ಪುತ್ತೂರು: ಅನುಮತಿ ರಹಿತ ವಿಜಯೋತ್ಸವ; ಪುತ್ತಿಲ ಪರಿವಾರದ ವಿರುದ್ಧ ಸಾರ್ವಜನಿಕ ಶಾಂತಿಭಂಗ ಕೇಸು ದಾಖಲು

Update: 2023-07-27 08:17 GMT

ಪುತ್ತೂರು: ಪಂಚಾಯತ್ ಉಪಚುನಾವಣೆಯಲ್ಲಿ ಫಲಿತಾಂಶ ಪ್ರಕಟಗೊಂಡ ಬಳಿಕ ನಗರದ ಮುಖ್ಯ ರಸ್ತೆಯಲ್ಲಿ ಅನುಮತಿ ರಹಿತವಾಗಿ ವಿಜಯೋತ್ಸವ ನಡೆಸಿದ ಪುತ್ತಿಲ ಪರಿವಾರದ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಾಗಿದೆ.

ಆರ್ಯಾಪು ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯತ್‍ಗೆ ಜು.23ರಂದು ನಡೆದ ಚುನಾವಣೆಯ ಫಲಿಂತಾಂಶವು ಜು.26ರಂದು ಪ್ರಕಟವಾಗಿತ್ತು. ಫಲಿತಾಂಶದಲ್ಲಿ ಪುತ್ತಿಲ ಪರಿವಾರದಿಂದ ಸ್ಪರ್ಧಿಸಿದ್ದ ಆರ್ಯಾಪು ಗ್ರಾಪಂನ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಪಡೆದಿದ್ದು, ನಿಡ್ಪಳ್ಳಿ ಗ್ರಾಪಂನಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಫಲಿತಾಂಶ ಪ್ರಕಟಗೊಂಡ ಬಳಿಕ ಚುನಾವಣೆಯ ಎಣಿಕೆ ನಡೆದ ಪುತ್ತೂರಿನ ತಾಲೂಕು ಆಡಳಿತ ಸೌಧದ ಬಳಿಯಿಂದ ಪುತ್ತಿಲ ಪರಿವಾರದ ಕಚೇರಿ ತನಕ ನಗರದ ಮುಖ್ಯರಸ್ತೆಯಲ್ಲಿ ಡಿಜೆ ಅಳವಡಿಸಿ ಮೆರವಣಿಗೆ ನಡೆಸಲಾಗಿತ್ತು. ಆದರೆ ಮೆರವಣಿಗೆ ನಡೆಸಲು ಪೊಲೀಸ್ ಠಾಣೆಯ ಅನುಮತಿ ಪಡೆದಿರಲಿಲ್ಲ.

ಈ ಹಿನ್ನಲೆಯಲ್ಲಿ ಅನಧಿಕೃತ ಮೆರವಣಿಗೆ ನಡೆಸಿದ ಸಂಘಟಕರ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣವನ್ನು ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News