ಕೋಟ ಎಸ್ಸೈಯಿಂದ ದೌರ್ಜನ್ಯ ಆರೋಪ: ಮಹಿಳೆಯರಿಬ್ಬರು ಆಸ್ಪತ್ರೆಗೆ ದಾಖಲು

Update: 2023-10-07 14:12 GMT

ಆಶಾ

ಬ್ರಹ್ಮಾವರ, ಅ.7: ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಕೋಟ ಎಸ್ಸೈ ಮಹಿಳೆಯರಿಬ್ಬರ ಮೇಲೆ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಲಾಗಿದೆ.

ದೌರ್ಜನ್ಯಕ್ಕೆ ಒಳಗಾದ ಸಾಲಿಗ್ರಾಮದ ಕಾರ್ಕಡ ಗ್ರಾಮದ ಆಶಾ ಜಿ.(36) ಹಾಗೂ ಬೇಳೂರು ಗ್ರಾಮದ ಸುಜಾತಾ ಎಂಬವರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಅ.2ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ನೂಜಿ ಗ್ರಾಮದ ಕಿರಣ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಎಸ್ಸೈ ಸುಧಾ ಪ್ರಭು ಠಾಣೆಗೆ ಕರೆಸಿ ಎರಡು ದಿನ ಅಕ್ರಮವಾಗಿ ಠಾಣೆಯಲ್ಲಿ ಕೂರಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆಶಾ ದೂರಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ಸುಜಾತ ಜೊತೆ ನಾನು ಮನೆ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿ ಮಧ್ಯಾಹ್ನ ವಾಪಾಸ್ಸು ಮನೆಗೆ ಹೋಗಿದ್ದೇನೆ. ಸಂಜೆ ಎಸ್ಸೈ ಕರೆ ಮಾಡಿ ಕೂಡಲೇ ಠಾಣೆಗೆ ಬರುವಂತೆ ತಿಳಿಸಿದ್ದರು. ಅದರಂತೆ ಠಾಣೆಗೆ ಹೋದಾಗ ಎಸ್ಸೈ, ಕದ್ದ ಚಿನ್ನ ವಾಪಾಸ್ಸು ನೀಡದಿದ್ದರೆ ಪಿಸ್ತೂಲಿನಿಂದ ಎನ್ ಕೌಂಟರ್ ಮಾಡುವುದಾಗಿ ಹೆದರಿಸಿದ್ದಾರೆ. ರಾತ್ರಿ ಠಾಣೆಯಲ್ಲಿ ಶೌಚಾಲಯ ಬಳಸಲು ಮತ್ತು ಕುಡಿಯಲು ನೀರು ಕೊಡದೆ ಹಿಂಸೆ ನೀಡಿದ್ದಾರೆ ಎಂದು ಆಶಾ ದೂರಿನಲ್ಲಿ ತಿಳಿಸಿದ್ದಾರೆ.

ಎಸ್ಸೈ ಅಮಾನತಿಗೆ ಆಗ್ರಹ: ಕಿರಣ್ ಶೆಟ್ಟಿ ನೀಡಿದ ಕಳ್ಳತನದ ಸುಳ್ಳು ದೂರಿನ ಮೇರೆಗೆ ದಲಿತ ಬೋವಿ ಜಾತಿಯ ಮಹಿಳೆ ಆಶಾ ಮತ್ತು ಕುಲಾಲ ಜಾತಿಯ ಸುಜಾತಾರನ್ನು ಠಾಣೆಗೆ ಕರೆಸಿ ಲಾಠಿಯಿಂದ ಹೊಡೆದು, ಬೂಟು ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ಸುಂದರ ಮಾಸ್ತರ್ ಆರೋಪಿಸಿದ್ದಾರೆ.

ವಿಷಯ ತಿಳಿದು ದಸಂಸ ನಿಯೋಗ ಅಜ್ಜರಕಾಡು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಪೂರ್ಣ ವಿವರ ಪಡೆದಿದ್ದು, ಈ ಕುರಿತು ಉಡುಪಿ ಡಿವೈಎಸ್ಪಿ ದಿನಕರ್ ಅವರನ್ನು ಭೇಟಿಯಾಗಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಮತ್ತು ಎಸ್ಸೈ ಸುಧಾ ಪ್ರಭು ಅವರನ್ನು ಕೂಡಲೇ ಅಮಾನತು ಮಾಡಬೇಕು. ಇಲ್ಲವಾದರೆ ಕೋಟ ಠಾಣೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಸುಂದರ್ ಮಾಸ್ತರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಶ್ಯಾಮ ಸುಂದರ ತೆಕ್ಕಟ್ಟೆ, ತಾಲೂಕು ಪದಾಧಿಕಾರಿಗಳಾದ ಶ್ರೀನಿವಾಸ ವಡ್ಡರ್ಸೆ, ವಿಜಯ ಗಿಳಿಯಾರು, ಶಿವಾನಂದ ಬಿರ್ತಿ ಮೊದಲಾದವರು ಉಪಸ್ಥಿತರಿದ್ದರು.

‘ಪೊಲೀಸ್ ದೌರ್ಜನ್ಯದ ಬಗ್ಗೆ ದೂರು ನೀಡಿದ ಮಹಿಳೆಯರಿಂದ ಹೇಳಿಕೆ ಗಳನ್ನು ಪಡೆದುಕೊಳ್ಳಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿ ತಪ್ಪು ಕಂಡುಬಂದರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು’

-ಡಾ.ಕೆ.ಅರುಣ್, ಎಸ್ಪಿ, ಉಡುಪಿ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News