ಎಐಎಫ್ಎಫ್ ಕಾರ್ಯಕಾರಿ ಸಮಿತಿಗೆ 5 ಮಾಜಿ ಆಟಗಾರರ ಸೇರ್ಪಡೆ: ಕರಡು ಸಂವಿಧಾನ ಪ್ರಸ್ತಾವ

ಹೊಸದಿಲ್ಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್)ನ ಕರಡು ಸಂವಿಧಾನವು ಹಲವು ಆಮೂಲಾಗ್ರ ಬದಲಾವಣೆಗಳನ್ನು ಸೂಚಿಸಿದೆ. 14 ಸದಸ್ಯರ ಕಾರ್ಯಕಾರಿ ಸಮಿತಿಗೆ ಕನಿಷ್ಠ ಐವರು ಮಾಜಿ ರಾಷ್ಟ್ರೀಯ ಆಟಗಾರರನ್ನು ಸೇರ್ಪಡೆಗೊಳಿಸುವುದು ಮತ್ತು ಪದಾಧಿಕಾರಿಗಳನ್ನು ಅವಿಶ್ವಾಸ ನಿರ್ಣಯದ ಮೂಲಕ ತೆಗೆದುಹಾಕುವುದು- ಇದರ ಎರಡು ಪ್ರಮುಖ ಪ್ರಸ್ತಾವಗಳಾಗಿವೆ.
ನಿವೃತ್ತ ನ್ಯಾಯಾಧೀಶ ಎಲ್. ನಾಗೇಶ್ವರ ರಾವ್ ಸಿದ್ಧಪಡಿಸಿರುವ ಕರಡು ಸಂವಿಧಾನವನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದೆ. ಎಐಎಫ್ಎಫ್ ಸಂವಿಧಾನವನ್ನು ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದ ಅರ್ಜಿಗಳ ಅಂತಿಮ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವೊಂದು ಮಾರ್ಚ್ 25ರಂದು ಆರಂಭಿಸಿದೆ.
‘‘ಕಾರ್ಯಕಾರಿ ಸಮಿತಿಯ (2022 ಸೆಪ್ಟಂಬರ್ನಲ್ಲಿ ನಡೆದ ಚುನಾವಣೆಯಂತೆ) ಹಾಲಿ ಚುನಾಯಿತ ಸದಸ್ಯರು ತಮ್ಮ ನಾಲ್ಕು ವರ್ಷಗಳ ಪೂರ್ಣಾವಧಿಯವರೆಗೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಬಳಿಕ ಸುಧಾರಿತ ಸಂವಿಧಾನದಲ್ಲಿ ವಿವರಿಸಲಾಗಿರುವಂತೆ ಹೊಸದಾಗಿ ಚುನಾವಣೆಗಳನ್ನು ನಡೆಸಬೇಕು’’ ಎಂದು ಕರಡು ಸಂವಿಧಾನ ಹೇಳುತ್ತದೆ.