ಜೋಡಿ ಕೊಲೆ ಪ್ರಕರಣಕ್ಕೆ ಕೋಮು ಬಣ್ಣ ಬಳಿಯುತ್ತಿರುವ ಬಿಜೆಪಿ ನಾಯಕರು; ವದಂತಿ ಹಬ್ಬಿಸದಂತೆ ಬೆಂಗಳೂರು ಪೊಲೀಸರಿಂದ ಎಚ್ಚರಿಕೆ

Update: 2023-07-12 19:35 GMT

ಬೆಂಗಳೂರು, ಜು.12: ಖಾಸಗಿ ಕಂಪೆನಿಗೆ ನುಗ್ಗಿ ಎಂಡಿ ಹಾಗೂ ಸಿಇಒ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪ್ರಕರಣಕ್ಕೆ ಕೆಲವು ಬಿಜೆಪಿ ನಾಯಕರು ಸೇರಿ ಹಲವರು ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಕೊಲೆಗೀಡಾದ ಪಣೀಂದ್ರ ಸುಬ್ರಹ್ಮಣ್ಯಂ ಅವರನ್ನು ಹಿಂದೂ ಮುಖಂಡ ಎಂದು ಉಲ್ಲೇಖಿಸಿ ಹಲವರು ಪೋಸ್ಟ್ ಮಾಡಿದ್ದಾರೆ. 

ಸಿ.ಟಿ ರವಿ ಟ್ವೀಟ್

''ಕರ್ನಾಟಕದಲ್ಲಿ ನೀವು ಆರಂಭಿಸಿದ "ಮೊಹಬ್ಬತ್ ಕಿ ದುಖಾನ್"ನಲ್ಲಿ, ರಾಷ್ಟ್ರೀಯವಾದಿಗಳಿಗೆ, ಹಿಂದುತ್ವದ ಸಮರ್ಥಕರಿಗೆ ಬದುಕುವ ಹಕ್ಕಿಲ್ಲವೇ? ಇಂದು ಹಾಡುಹಗಲೇ ಇಬ್ಬರ ಹತ್ಯೆಯಾಗಿದೆ. ರಾಜ್ಯ ಪ್ರತಿನಿತ್ಯ ರಾಷ್ಟ್ರೀಯವಾದಿಗಳ ರಕ್ತದಿಂದ ತೋಯುವುದು ನಿಮ್ಮ "ಸರ್ವ ಜನಾಂಗದ ಶಾಂತಿಯ ತೋಟವೇ"? ಎಂದು ಪ್ರಶ್ನಿಸಿ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟ್ಯಾಗ್ ಮಾಡಿದ್ದಾರೆ. 

 

''ಮತ್ತೊಬ್ಬ ಹಿಂದೂ ಮುಖಂಡ ಪಣೀಂದ್ರ ಸುಬ್ರಹ್ಮಣ್ಯಂ ಅವರನ್ನು ಕರ್ನಾಟಕದ ಬೆಂಗಳೂರಿನಲ್ಲಿ ಕೊಂದಿದ್ದಾರೆ. ಧಾರ್ವಿುಕ ಗುರುಗಳನ್ನು ವ್ಯವಸ್ಥಿತವಾಗಿ ನಿರ್ಮೂಲನೆ ಮಾಡಲಾಗುತ್ತಿದೆಯೇ? ಕಾಂಗ್ರೆಸ್ ತಮ್ಮ ಮೊಹಬ್ಬತ್ ಕಿ ದುಖಾನ್  ತೆರೆದಂದಿನಿಂದ ಹಿಂದೂ ಮೃತ ದೇಹಗಳು ರಾಶಿಯಾಗುತ್ತಿವೆ. ಮಾಧ್ಯಮಗಳು ಮತ್ತು ಆನ್‌ಲೈನ್ ಹಿಂದೂ ವೀರರು ಎಲ್ಲರೂ ಸುಮ್ಮನಿದ್ದಾರೆ'' ಎಂದು @@arunpudur ಎಂಬವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು ವದಂತಿ ಹಬ್ಬಿಸದಂತೆ ಎಚ್ಚರಿಕೆ ನೀಡಿದ್ದಾರೆ. 

ಬಂಧಿತ ಆರೋಪಿಗಳ ಬಗ್ಗೆ ಪೊಲೀಸರು ಹೇಳುವುದೇನು?

'ಕೊಲೆಯಾದ ಫಣೀಂದ್ರ ಸುಬ್ರಹ್ಮಣ್ಯಂ, ವಿನು ಕುಮಾರ್ ಹಾಗೂ ಆರೋಪಿ ಫಿಲಿಕ್ಸ್ ಈ ಹಿಂದೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಜೀ ನೆಟ್ ಎನ್ನುವ ಕಂಪೆನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆರು ತಿಂಗಳ ಹಿಂದೆ ಫಣೀಂದ್ರ ಸುಬ್ರಹ್ಮಣ್ಯಂ ಹಾಗೂ ವಿನು ಕುಮಾರ್ ಕಂಪೆನಿ ತೊರೆದಿದ್ದರು. 2022ರ ನವೆಂಬರ್‍ನಲ್ಲಿ ಅಮೃತಹಳ್ಳಿಯ ಪಂಪಾ ಲೇಔಟ್‍ನಲ್ಲಿ ತಮ್ಮದೇ ಇಂಟರ್ನೆಟ್ ಬ್ರಾಡ್ ಕಾಸ್ಟಿಂಗ್ ಎಂಬ ಹೊಸ ಕಂಪೆನಿ ಶುರು ಮಾಡಿದ್ದರು. ಈ ಹಿಂದಿನ ದ್ವೇಷದ ಕಾರಣ ಫಿಲಿಕ್ಸ್, ಫಣೀಂದ್ರರನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಇನ್ನಿಬ್ಬರು ವಿನಯ್ ರೆಡ್ಡಿ ಹಾಗೂ ಶಿವುಗೆ ಫಣೀಂದ್ರನ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ, ಫಿಲಿಕ್ಸ್ ಮಾತು ಕೇಳಿ ಹತ್ಯೆಗೆ ಕೈ ಜೋಡಿಸಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

''ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈಗಾಗಲೇ ತನಿಖೆ ನಡೆಯುತ್ತಿರುವಾಗ ಈ ಘಟನೆಯನ್ನು ಹೆಚ್ಚು ಹಂಚಿಕೊಳ್ಳದಂತೆ ನಮ್ಮ ಸಾರ್ವಜನಿಕರನ್ನು ನಾವು ವಿನಂತಿಸುತ್ತೇವೆ'' ಎಂದು @BlrCityPolice  ಟ್ವೀಟ್ ಮಾಡಿದೆ. 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News