ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ನರ್ಸಿಂಗ್ ಕಾಲೇಜುಗಳಿಗೆ ಬೀ‌ಗ : ಸಚಿವ ಶರಣ ಪ್ರಕಾಶ್ ಪಾಟೀಲ್

Update: 2024-06-13 14:33 GMT

ಬೆಂಗಳೂರು: ಸರಕಾರದಿಂದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲಾಗಿರುವ ರಾಜ್ಯದ ನರ್ಸಿಂಗ್ ಕಾಲೇಜುಗಳನ್ನು ತಪಾಸಣೆ ನಡೆಸಿ ಬೀಗ ಜಡಿಯಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ನಡೆದ ನರ್ಸಿಂಗ್ ಕಾಲೇಜುಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವಾರು ನರ್ಸಿಂಗ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದಿರುವ ಬಗ್ಗೆ ನನಗೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ತಪಾಸಣೆ ನಡೆಸಿ ಅಂತಹ ಕಾಲೇಜುಗಳಿಗೆ ಬೀಗ ಜಡಿಯಿರಿ ಎಂದು ಸ್ಥಳದಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ನಿದೇರ್ಶಕಿ ಡಾ.ಸುಜಾತಾ ರಾಥೋಡ್ ಅವರಿಗೆ ನಿದೇರ್ಶನ ಕೊಟ್ಡರು.

ಖಾಸಗಿ ಕಾಲೇಜು ಆಡಳಿತ ಮಂಡಳಿಯವರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಸರಕಾರ ಕೂಡ ಮಾನವೀಯ ದೃಷ್ಟಿಯಿಂದ ನಡೆದುಕೊಂಡಿದೆ. ಇಷ್ಟಾದರೂ ಬುದ್ದಿ ಬಂದಿಲ್ಲ ಅಂದರೆ ಹೇಗೆ? ಎಂದು ಆಡಳಿತ ಮಂಡಳಿಯವರ ವರ್ತನೆಗೆ ಶರಣ ಪ್ರಕಾಶ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲೇಜುಗಳನ್ನು ಹೊರತುಪಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬೋಧಕ, ಬೋಧಕೇತರ, ಪ್ರಯೋಗಾಲಯ, ಸಿಬ್ಬಂದಿ, ಗ್ರಂಥಾಲಯ, ಶುಚಿತ್ವ, ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಇಷ್ಟು ಸಮಸ್ಯೆಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಯಾವ ಶಿಕ್ಷಣ ಕೊಡುತ್ತಾರೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳುವ ವೇಳೆ ಆಶ್ವಾಸನೆಗಳನ್ನು ನೀಡಿ ಅವರಿಂದ ಹೆಚ್ಚಿನ ಶುಲ್ಕ ಪಡೆಯುತ್ತೀರಿ. ಕನಿಷ್ಠ ಪಕ್ಷ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡದಿದ್ದರೆ ಹೇಗೆ?. ಇನ್ನು ಮುಂದೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಪ್ರವೇಶ ಮಾಡಿಕೊಳ್ಳುವ ಮುನ್ನ ಅಧಿಕಾರಿಗಳು ಪ್ರತಿಯೊಂದು ಕಾಲೇಜಿಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದರು.

ಯಾವ ಕಾಲೇಜು ಸರಕಾರದ ಮಾನದಂಡ ಪಾಲನೆ ಮಾಡುವುದಿಲ್ಲವೋ, ಅಂತಹ ಕಾಲೇಜುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಶರಣಪ್ರಕಾಶ್ ಪಾಟೀಲ್ ಸೂಚನೆ ನೀಡಿದರು.

ಪರಿಷ್ಕರಣೆ ಇಲ್ಲ: ಇದೇ ವೇಳೆ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿಯ ವತಿಯಿಂದ ಶುಲ್ಕ ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂದಿತು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಕಾರಣಕ್ಕೂ ವಾರ್ಷಿಕ ಶುಲ್ಕವನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿದರು.

ಸರಕಾರಿ ಕೋಟದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿ ವಾರ್ಷಿಕ 10 ಸಾವಿರ ರೂ., ಆಡಳಿತ ಮಂಡಳಿಯ ವಿದ್ಯಾರ್ಥಿ 1 ಲಕ್ಷ ರೂ., ಹಾಗೂ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ 1.40 ಲಕ್ಷ ರೂ.ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದನ್ನು ಶೇ.20ರಷ್ಟು ಪರಿಷ್ಕರಣೆ ಮಾಡಬೇಕು ಎಂಬುದು ಸಂಘದ ಬೇಡಿಕೆಯಾಗಿತ್ತು.

ಆದರೆ, ಇದನ್ನು ಒಪ್ಪದ ಶರಣಪ್ರಕಾಶ್ ಪಾಟೀಲ್, ಸಾಧ್ಯವಾದರೆ ಈಗಿರುವ ಶುಲ್ಕವನ್ನೇ ಕಡಿಮೆ ಮಾಡಲಾಗುವುದು. ನಾವು ಯಾವಾಗಲೂ ವಿದ್ಯಾರ್ಥಿಗಳ ಪರ ಎಂದು ಹೇಳಿದರು.

ಶೇ.40 ರಷ್ಟು ಸೀಟುಗಳನ್ನು ಬಿಡಿ: 611 ನರ್ಸಿಂಗ್ ಕಾಲೇಜು ವತಿಯಿಂದ ಒಟ್ಟು 35 ಸಾವಿರ ಸೀಟುಗಳನ್ನು ಭರ್ತಿಮಾಡಿಕೊಳ್ಳಲಾಗುತ್ತದೆ. ಶೇ.20 ರಷ್ಟು ಸರಕಾರಿ ಹಾಗೂ ಶೇ.80ರಷ್ಟು ಆಡಳಿತ ಮಂಡಳಿಯವರು ತುಂಬಿಕೊಳ್ಳುತ್ತಾರೆ. ಶೇ.40ರಷ್ಟು ಕೋಟಾವನ್ನು ಸರಕಾರಕ್ಕೆ ಬಿಟ್ಡುಕೊಟ್ಟರೆ ಬಡ ವಿದ್ಯಾರ್ಥಿಗಳಿಗೆ ಉಪಕಾರವಾಗುತ್ತದೆ ಎಂದು ಅವರು ಮನವಿ ಮಾಡಿದರು.

ಇನ್ನು ನರ್ಸಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಸೆಪ್ಟೆಂಬರ್ ತಿಂಗಳಿನಿಂದ ಆಕ್ಟೋಬರ್ ವರೆಗೂ ನಡೆಸದೆ, ಇದೇ ಶೈಕ್ಷಣಿಕ ವರ್ಷದಿಂದ ಜುಲೈ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಲು ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪಿ.ಆರ್.ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News