ಸಮುದ್ರಕ್ಕೆ ಗಂಗಾ ಜಲವೂ ಬರುತ್ತೆ, ಚರಂಡಿ ನೀರೂ ಸೇರುತ್ತೆ: ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಸಚಿವ ಕೆ.ಎನ್​ ರಾಜಣ್ಣ ಅಸಮಾಧಾನ

Update: 2023-11-15 13:20 GMT

ಹಾಸನ, ನ.15: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ನ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಸಚಿವ ಕೆಎನ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಹಾಸನಾಂಬೆ ದೇವಿ ದರ್ಶನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಗಮನಕ್ಕೆ ತರದೇ ಗೌರಿಶಂಕರ್ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಅಸಮಾಧಾನವಿದೆ. ಜಿಲ್ಲೆಯ ಯಾವ ನಾಯಕರನ್ನೂ ಸಂಪರ್ಕಿಸದೆ ಸೇರಿಸಿಕೊಂಡಿದ್ದಕ್ಕೆ ಅಸಮಾಧಾನವಿದೆ. ಅವರ ಸೇರ್ಪಡೆ ಬಗ್ಗೆ ನನಗೆ, ಜಿ.ಪರಮೇಶ್ವರ್‌ ಅವರಿಗೆ, ಜಿಲ್ಲೆಯ ಉಳಿದ ಕಾಂಗ್ರೆಸ್‌ ಶಾಸಕರಿಗಾಗಲಿ ಮಾಹಿತಿ ನೀಡಿಲ್ಲ. ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗಾಗಲಿ ಮಾಹಿತಿ ನೀಡಿಲ್ಲ ಎಂದು ಅವರು ಹೇಳಿದರು.

ʼʼಕಾಂಗ್ರೆಸ್ ಪಕ್ಷ ಒಂದು ರೀತಿ ಸಮುದ್ರ. ಸಮುದ್ರಕ್ಕೆ ಗಂಗಾಮಾತೆಯಂತ ಪವಿತ್ರವಾದ ಜಲನೂ ಬರುತ್ತದೆ. ಪಕ್ಕದಲ್ಲಿರುವ ಚರಂಡಿ ನೀರೂ ಸೇರುತ್ತದೆ. ಸಮುದ್ರದಲ್ಲಿ ವಿಷನೂ ಇದೆ, ಅಮೃತನೂ ಇದೆʼʼ ಎಂದು ಅವರು ಅಸಮಾಧಾನ ಹೊರ ಹಾಕಿದರು. 

ʼʼನಮ್ಮ ಜಿಲ್ಲೆ ರಾಜಕಾರಣ ಏನೇ ಇದ್ದರೂ ಎಂತಹ ಸಂದರ್ಭ ಬಂದರೂ ನಿಭಾಯಿಸುವ ಶಕ್ತಿಯನ್ನು ನಮ್ಮ ಜಿಲ್ಲೆಯ ಜನ ಕೊಟ್ಟಿದ್ದಾರೆ. ಪರಮೇಶ್ವರ್‌ಗೂ ಕೊಟ್ಟಿದ್ದಾರೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಿಗೂ ಕೊಟ್ಟಿದ್ದಾರೆ. ಎಂತಹ ಸಂದರ್ಭ ಬಂದರೂ ನಿಭಾಯಿಸಿಕೊಳ್ಳುತ್ತೇವೆ. ನಾವೇನೂ ಅಂತ ಅಸಕ್ತರೇನಲ್ಲʼʼ ಎಂದು ಸ್ಷಷ್ಟಪಡಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News