ಹಾಲು ಉತ್ಪಾದನೆ ಹೆಚ್ಚಳಕ್ಕೆ ಗಮನ ಕೊಡಿ: ದೇವಿಪ್ರಸಾದ್ ಶೆಟ್ಟಿ

Update: 2024-08-22 14:32 GMT

ಉಡುಪಿ, ಆ.22: ಸ್ಥಳೀಯವಾಗಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಹೈನುಗಾರರ ಅಭಿವೃದ್ಧಿಗೆ ಉತ್ತೇಜನಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ವತಿಯಿಂದ ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಲಿಕೋ ಬ್ಯಾಂಕಿನ ಡೈಮಂಡ್ ಜ್ಯುಬಿಲಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬೇರೆ ಒಕ್ಕೂಟಗಳಿಂದ ಕಡಿಮೆ ದರದಲ್ಲಿ ಹಾಲು ತಂದು ಮಾರಿ ಗಳಿಸುವ ಲಾಭಕ್ಕಿಂತ ಸ್ಥಳೀಯವಾಗಿ ಹಾಲು ಉತ್ಪಾದನೆ ಹೆಚ್ಚಿಸಲು ಆದ್ಯತೆ ನೀಡಬೇಕು ಎಂದ ಅವರು, ಗ್ರಾಮೀಣ ಜನರ, ಹೈನುಗಾರಿಕೆ ಸಂಕಷ್ಟ, ಶ್ರಮದ ಹಿನ್ನೆಲೆಯಲ್ಲಿ ಹಾಲು ಉತ್ಪಾದನೆ ಜೊತೆಗೆ ಹಾಲಿನ ದರವೂ ಹೆಚ್ಚಬೇಕು. ಖರ್ಚು ಕಡಿತಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಹಾಲು ಉತ್ಪಾ ದಕರ ಸಹಕಾರ ಸಂಘಗಳು ಮತ್ತಷ್ಟು ಬೆಳವಣಿಗೆ ಹೊಂದಿ ಲಾಭದಾಯಕವಾಗಲು ಪಡಿತರ ವಿತರಣೆ, ಬ್ಯಾಂಕಿಂಗ್, ಕೃಷಿ ಪರಿಕರ ಮಾರಾಟ ಸಹಿತ ಅವಕಾಶಗಳ ಸದ್ಭಳಕೆ ಮಾಡಬೇಕು ಎಂದು ಹೇಳಿದರು.

ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಹಾಲು ಉತ್ಪಾದನೆ ಕಡಿಮೆಯಾದರೆ ಸಹಕಾರ ಸಂಘಗಳ ಸಿಬ್ಬಂದಿ ಸಮಸ್ಯೆ ಎದುರಿಸ ಲಿದ್ದಾರೆ. ಸಂಘಗಳಿಗೆ ಒಕ್ಕೂಟದಿಂದ ನೀಡುವ ಮಾರ್ಜಿನ್ ಮನಿ ಒಂದರಿಂದ ಎರಡು ರೂ.ಗಳಿಗೇರಬೇಕು ಎಂದರು. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆ , ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಮಾತನಾಡಿದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ಉಪ ನಿಬಂಧಕ ಕೆ.ಆರ್.ಲಾವಣ್ಯ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ರೇಣುಕಾ ಜಿ., ಸಹಕಾರ ಸಂಘಗಳ ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕ ಸುಕನ್ಯಾ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್‌ಕುಮಾರ್ ಎಸ್.ವಿ., ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಎಚ್. ಗಂಗಾಧರ ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಕೆ.ಸುರೇಶ್ ರಾವ್, ಮನೋಜ್ ಎಸ್. ಕರ್ಕೇರ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News