ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಗೆ ಉಭಯ ಸನದಗಳಲ್ಲಿ ಶ್ರದ್ಧಾಂಜಲಿ

Update: 2023-12-11 11:45 GMT

ಬೆಳಗಾವಿ: ಇತ್ತೀಚೆಗೆ ನಿಧನರಾದ ಹಿರಿಯ ಅಭಿನೇತ್ರಿ, ಬಹುಭಾಷಾ ಕಲಾವಿದೆ ಡಾ.ಲೀಲಾವತಿ ಅವರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಸಂತಾಪ ಸೂಚನೆ ಮಂಡಿಸಿ, ಬಹುಭಾಷಾ ಚಿತ್ರನಟಿ ಡಾ.ಲೀಲಾವತಿಯವರು 1938ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ಸುಬ್ಬಯ್ಯನಾಯ್ಡು ಅವರ ಸಾಹಿತ್ಯ, ಸಾಮ್ರಾಜ್ಯ ನಾಟಕ ಮಂಡಳಿ ಸೇರಿದ್ದ ಅವರು, ನಾಗಕನ್ನಿಕೆ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಕನ್ನಡ, ತುಳು, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳ ಮೂಲಕ 5 ದಶಕಗಳ ಕಾಲ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.

ವಿಭಿನ್ನ ಪಾತ್ರದಲ್ಲಿ, ಕಪ್ಪು-ಬಿಳುಪು ಕಾಲದಿಂದ ಕಲರ್ ಸ್ಕೋಪ್ ವರೆಗಿನ ಎಲ್ಲ ನಾಯಕ ನಟರೊಂದಿಗೆ ನಟಿಸಿ ಜನಪ್ರಿಯರಾಗಿದ್ದರು. ಕಾಲೇಜು ಹೀರೋ ಚಿತ್ರವನ್ನು ನಿರ್ಮಿಸಿದ್ದರು, ಕನ್ನಡದ ಕಂದ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದರು. ಸಮಾಜ ಸೇವಕಿ ಹಾಗೂ ಪಶು ಪ್ರೇಮಿಯಾಗಿದ್ದ ಅವರು ಕೃಷಿ ಜ್ಞಾನವನ್ನೂ ಹೊಂದಿದ್ದರು. ತಮ್ಮ ಸ್ವಂತ ಹಣದಲ್ಲಿ ಸಾರ್ವಜನಿಕ ಮತ್ತು ಪಶು ಚಿಕಿತ್ಸಾಲಯ ಕಟ್ಟಿಸಿ ಉಚಿತ ಸೇವೆ ಒದಗಿಸಲು ಕಾರಣರಾಗಿದ್ದರು. ರಾಜ್‍ಕುಮಾರ್ ಪ್ರಶಸ್ತಿ, ಅತ್ಯುತ್ತಮ ಪೋಷಕ ನಟಿ, ಫಿಲಂ ಪ್ರಶಸ್ತಿ, ತುಮಕೂರು ವಿವಿ ಗೌರವ ಡಾಕ್ಟರೇಟ್ ಪಡೆದಿದ್ದರು ಎಂದು ಹೇಲಿದರು

ಅಪರೂಪದ ತಾರೆ: ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ‘ನಟಿ ಲೀಲಾವತಿ ಎಲ್ಲ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ್ದು, ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾಗಿದ್ದರು. ನಾಯಕಿಯಾಗಿದ್ದ ಅವರು ಪೋಷಕ ನಟಿಯಾಗಿ ಪರಿವರ್ತನೆಗೊಂಡು, ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದರು. ಅಪರೂಪದ ತಾರೆಯಾಗಿದ್ದ ಅವರ ಅಗಲುವಿಕೆ ಜಗತ್ತಿಗೆ ತುಂಬಲಾರದ ನಷ್ಟ’ ಎಂದು ಸ್ಮರಿಸಿದರು.

ಪ್ರತಿಮೆ ಸ್ಥಾಪಿಸಿ: ಸಂತಾಪ ಸೂಚನೆ ನಿರ್ಣಯಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, ‘ಲೀಲಾವತಿ, ತಮಗೆ ಯಾವುದೇ ಪ್ರಶಸ್ತಿ ಬೇಡ. ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಸರಕಾರದಿಂದ ಅನುಮತಿ ಕೊಡಿಸಿ ಎಂದು ಮನವಿ ಮಾಡಿದ್ದರು. ತಾವು ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಬಳಿಗೆ ಕರೆದುಕೊಂಡು ಹೋಗಿ ಅನುಮತಿ ಕೊಡಿಸಿದ್ದೆ. ಲೀಲಾವತಿಯವರೇ ನಿರ್ಮಿಸಿರುವ ಆಸ್ಪತ್ರೆ ಮುಂದೆ ಮೇರುನಟಿಯ ಪ್ರತಿಮೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆ ಬಳಿಕ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಪ್ರತಿಮೆ ಸ್ಥಾಪಿಸಲು ಕ್ರಮ: ಆಸ್ಪತ್ರೆ ಹಾಗೂ ಪಶು ಚಿಕಿತ್ಸಾಲಯ ಸ್ಥಾಪಿಸುವ ಮೂಲಕ ಜನರ ಆರೋಗ್ಯ ಹಾಗೂ ಮೂಕಪ್ರಾಣಿಗಳ ಯೋಗಕ್ಷೇಮಕ್ಕೆ ಚಿಂತಿಸಿದ ಅಪರೂಪದ ಕಲಾವಿದೆ ಲೀಲಾವತಿ. ನೆಲಮಂಗಲದಲ್ಲಿ ಲೀಲಾವತಿ ಅವರು ಸ್ಥಾಪಿಸಿರುವ ಆಸ್ಪತ್ರೆ ಆವರಣದಲ್ಲಿ ಲೀಲಾವತಿ ಅವರ ಪ್ರತಿಮೆ ಸ್ಥಾಪಿಸಲು ಸರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ’

-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

ವಿನೋದ್ ರಾಜ್ ಮಾದರಿ: ‘ವಯಸ್ಸಾದ ಪೋಷಕರು ರಸ್ತೆಗೆ ಎಸೆಯುವಂತಹ ಸ್ಥಿತಿ ನಿರ್ಮಾಣ ಆಗಿರುವ ಈ ಕಾಲದಲ್ಲಿ ತಾಯಿಯನ್ನು ಮಗುವಂತೆ ನೋಡಿಕೊಂಡ ವಿನೋದ್ ರಾಜ್ ಈ ಸಮಾಜಕ್ಕೆ ಮಾದರಿ. ವಿನೋದ್ ರಾಜ್ ಅನಾಥರಲ್ಲ. ಅವರೊಂದಿಗೆ ನಾವೆಲ್ಲಾ, ಈ ಸಮಾಜವೇ ನಿಂತಿದೆ. ಲೀಲಾವತಿ ಎಲ್ಲ  ಪಾತ್ರಗಳನ್ನು ಮಾಡುವ ಮೂಲಕ ಹೊಸ ಕಲಾವಿದರಿಗೆ ದೊಡ್ಡ ಗ್ರಂಥವೇ ಆಗಿದ್ದಾರೆ. ಜತೆಗೆ, ತಮ್ಮ ಜೀವನದ ಕೊನೆಯವರೆವಿಗೂ ಭೂ ತಾಯಿಯ ಸೇವೆ ಮಾಡಿದ ಮಣ್ಣಿನ ಮಗಳಾಗಿದ್ದರು’

-ಉಮಾಶ್ರೀ ನಟಿ ವಿಧಾನ ಪರಿಷತ್ತಿನ ಸದಸ್ಯೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News