ಬೆಂಗಳೂರು | ತಾಯಿ-ಮಗನ ಜೋಡಿ ಕೊಲೆ ಪ್ರಕರಣಕ್ಕೆ ತಿರುವು: ಆರೋಪಿ ಬಂಧನ

Update: 2023-09-08 13:39 GMT

ಕೊಲೆಗೀಡಾದ ತಾಯಿ- ಮಗ

ಬೆಂಗಳೂರು, ಸೆ.8: ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ರವೀಂದ್ರನಾಥ ಗುಡ್ಡೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಆರೋಪಿ ಶೇಖರ್ ಎಂಬಾತನನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ನವನೀತಾ (35) ಹಾಗೂ ಸಾಯಿ ಸೃಜನ್ (8) ನನ್ನು ಹತ್ಯೆ ಮಾಡಿದ್ದ ಆಕೆಯ ಪ್ರಿಯಕರ ಶೇಖರ್ ಎಂಬುವನನ್ನು ನಗರದ ಬಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ನವನೀತಾ ತನ್ನ ಪತಿಯನ್ನು ತೊರೆದು ಮಗನೊಂದಿಗೆ 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ವೇಳೆ, ನವನೀತಾಳಿಗೆ ಆರೋಪಿ ಶೇಖರ್ ಪರಿಚಯವಾಗಿತ್ತು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಆದರೆ, ಇತ್ತೀಚಿಗೆ ನವನೀತ ಶೇಖರ್ ನನ್ನು ಬಿಟ್ಟು ಲೋಕೇಶ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಶೇಖರ್, ಲೋಕೇಶ್‍ನ ಸಹವಾಸ ನಿಲ್ಲಿಸುವಂತೆ ನವನೀತಾಳಿಗೆ ಎಚ್ಚರಿಕೆ ನೀಡಿದ್ದ. ಆದರೂ ನವನೀತ ಲೋಕೇಶ್ ಜೊತೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.

ಸೆ.4ರಂದು ಎಂದಿನಂತೆ ನವನೀತಾಳ ಮನೆಗೆ ಬಂದಿದ್ದ ಶೇಖರ್ ನವನೀತಾಳ ಮಗನನ್ನು ಮನೆಯಿಂದ ಆಚೆ ಕಳುಹಿಸಿ ಆಕೆಯೊಂದಿಗೆ ಗಲಾಟೆ ಆರಂಭಿಸಿದ್ದ. ಈ ವೇಳೆ ಚಾಕುವಿನಿಂದ ಅವರ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದ. ಬಳಿಕ ಮನೆಗೆ ಬಂದ ನವನೀತಾಳ ಮಗನಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆ ಎಂದು ನಂಬಿಸಿ ಆತನ ಎರಡೂ ಕೈಕಾಲುಗಳನ್ನು ಕಟ್ಟಿದ್ದ. ನಂತರ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಮೃತ ದೇಹಗಳನ್ನು ರೂಮಿನಲ್ಲಿ ಮಂಚದ ಮೇಲೆ ಎಸೆದು ಪರಾರಿಯಾಗಿದ್ದ ಎಂದು ಹೇಳಲಾಗಿದೆ. 

ಈ ಘಟನೆ ಸಂಬಂಧ ಮೃತಳ ತಾಯಿ ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಬೇರಡೆ ಇದ್ದ ಆಕೆಯ ಪತಿ ಚಂದ್ರುವೇ ಮನೆಗೆ ಬಂದು ಹತ್ಯೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡದೊಂದಿಗೆ ತನಿಖೆ ಕಾರ್ಯಾಚರಣೆ ಕೈಗೊಂಡಾಗ ಸತ್ಯ ಬಯಲಾಗಿದ್ದು, ಆರೋಪಿ ಶೇಖರ್‌ ನನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News