ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಕುರಿತು ಸತೀಶ್ ಜಾರಕಿಹೊಳಿ ಹೇಳಿದ್ದೇನು?

Update: 2024-10-04 16:34 GMT

ಸತೀಶ್ ಜಾರಕಿಹೊಳಿ

ಬೆಂಗಳೂರು: ದಿಲ್ಲಿಗೆ ಹೋದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದು ಸಹಜ ಪ್ರಕ್ರಿಯೆ, ಇದರಲ್ಲಿ ರಾಜ್ಯ ರಾಜಕೀಯಕ್ಕೆ ಸಂಬಂಧಪಟ್ಟ ಯಾವುದೆ ಬೆಳವಣಿಗೆಗಳ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಬೆಳಗಾವಿಯ ನಿಪ್ಪಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಲ್ಲಿಗೆ ಹೋದಾಗ ನಮ್ಮ ಪಕ್ಷದ ವರಿಷ್ಠರು, ಅಧ್ಯಕ್ಷರನ್ನು ಭೇಟಿಯಾಗುವುದು ವಾಡಿಕೆಯಾಗಿದ್ದು, ರಾಜ್ಯದಲ್ಲಿ ಹೊಸ ಸಂಚಲನದ ಲಕ್ಷಣ ಹಾಗೂ ಬೆಳವಣಿಗೆಗಳು ಕಾಣುತ್ತಿಲ್ಲ. ಎಲ್ಲವೂ ಊಹಾಪೋಹಗಳಷ್ಟೇ ಎಂದರು.

ದಿಲ್ಲಿಯ ಪ್ರವಾಸ ಹೊಸದಲ್ಲ. ಅಲ್ಲಿಗೆ ಹೋದಾಗ ವರಿಷ್ಠರನ್ನು ನಾವು ಭೇಟಿ ಮಾಡುತ್ತೇವೆ. ಅದಕ್ಕೆ ಬೇರೆ ಯಾವ ಅರ್ಥ ಕಲ್ಪಿಸಬೇಕಿಲ್ಲ. ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಿಲ್ಲ. ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಮುಡಾ ಹಗರಣ ಕುರಿತು ಯಾವುದೇ ಚರ್ಚೆಯೂ ನಡೆದಿಲ್ಲ ಎಂದರು.

ಖರ್ಗೆಯವರೊಂದಿಗೆ ರಾಜಕೀಯ, ನಮ್ಮ ಸಮಸ್ಯೆಗಳನ್ನು ಮಾತ್ರ ಚರ್ಚಿಸಿದ್ದೇವೆ. ನಾನು ಸಿಎಂ ಎನ್ನುವುದನ್ನು ಅಭಿಮಾನಿಗಳು ಅಭಿಯಾನ ಮಾಡುತ್ತಿದ್ದು, ಅಭಿಯಾನ ಮಾಡಲು ದುಡ್ಡು ಬೇಕಾಗಿಲ್ಲ. ಫ್ರೀ ಆಗಿ ಮಾಡುವರು ಮಾಡುತ್ತಾರೆ. ಅದಕ್ಕೂ ಖರ್ಗೆ ಅವರೊಂದಿಗಿನ ಭೇಟಿಗೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜೀನಾಮೆ ಸಲ್ಲಿಕೆ ಕುರಿತಾಗಿ ನಮ್ಮ ಪಕ್ಷದಿಂದ ಸಿಎಂ ಮೇಲೆ ಯಾವುದೇ ಒತ್ತಡವಿಲ್ಲ. ಎರಡು ತಿಂಗಳಿನಿಂದ ವಿರೋಧಪಕ್ಷಗಳು ಮಾತ್ರ ಒತ್ತಡ ಹಾಕುತ್ತಿವೆ. ನಾವು ಕಾನೂನು ರೀತಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ಈಡಿ ಪ್ರಕರಣ ದಾಖಲಿಸಿ ತನಿಖೆ ಮಾಡಲಿ. ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News