ಧರ್ಮದಿಂದ ವಿಶ್ವಶಾಂತಿ ಬಯಸಿದ್ದ ಶ್ರೀರೇಣುಕಾಚಾರ್ಯರು : ಶಾಸಕ ಜಿ.ಬಿ.ಜ್ಯೋತಿಗಣೇಶ್

Update: 2025-03-12 13:10 IST
  • whatsapp icon

ತುಮಕೂರು :ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶದ ಮೂಲಕ ವಿಶ್ವದಲ್ಲಿ ಶಾಂತಿ, ನೆಮ್ಮದಿ ಬಯಸಿದ್ದ ಜಗದ್ಗುರು ಶ್ರೀರೇಣುಕಾಚಾರ್ಯರು ವಿಶ್ವಕಂಡ ಮೇರು ವ್ಯಕ್ತಿತ್ವದ ದಾರ್ಶಾನಿಕರು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಜಿಲ್ಲೆಯ ವೀರಶೈವ, ಲಿಂಗಾಯಿತ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಧರ್ಮದ ಸಂಸ್ಥಾಪಕರಾದ ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವ ಶಾಂತಿ ಎಂಬ ಉಕ್ತಿಗಳು ಸೇರಿದಂತೆ 10ಕ್ಕೂ ಹೆಚ್ಚು ತತ್ವಗಳನ್ನು ಜನರಿಗೆ ಭೋಧಿಸುವ ಮೂಲಕ ಜನರಲ್ಲಿ ಶಾಂತಿ,ನೆಮ್ಮದಿ ನೆಲೆಸುವಂತೆ ಮಾಡಿದ ಕೀರ್ತಿ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಪ್ರಾಚೀನ ಧರ್ಮ ಪ್ರವರ್ತಕರಲ್ಲಿ ಒಬ್ಬರಾದ ಶ್ರೀಜಗದ್ಗುರು ರೇಣುಕಾಚಾರ್ಯರು, ಶಂಕರಾಚಾರ್ಯರು, ರಾಮಾನುಜಾಚಾರ್ಯರ ರೀತಿಯಲ್ಲಿಯೇ ಶಕ್ತಿ ವಿಶಿಷ್ಟ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಶಾಂತಿ, ಧರ್ಮದಿಂದಲೇ ಜಯವೂ ಹೀಗೆ, ಧರ್ಮವನ್ನು ಸಕಲ ಲೇಸುಗಳಿಗೆ ಬಳಕೆ ಮಾಡಿದ ಶ್ರೀಜಗದ್ಗುರು ರೇಣುಕಾಚಾರ್ಯರು,ವೀರಶೈವ ಧರ್ಮದ ಸಂಸ್ಥಾಪಕರು, ತದನಂತರದ ವರ್ಷದಲ್ಲಿ ಇದನ್ನು ಬಸವಣ್ಣನವರು ಶರಣಸಂಸ್ಕೃತಿ ಎಂದು ಪ್ರತಿಪಾದಿಸಿದರು ಎಂದರು.

ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಟಿ.ಆರ್.ಸದಾಶಿವಯ್ಯ, ಶಿವಶ್ರೀ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಿ.ಎಸ್.ಸಿದ್ದರಾಜು ಮಾತನಾಡಿದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕರಾದ ಸುರೇಶಕುಮಾರ್, ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ನ ನಿರ್ದೇಶಕರಾದ ಓಂಕಾರಸ್ವಾಮಿ, ಜಿ.ಎಸ್.ಶ್ರೀಧರ, ಬಸವರಾಜು, ನಟರಾಜು, ವೀರಭದ್ರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಶಿವ ದುರ್ಗಾಂಭಿಕ ಅಕ್ಕನ ಬಳಗ ಜಾನಪದ ಕಲಾವಿದರ ಸಂಘ ಜಗಳೂರು, ಹರಳಯ್ಯ ಸ್ವಾಮಿ ಅಕ್ಕನ ಬಳಗ, ಜಾನಪದ ಕಲಾವಿದರ ಸಂಘದ ಓಬಳಾಪುರು ವಿಜಯನಗರ ಜಿಲ್ಲೆ, ಮಹೇಶ್ವರಿ ಜಾನಪದ ಕಲಾವಿದರ ಸಂಘ ವಿಜಯನಗರ ಜಿಲ್ಲೆ, ವಾಲ್ಮೀಕಿ ಸಂಘ ಜಗಳೂರು, ಶ್ರೀಬಸವೇಶ್ವರ ಸೋಬಾನೆ ಸಂಘ ಜಗಳೂರು ಈ ಕಲಾವಿದರುಗಳಿಂದ ಜಾನಪದ ಗೀತೆಗಳ ಗಾಯನ, ಸೋಬಾನೆ ಪದಗಳ ಗಾಯನ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News