ಕಾರು ಅಪಘಾತದಲ್ಲಿ ಕನ್ನಡ ಕಿರುತೆರೆ ನಟಿ ಪವಿತ್ರಾ ಜಯರಾಂ ಮೃತ್ಯು

Update: 2024-05-12 16:44 GMT

ಪವಿತ್ರಾ ಜಯರಾಂ | PC : NDTV 

ಬೆಂಗಳೂರು : ಕನ್ನಡ ಮತ್ತು ತೆಲುಗು ಕಿರುತೆರೆ ಧಾರಾವಾಹಿಗಳ ನಟಿ ಪವಿತ್ರಾ ಜಯರಾಂ(35) ಅವರು ರವಿವಾರ ಬೆಳಗಿನ ಜಾವ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತೆಲುಗು ಕಿರುತೆರೆ ಧಾರಾವಾಹಿ ‘ತ್ರಿನಯನಿ’ಯಲ್ಲಿ ತಿಲೋತ್ತಮಾ ಪಾತ್ರದಿಂದಾಗಿ ಅವರು ಖ್ಯಾತಿ ಪಡೆದಿದ್ದರು.

ಆಂಧ್ರಪ್ರದೇಶದ ಮೆಹಬೂಬ್ ನಗರ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆಯ ಹನಕರೆಗೆ ಮರಳುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಇದೇ ವೇಳೆ ಹೈದರಾಬಾದ್‌ನಿಂದ ವನಪರ್ತಿಗೆ ಸಾಗುತ್ತಿದ್ದ ಬಸ್ ಕಾರಿನ ಬಲಬದಿಗೆ ಅಪ್ಪಳಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಪವಿತ್ರಾ ಸ್ಥಳದಲ್ಲಿಯೇ ಅಸು ನೀಗಿದ್ದರು.

ಪವಿತ್ರಾರ ಸೋದರ ಸಂಬಂಧಿ ಅಪೇಕ್ಷಾ, ಕಾರು ಚಾಲಕ ಶ್ರೀಕಾಂತ್ ಮತ್ತು ನಟ ಚಂದ್ರಕಾಂತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದಿಂದ ಮನೋರಂಜನಾ ಉದ್ಯಮ ಆಘಾತಕ್ಕೀಡಾಗಿದೆ. ಪವಿತ್ರಾ ಕನ್ನಡದ ಜೋಕಾಲಿ, ರೋಬೊ ಫ್ಯಾಮಿಲಿ, ರಾಧಾರಮಣ ಮತ್ತು ನೀಲಿ ಮತ್ತಿತರ ಧಾರಾವಾಹಿಗಳಲ್ಲಿ ನಟಿಸಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಪವಿತ್ರಾರ ನಿಧನಕ್ಕೆ ಸಂತಾಪ ಸೂಚಿಸಿರುವ ನಟ ಸಮೀಪ್ ಆಚಾರ್ಯ ಅವರು,‘ನೀವು ಇನ್ನಿಲ್ಲವೆಂಬ ಸುದ್ದಿಯೊಂದಿಗೆ ಬೆಳಿಗ್ಗೆ ಎಚ್ಚತ್ತಿದ್ದೆ. ಇದನ್ನು ನಂಬಲಸಾಧ್ಯ. ತೆರೆಯ ಮೇಲಿನ ನನ್ನ ಮೊದಲ ತಾಯಿಯಾಗಿದ್ದ ನೀವು ಸದಾ ವಿಶೇಷ ವ್ಯಕ್ತಿಯಾಗಿರುತ್ತೀರಿ ’ಎಂದು ಬರೆದಿದ್ದಾರೆ.

****

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News