ಕಾವೇರಿ ನದಿ ನೀರು ವಿವಾದ: ಸೆ.23ರಂದು ಮಂಡ್ಯ ಬಂದ್‍ಗೆ ಕರೆ

Update: 2023-09-21 16:19 GMT

ಮಂಡ್ಯ, ಸೆ.21: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿರುವುದನ್ನು ಖಂಡಿಸಿ ಗುರುವಾರ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಯಿತು.

ನ್ಯಾಯಾಲಯದ ನಿರ್ದೇಶನ ಹೊರಬೀಳುತ್ತಿದ್ದಂತೆ ರೊಚ್ಚಿಗೆದ್ದ ರೈತರು ಹಾಗು ವಿವಿಧ ಸಂಘಟನೆಗಳ ಕಾರ್ಯಕರ್ತರು ದಿಢೀರ್ ರಸ್ತೆ ತಡೆ ನಡೆಸಿ ನ್ಯಾಯಾಲಯ, ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಬಂದ್‍ಗೆ ಕರೆ

ಸುಪ್ರೀಂ ಕೋರ್ಟ್ ಆದೇಶಕ್ಕೆ ಮಂಡ್ಯ ಜಿಲ್ಲಾ ʻರೈತ ಹಿತರಕ್ಷಣಾ ಸಮಿತಿʻ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸೆ.23ರಂದು ಮಂಡ್ಯ ಬಂದ್‍ಗೆ ಕರೆ ನೀಡಿದೆ.

ಧರಣಿ ಸ್ಥಳದಲ್ಲಿ ಕೋರ್ಟ್ ಆದೇಶದ ಬಗ್ಗೆ ವಿವಿಧ ಸಂಘಟನೆಗಳ ಮುಖಂಡರು ಹಾಗು ಕಾರ್ಯಕರ್ತರ ಜತೆ ಚರ್ಚೆ ನಡೆಸಿದ ನಂತರ ಬಂದ್ ನಡೆಸಲು ತೀರ್ಮಾನಿಸಲಾಯಿತು.

ಬಂದ್ ಕರೆ ಕುರಿತಂತೆ ಚರ್ಚಿಸಲು ನಾಳೆ ಶುಕ್ರವಾರ ಬೆಳಗ್ಗೆ 11:00 ಗಂಟೆಗೆ ಮತ್ತೊಂದು ಸಭೆ ನಡೆಸಲು ತೀರ್ಮಾನಿಸಿದ್ದು, ಹಾಲಿ, ಮಾಜಿ ಸಂಸದರು, ಶಾಸಕರು, ವರ್ತಕ ಪ್ರತಿನಿಧಿಗಳು, ವಿದ್ಯಾರ್ಥಿ ಮುಖಂಡರು ಹಾಗು ಇತರೆ ಸಂಘಟನೆಗಳ ಮುಖಂಡರು ಭಾಗವಹಿಸಬೇಕು ಎಂದು ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News