30 ವರ್ಷಗಳಷ್ಟು ಹಿಂದಿನ ಪ್ರಕರಣಕ್ಕೆ ಇವತ್ತು ಏಕೆ ಜೀವ ಕೊಟ್ಟಿದ್ದೀರಿ?: ಎಸ್.ಸುರೇಶ್ ಕುಮಾರ್

Update: 2024-01-05 06:31 GMT

ಬೆಂಗಳೂರು: ಹುಬ್ಬಳ್ಳಿಯ ಕರಸೇವಕರ ಬಂಧನವನ್ನು ಖಂಡಿಸಿ ‘ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಅಭಿಯಾನದಡಿ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಶುಕ್ರವಾರ ಮಲ್ಲೇಶ್ವರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಅಭಿಯಾನದ ಘಟನಾವಳಿಗಳಿಗೆ ನಾನು ಸಾಕ್ಷಿಯಾಗಿದ್ದೆ. ಇದೀಗ ಸರಕಾರವು ಕರಸೇವಕರನ್ನು ಬಂಧಿಸುತ್ತಿದೆ. ಇದನ್ನು ವಿರೋಧಿಸಿ ನಾನು ಪ್ರತಿಭಟನೆಗೆ ಬಂದಿದ್ದೇನೆ ಎಂದರು.

ಮಂದಿರ್ ವಹೀ ಬನಾಯೇಂಗೇ ಎಂಬುದು ನಮ್ಮ ಘೋಷವಾಕ್ಯವಾಗಿತ್ತು. ಇವತ್ತು ಮಂದಿರವನ್ನು ಅಲ್ಲೇ ಕಟ್ಟಿದೆವು.  ಜನವರಿ 22ರಂದು ಮಂದಿರದ ಉದ್ಘಾಟನೆ ನಡೆಯಲಿದೆ.  ಇದು ಇಲ್ಲಿನ ಕಾಂಗ್ರೆಸ್ ಸರಕಾರಕ್ಕೆ  ತಡೆದುಕೊಳ್ಳಲು ಆಗುತ್ತಿಲ್ಲ. 30 ವರ್ಷಗಳ ಹಿಂದಿನ ಕೇಸನ್ನು ರೀ ಓಪನ್ ಮಾಡಿ ಕರಸೇವಕರನ್ನು ಸರಕಾರ ಬಂಧಿಸುತ್ತಿದೆ. ಈಗ ಬಂಧಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.

ಈಗಿನದು ಬಿಜೆಪಿಯ ಶ್ರೀರಾಮ ಎಂದು ಕಾಂಗ್ರೆಸ್‍ ನವರು ಹೇಳುತ್ತಾರೆ. ಹಾಗಿದ್ದರೆ ಡಿ. 6ಕ್ಕೆ ಮೊದಲು ಇದ್ದುದು ಕಾಂಗ್ರೆಸ್ ಮಸೀದಿಯೇ. ಇವತ್ತು ಯಾರನ್ನಾದರೂ ಕ್ರಿಮಿನಲ್ ಎನ್ನಲು ಕಾಂಗ್ರೆಸ್ಸಿಗರು ಸಿದ್ಧರಾಗಿದ್ದಾರೆ. 30 ವರ್ಷಗಳಷ್ಟು ಹಿಂದಿನ ಪ್ರಕರಣಕ್ಕೆ ಇವತ್ತು ಯಾಕೆ ಜೀವ ಕೊಟ್ಟಿದ್ದೀರಿ? ಅವರು ಕರಸೇವಕರು ಎಂಬ ಕಾರಣಕ್ಕೇ ಪ್ರಕರಣ ರೀ ಓಪನ್ ಮಾಡಿದ್ದಾಗಿ ನಮ್ಮ ಬಲವಾದ ನಂಬಿಕೆ ಎಂದರು.

ಪ್ರತಿಭಟನಾ ಸ್ಥಳದಲ್ಲಿ ಕಾರ್ಯಕರ್ತರು, ಮಾಜಿ ಸಚಿವ ರಾಮಚಂದ್ರ ಗೌಡ ಅವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News