ಬಿಜೆಪಿ ಸರಕಾರದ ಶೇ.40 ಕಮಿಷನ್ ಹಗರಣ ಆರೋಪ: ತನಿಖಾ ಸಮಿತಿ ಗಡುವು ವಿಸ್ತರಣೆ ಮಾಡಿದ ಸರಕಾರ

Update: 2023-08-26 16:18 GMT

ಬೆಂಗಳೂರು ಆ.26: ಹಿಂದಿನ ಬಿಜೆಪಿ ಸರಕಾರ ವಿರುದ್ಧ ಕೇಳಿಬಂದಿದ್ದ ಶೇ.40 ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ರಚಿಸಿದ್ದ ತನಿಖಾ ಸಮಿತಿಯ ಗಡುವು ಹೆಚ್ಚಿಸಿದ್ದು, 3 ತಿಂಗಳೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರಕಾರ ಸೂಚಿಸಿದೆ.

ಬಿಜೆಪಿ ಆಡಳಿತಾವಧಿಯಲ್ಲಿನ ವಿವಿಧ ಇಲಾಖೆಗಳಲ್ಲಿ ಹಲವು ಅಕ್ರಮಗಳ ಆರೋಪದ ಸಂಬಂಧ ಕಾಂಗ್ರೆಸ್ ಸರಕಾರ ಆ.17ರಂದು ಸಮಿತಿ ರಚಿಸಿ, ತನಿಖೆಗೆ ಸೂಚಿಸಿ ಆದೇಶ ಹೊರಡಿಸಿತ್ತು. ಶನಿವಾರ ಪುನಃ ಅಧಿಸೂಚನೆ ಹೊರಡಿಸಿ ಮೂರು ತಿಂಗಳೊಳಗಾಗಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ಕೆಂಪಣ್ಣ ಅವರು ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ಸರಕಾರ ತನಿಖೆಗೆ ಆದೇಶಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧತಿ, ಪುನರ್ ಅಂದಾಜು, ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಸತ್ಯಾಸತ್ಯತೆ ಪರಾಮರ್ಶಿಸಬೇಕು. ವಿಸ್ತೃತವಾದ ತನಿಖೆ ನಡೆಸಿ ಲೋಪದೋಷಗಳ ಮಾಹಿತಿ, ಆರೋಪಿತರ ಸ್ಪಷ್ಟಗುರುತಿಸುವಿಕೆ ಸಹಿತ 3 ತಿಂಗಳದೊಳಗೆ ವರದಿ ನೀಡಬೇಕು ಎಂದು ಸೂಚಿಸಿದೆ.

ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನವೇ ಶೇ.25-30ರ ವರೆಗೆ ಸಾರ್ವಜನಿಕ ಪ್ರತಿನಿಧಿಗಳಿಗೆ ಮತ್ತು ಇತರರಿಗೆ ಲಂಚ ನೀಡಬೇಕಾದ ಪರಿಸ್ಥಿತಿಯ ಬಗ್ಗೆ ಮತ್ತು ಕಾಮಗಾರಿಗಳು ಪೂರ್ಣವಾದ ನಂತರ ಬಾಕಿ ಬಿಲ್‍ಗಳ ಪಾವತಿಗೆ ಶೇ.5-6ರವರೆಗೆ ಎಲ್‍ಒಸಿ ಬಿಡುಗಡೆಗೆ ನೀಡಬೇಕು ಎಂಬುದರ ಕುರಿತು ಕೆಂಪಣ್ಣ ದೂರಿನಲ್ಲಿ ಉಲ್ಲೇಖಿಸಿದ್ದರು. ಗಂಭೀರ ಆರೋಪಗಳ ಕುರಿತು ಸರಕಾರದ ಮಟ್ಟದಲ್ಲಿ ಯಾವುದೇ ತನಿಖೆ ನಡೆದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಡಳಿತದಲ್ಲಿ ಪಾರದರ್ಶಕತೆ ಜಾರಿಗೊಳಿಸಲು ತನಿಖೆಯ ಅವಶ್ಯಕತೆ ಇದೆ ಎಂದು ಆದೇಶದಲ್ಲಿ ತಿಳಿಸಿದೆ.

