ಬೆಂಗಳೂರು | ಯುವ ವಿಜ್ಞಾನಿ ಕಾರಿಗೆ ಕಲ್ಲೆಸೆದು ಹಲ್ಲೆಗೆ ಯತ್ನ: ಪ್ರಕರಣ ದಾಖಲು

Update: 2023-08-29 12:43 GMT

ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರು  (Photo Credit - Twitter@ashuvishen)

ಬೆಂಗಳೂರು, ಆ.29: ಯುವ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರಿಗೆ ಕಲ್ಲೆಸೆದು ಹಲ್ಲೆಗೆ ಯತ್ನಿಸಿದ ಆರೋಪದಡಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಆ.24ರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ದೂರು ಪಡೆಯಲಾಗಿದೆ. ಕೃತ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಶುತೋಷ್ ಸಿಂಗ್ ಅವರು ತಮ್ಮ ಕ್ವಿಡ್ ಕಾರಿನಲ್ಲಿ ರಾವತ್ತನಹಳ್ಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದರು. ಇದೇ ವೇಳೆ ಅವರ ಕಾರಿಗೆ ಕಲ್ಲು ಎಸೆಯಲಾಗಿದೆ. ನಂತರ, ಕಾರು ಹಿಂಬಾಲಿಸಿದ್ದ ದುಷ್ಕರ್ಮಿಗಳು ಮಾರ್ಗ ಮಧ್ಯೆಯೇ ಹಲ್ಲೆಗೆ ಯತ್ನಿಸಿದ್ದರು. ಆದರೆ, ಯುವ ವಿಜ್ಞಾನಿ ಆರೋಪಿಗಳಿಂದ ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ.

ಯಾವ ಕಾರಣಕ್ಕೆ ಕಲ್ಲು ಎಸೆಯಲಾಗಿದೆ ಎಂಬುದರ ಕುರಿತು ಕಾರಣ ತಿಳಿದುಬಂದಿಲ್ಲ. ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News