ಆರಗ ಜ್ಞಾನೇಂದ್ರ ಅವಧಿಯಲ್ಲಿ ಪಿಎಸ್ಸೈ ಸೇರಿ ಹಲವು ಅಕ್ರಮಗಳ ಆರೋಪ : ಎಸ್‌ಐಟಿ ರಚನೆಗೆ ಕಾಂಗ್ರೆಸ್ ಒತ್ತಾಯ

Update: 2024-09-20 13:26 GMT

 ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ

ಬೆಂಗಳೂರು : ಬಿಜೆಪಿ ಸರಕಾರದ ಅವಧಿಯಲ್ಲಿ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದ ವೇಳೆ ಪಿಎಸ್ಸೈ ಹಗರಣದಿಂದ ಹಿಡಿದು ಕಳಪೆ ಕಟ್ಟಡ ಕಾಮಗಾರಿಗಳ ವರೆಗೆ ಹತ್ತಾರು ಅಕ್ರಮಗಳು ನಡೆದಿದ್ದು, ಆರಗ ಜ್ಞಾನೇಂದ್ರ ವಿರುದ್ಧ ವಿಶೇಷ ತನಿಖಾ ತಂಡ(ಎಸ್‌ಐಟಿ)ರಚನೆ ಮಾಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಗ ಜ್ಞಾನೇಂದ್ರ ಸ್ಪರ್ಧಿಸುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಲವು ಅಕ್ರಮಗಳು ಜರುಗಿವೆ. ಈ ವಿಚಾರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಪ್ರಿಯಾಂಕ ಖರ್ಗೆ ಅವರ ಗಮನಕ್ಕೆ ತರಲಾಗುವುದು ಎಂದರು.

ಆರಗ ಜ್ಞಾನೇಂದ್ರ ಅವರ ಕಾಲದಲ್ಲಿ ನಡೆದ ಪಿಎಸ್‍ಐ ಹಗರಣದ ತನಿಖೆ ವೇಳೆ ಇವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಲ್ಲದೇ, ಸ್ಯಾಂಟ್ರೋ ರವಿ ಸೇರಿದಂತೆ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರು ತೀರ್ಥಹಳ್ಳಿಗೆ ಬಂದು ಹೋಗಿದ್ದಾರೆ ಎನ್ನುವ ಮಾತಿದೆ. ಇದರ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು ಎಂದು ಕಿಮ್ಮನೆ ರತ್ನಾಕರ ಒತ್ತಾಯಿಸಿದರು.

ಜ್ಞಾನೇಂದ್ರ ಅವರು ಅಧಿಕಾರದಲ್ಲಿದ್ದಾಗ ತೀರ್ಥಹಳ್ಳಿ ಹಾಗೂ ಸುತ್ತಮುತ್ತ ಸಾಕಷ್ಟು ಅಕ್ರಮ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿದ್ದವು. ಇವರ ಬೆಂಬಲಿಗರು ರಿಯಲ್ ಎಸ್ಟೇಟ್‍ನಲ್ಲಿ ತೊಡಗಿಕೊಂಡಿದ್ದರು. ತೀರ್ಥಹಳ್ಳಿ ಸುತ್ತ ಮುತ್ತವಿರುವ ಸರಕಾರಿ ಜಮೀನು ಹಾಗೂ ಮಠಗಳಿಗೆ ಸೇರಿದ ಜಮೀನುಗಳನ್ನು ಆರಗ ಜ್ಞಾನೇಂದ್ರ ಕಡೆಯವರು ಖರೀದಿ ಮಾಡಿರುವ ಬಗ್ಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳಿವೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭೂಮಿ ಖರೀದಿ ಬಗ್ಗೆ ತನಿಖೆಯಾಗಬೇಕು. ಇದು ದ್ವೇಷದ ರಾಜಕಾರಣವಲ್ಲ ಎಂದು ಕಿಮ್ಮನೆ ರತ್ನಾಕರ ತಿಳಿಸಿದರು.

ಬಿಟ್ ಕಾಯಿನ್ ಹಗರಣದಲ್ಲಿ ಜ್ಞಾನೇಂದ್ರ ಅವರ ಸ್ನೇಹಿತರು ಭಾಗಿಯಾಗಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಇವರ ಸ್ನೇಹಿತರನ್ನು ತನಿಖೆಗೆ ಒಳಪಡಿಸಿಲ್ಲ, ಆದ ಕಾರಣಕ್ಕೆ ಸರಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು. ಇವರ ಸ್ನೇಹಿತರೊಬ್ಬರು ಜೈಲಿಗೆ ಹೋಗಿ ಹೊರಬಂದಿದ್ದಾರೆ. ಅವರನ್ನು ಕೂಲಂಕುಷವಾಗಿ ಎಸ್‌ಐಟಿ ತನಿಖೆಗೆ ಒಳಪಡಿಸಬೇಕು ಎಂದು ಕಿಮ್ಮನೆ ರತ್ನಾಕರ ಆಗ್ರಹಿಸಿದರು.