ತನಿಖಾ ಸಮಿತಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸಮಿತಿ ಕಾಲಾನುಕಾಲಕ್ಕೆ ತನಿಖೆಗಾಗಿ ಕೇಳುವ ಎಲ್ಲಾ ಕಡತಗಳು, ದಾಖಲೆ ಇತ್ಯಾದಿ ಒದಗಿಸಬೇಕು ಮತ್ತು ಖುದ್ದು ಹಾಜರಿದ್ದು ತನಿಖೆಗೆ ಸಹಕರಿಸಬೇಕು. ಸಮಿತಿ ಅಗತ್ಯವಿದ್ದರೆ ಅಧ್ಯಕ್ಷರ ಕೋರಿಕೆಯ ಮೇರೆಗೆ ಗುಣಮಟ್ಟಪರೀಕ್ಷೆಗೆ ನೋಂದಾಯಿತ 3ನೆ ಸ್ವತಂತ್ರ ಸಂಸ್ಥೆಯ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ತನಿಖೆಯ ಪ್ರಮುಖ ಅಂಶಗಳು..!

-ಕಾಮಗಾರಿಗಳ ಅಂದಾಜು ಪ್ರಮಾಣ ವಾಸ್ತವಿಕವಾಗಿದೆಯೇ? ಅಥವಾ ಕೃತಕವಾಗಿ ಹೆಚ್ಚಿಸಲಾಗಿದೆಯೇ? ಹೆಚ್ಚಿಸಿದ್ದರೆ ಪ್ರಮಾಣ ಮತ್ತು ಹಣಕಾಸಿನ ಬದ್ಧತೆ ಎಷ್ಟು? ಯಾವ ಹಂತದಲ್ಲಿ ಹೆಚ್ಚಿಸಲಾಗಿದೆ?

-ಕಾಮಗಾರಿಗಳ ಅನುಷ್ಠಾನದ ವೇಳೆ ಆಗಿರುವ ಹೆಚ್ಚುವರಿ ವ್ಯತ್ಯಾಸದ ಅನಿವಾರ್ಯತೆ ಮತ್ತು ಅಗತ್ಯತೆ.

-ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್ ಪಾವತಿ ಮಾಡಲಾಗಿದೆಯೇ? ಅಥವಾ ಹೆಚ್ಚುವರಿಯಾಗಿ ಬಿಲ್ ಪಾವತಿಸಲಾಗಿದೆಯೇ?

-ಟೆಂಡರ್ ಕರೆಯುವಾಗ ಕೆಲವೇ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಮತ್ತು ಉಳಿದವರು ಟೆಂಡರ್‍ಗಳಲ್ಲಿ ಭಾಗವಹಿಸದಂತೆ ಷರತ್ತು ರೂಪಿಸಲಾಗಿತ್ತೆ?

-ಕಾಮಗಾರಿಯನ್ನು ಪ್ರಾರಂಭ ಮೊದಲು ಸಾಮಗ್ರಿಗಳು, ಉಪಕರಣಗಳು ಇತ್ಯಾದಿಗಳ ಗುಣಮಟ್ಟಪರೀಕ್ಷೆಯನ್ನು ನಿರ್ದಿಷ್ಟಪಡಿಸಿ, ಅಧಿಕೃತ ಏಜೆನ್ಸಿಗಳಿಂದ ಮಾಡಿಸಲಾಗಿದೆಯೇ?

-ಒಟ್ಟಾರೆ ಕಾಮಗಾರಿಗಳ ಕುರಿತಾದ ಟೆಂಡರ್ ಪ್ರಕ್ರಿಯೆ ಮತ್ತು ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರೆ ಯಾವುದಾದರೂ ಲೋಪದೋಷಗಳ ಬಗ್ಗೆ

-ಪರಿಶೀಲನೆಯ ಸಂದರ್ಭದಲ್ಲಿ ಸಮಿತಿಯ ಗಮನಕ್ಕೆ ಬರುವ ಇನ್ನಾವುದೇ ಗಂಭೀರ ವಿಷಯಗಳನ್ನು ತನಿಖಾ ಸಮಿತಿಯ ಅಧ್ಯಕ್ಷರು ಪರಾಮರ್ಶಿಸಬೇಕು

-ಕಾಮಗಾರಿಗಳಿಗೆ ನಿಯಮಾನುಸಾರ ಅನುಮೋದನೆ ನೀಡಲಾಗಿದೆಯೇ?

-ಗುಣಮಟ್ಟ, ಅಂದಾಜುಗಳನ್ನು ಪ್ರಚಲಿತ ದರಗಳಂತೆ ತಯಾರಿಸಲಾಗಿದೆಯೇ?

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News