ಶ್ರೀಕೃಷ್ಣ ಜಯಂತಿ ಅಷ್ಟದಿನೋತ್ಸವ ಉದ್ಘಾಟನೆ

Update: 2023-09-01 15:20 GMT

ಉಡುಪಿ, ಸೆ.1:ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಸೆ.1ರಿಂದ 8ರವರೆಗೆ ನಡೆಯುವ ಶ್ರೀಕೃಷ್ಣ ಜಯಂತಿ ಅಷ್ಟದಿನೋತ್ಸವ ಕಾರ್ಯಕ್ರಮಕ್ಕೆ ಇಂದು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಚಾಲನೆ ನೀಡಲಾಯಿತು.

ಶ್ರೀಕೃಷ್ಣ ಜಯಂತೀ ಅಷ್ಟದಿನೋತ್ಸವದ ಉದ್ಘಾಟನೆಯನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು ನೆರವೇರಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥರು ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರು ಉಪಸ್ಥಿತರಿದ್ದರು.

ವಿಶೇಷ ಪ್ರವಚನ ಮಾಲಿಕೆಯಲ್ಲಿ ಶೀರೂರು ಮಠಾಧೀಶ ಶ್ರೀವೇದವರ್ಧನ ತೀರ್ಥರು ಶ್ರೀಕೃಷ್ಣನ ಸಂದೇಶವನ್ನು ನೀಡಿದರು.

ಶ್ರೀಕೃಷ್ಣ ಜಯಂತಿ ಪ್ರಯುಕ್ತ ಒಂದು ವಾರ ಕಾಲ ಕೃಷ್ಣ ಮಠದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ನಾಳೆ ದಾಸರ ಪದಗಳ ಸಂಗೀತ ಸ್ಪರ್ಧೆ ಹಾಗೂ ಶಂಖ ಊದುವ ಸ್ಪರ್ಧೆ ನಡೆದರೆ, ಸೆ.3ರ ರವಿವಾರ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

ಸೆ.6ರಂದು ಬೆಳಗ್ಗೆ 9:00ಗಂಟೆಯಿಂದ ರಾಜಾಂಗಣವೂ ಸೇರಿದಂತೆ ವಿವಿದೆಡೆ ಮೂರು ವಿಭಾಗಗಳಲ್ಲಿ ಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಸೆ.7ರಂದು ಸಂಜೆ 5:00ರಿಂದ ರಾಜಾಂಗಣದಲ್ಲಿ ಹುಲಿವೇಷ ಹಾಗೂ ಜಾನಪದ ಕುಣಿತ ಸ್ಪರ್ಧೆ ನಡೆಯಲಿದೆ.

ಹುಲಿವೇಷ ಕುಣಿತ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ 15,000ರೂ., ರನ್ನರ್ ಅಪ್ ತಂಡಕ್ಕೆ 10,000ರೂ. ಹಾಗೂ ತೃತೀಯ ಸ್ಥಾನಿಗೆ 5,000ರೂ. ನಗದು ಬಹುಮಾನ ನೀಡಲಾಗುವುದು. ಇನ್ನು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮೊದಲೆ ರಡು ಸ್ಥಾನಿಗಳಿಗೆ ಕ್ರಮವಾಗಿ 5,000ರೂ. ಹಾಗೂ 3,000ರೂ. ನಗದು ಬಹುಮಾನವಿದೆ. ವ್ಯಕ್ತಿಗತ ಸ್ಪರ್ಧೆಯಲ್ಲಿ ಮೊದಲ ಮೂರು ಬಹುಮಾನವಾಗಿ 1,000ರೂ., 750ರೂ. ಹಾಗೂ 500ರೂ.ನಗದು ನೀಡಲಾಗುವುದು ಎಂದು ಕೃಷ್ಣಾಪುರ ಮಠದ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News