ಜ್ಞಾನೇಂದ್ರ ಅವರ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಯಾಗುತ್ತದೆ. ಆತ ಬೆಳಗಿನ ಜಾವದ ತನಕ ಬದುಕಿರುತ್ತಾನೆ. ಆನಂತರ ಜ್ಞಾನೇಂದ್ರ ಅವರ ಸಂಬಂಧಿಕರೇ ಆಸ್ಪತ್ರೆಗೆ ಸೇರಿಸುತ್ತಾರೆ. ಆ ವ್ಯಕ್ತಿ ಮೃತನಾಗುತ್ತಾನೆ. ಈ ಪ್ರಕರಣದ ಬಗ್ಗೆ ಪೊಲೀಸರು ಎಂಟು ದಿನಗಳು ಕಳೆದರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಮೃತ ವ್ಯಕ್ತಿಯ ಕುಟುಂಬದವರು ನನ್ನ ಬಳಿ ಮನವಿ ಮಾಡಿದಾಗ ಇದರ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿದೆ ಎಂದು ಕಿಮ್ಮನೆ ರತ್ನಾಕರ ತಿಳಿಸಿದರು.

ಕೆಪಿಸಿಸಿ ಮಾಧ್ಯಮ ವಿಭಾಗ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ಪಿಎಸ್‍ಐ ಹಗರಣ, ಬಿಟ್ ಕಾಯಿನ್ ಹಗರಣ ಸೇರಿದಂತೆ ಹಲವು ಹಗರಣಗಳಲ್ಲಿ ಜ್ಞಾನೇಂದ್ರ ಅವರ ಪಾತ್ರವಿದೆ. ಗೃಹ ಹಾಗೂ ಗ್ರಾಮೀಣ ಅಭಿವೃದ್ದಿ ಇಲಾಖೆಯ ಕಟ್ಟಡಗಳ ಕಾಮಗಾರಿಯನ್ನು ಕಳಪೆ ಮಾಡಲಾಗಿದೆ. ಇದರಲ್ಲಿ ನೇರವಾಗಿ ಜ್ಞಾನೇಂದ್ರ ಅವರ ಕೈವಾಡವಿದೆ. ಆದರೂ ಅವರನ್ನು ಹಲವಾರು ಪ್ರಕರಣಗಳಲ್ಲಿ ತನಿಖೆ ಮಾಡಿಲ್ಲ. ಸರಕಾರ ಇವರ ವಿರುದ್ಧ ಎಸ್‌ಐಟಿ ರಚಿಸಿ ಇದೆಲ್ಲದರ ಬಗ್ಗೆಯೂ ಸಮಗ್ರ ತನಿಖೆ ಮಾಡಲು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ್ ಹುಂಚದಕಟ್ಟೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.

‘ಮಸೀದಿಯ ಮುಂದೆ ಬಾಲಕಿಯ ಶವ ಮೆರವಣಿಗೆಗೆ ಜ್ಞಾನೇಂದ್ರ ಒತ್ತಾಯಿಸಿದ್ರು..!’

‘ನಾನು ಶಿಕ್ಷಣ ಸಚಿವನಾಗಿದ್ದಾಗ ತೀರ್ಥಹಳ್ಳಿಯಲ್ಲಿ ಶಾಲಾ ಬಾಲಕಿಯೊಬ್ಬಳ ಸಾವಾಯಿತು. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಯಿತು. ಜ್ಞಾನೇಂದ್ರ ನೇತೃತ್ವದಲ್ಲಿ ಆ ಬಾಲಕಿಯ ಮೃತದೇಹ ಮೆರವಣಿಗೆ ಮಾಡಬೇಕು ಎಂದು ಹೇಳಲಾಯಿತು. ಆಗ ಜ್ಞಾನೇಂದ್ರ ಆ ಬಾಲಕಿಯ ಮೃತದೇಹವನ್ನು ಮಸೀದಿಯ ಮುಂದೆ ತೆಗೆದುಕೊಂಡು ಹೋಗಬೇಕು ಎಂದು ಹಠ ಮಾಡುತ್ತಿದ್ದರು. ಮಸೀದಿಯ ಮುಂದೆ ಹೋದರೆ ಮಾತ್ರ ಬಿಜೆಪಿಯವರಿಗೆ ಸ್ವರ್ಗ ಸಿಗುತ್ತದೆ ಎಂದೆನಿಸುತ್ತದೆ. ಚುನಾವಣೆಗಾಗಿ ಆ ಬಾಲಕಿಯ ವೈಕುಂಠ ಸಮಾರಾಧನೆಯನ್ನು ಮಾಡಿದರು. ಗೆದ್ದ ಮೇಲೆ ಆ ಬಾಲಕಿಯನ್ನು ಮರೆಯಲಾಯಿತು.’

-ಕಿಮ್ಮನೆ ರತ್ನಾಕರ, ಮಾಜಿ ಸಚಿವ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News