಡವರ ಮತ್ತು ಮಧ್ಯಮ ವರ್ಗದವರ ಮಗ್ಗಲು ಮುರಿಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಉಟ್ಕೂರು ರಾಘವೇಂದ್ರ, ತ್ರಿವಿಕ್ರಮ ಜೋಷಿ, ರಾಜಕುಮಾರ, ಬಿ.ಗೋವಿಂದ, ಶರಣಮ್ಮ, ವಾಣಿ ಶ್ರೀ, ಪಲಗುಲ ನಾಗರಾಜ, ರಾಮಚಂದ್ರ ಕಡಗೋಲ, ಲಲಿತಾ ಕಡಗೋಲ ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.