ಕರ್ನಾಟಕ ಕ್ರೀಡಾಕೂಟ: ಮಡಿಸಾಲು ಹೊಳೆಯಲ್ಲಿ ಕಯಾಕಿಂಗ್ ಸ್ಪರ್ಧೆ

ಉಡುಪಿ, ಜ.17: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಪ್ರಾರಂಭಗೊಂಡ ಕರ್ನಾಟಕ ಕ್ರೀಡಾಕೂಟ-2025ರ ಮೊದಲ ಸ್ಪರ್ಧೆಯಾದ ಮಹಿಳೆಯರ ಕಯಾಕಿಂಗ್ನಲ್ಲಿ ನಿರೀಕ್ಷೆಯಂತೆ ಬೆಂಗಳೂರು ನಗರ ತಂಡದ ರಾಷ್ಟ್ರೀಯ ಅಥ್ಲೀಟ್ ಸಮರಾ ಎ.ಚಾಕೋ ತಾನು ಸ್ಪರ್ಧಿಸಿದ ನಾಲ್ಕರಲ್ಲೂ ಜಯಗಳಿಸುವ ಮೂಲಕ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಹೊಸ ದಾಖಲೆ ಬರೆದರು.
ಬಹ್ಮಾವರ ತಾಲೂಕಿನ ಹೇರೂರು ಗ್ರಾಮದ ಮಡಿಸಾಲು ಹೊಳೆಯಲ್ಲಿ ನಡೆದ ಮಹಿಳೆಯರ ಕಯಾಕಿಂಗ್ನ 200ಮೀ. ಸಿಂಗಲ್ ಹಾಗೂ ಡಬಲ್ ಅಲ್ಲದೇ 500ಮೀ. ಸಿಂಗಲ್ ಹಾಗೂ ಡಬಲ್ನಲ್ಲಿ ಸಮರಾ ಅವರೇ ದೋಣಿಯನ್ನು ವೇಗವಾಗಿ ಹುಟ್ಟುಹಾಕಿ ಮೊದಲಿಗರಾಗಿ ಗುರಿಮುಟ್ಟುವ ಮೂಲಕ ಮೊದಲ ದಿನದ ನಾಲ್ಕೂ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
ಜ.28ರಿಂದ ಉತ್ತರ ಖಂಡದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಕಯಾಕಿಂಗ್ನಲ್ಲಿ ಸ್ಪರ್ಧಿಸಲು ಅಭ್ಯಾಸ ನಡೆಸುತ್ತಿರುವ ಸಮರಾ ಚಾಕೋ ಅವರು ಸಿಂಗಲ್ (ಕೆ-1)ನಲ್ಲಿ ವೇಗವಾಗಿ ಉಳಿದೆಲ್ಲಾ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಭಾರೀ ಅಂತರದಲ್ಲಿ ಮೊದಲಿಗರಾಗಿ ಗುರಿಮುಟ್ಟಿದರೆ, ಡಬಲ್ಸ್ (ಕೆ-2)ನಲ್ಲಿ ಹರಿಣಿ ಜೊತೆ ಇದೇ ಸಾಧನೆಯನ್ನು ಪುನರಾವರ್ತಿಸಿದರು.
ಈ ಮೂಲಕ ಅವರು ರಾಷ್ಟ್ರೀಯ ಕ್ರೀಡಾಕೂಟದಲ್ಲೂ ರಾಜ್ಯಕ್ಕೆ ಪದಕ ಗೆಲ್ಲಿಸಿಕೊಡುವ ಆತ್ಮವಿಶ್ವಾಸವನ್ನು ವೃದ್ಧಿಸಿ ಕೊಂಡರು. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ ಹಾಗೂ ಮಂಗಳೂರಿನ ಯಾವುದೇ ಎದುರಾಳಿ ಅವರಿಗೆ ಇಂದು ಸರಿಸಾಟಿಯಾಗಿರಲಿಲ್ಲ.
500ಮೀ.ಕೆ-1: ಇಂದು ಮೊದಲು ನಡೆದ 500ಮೀ. ಕೆ-1 ಸ್ಪರ್ಧೆಯಲ್ಲಿ ಸಮರಾ ಎ.ಚಾಕೋ ಅವರು ತಾನು ಹುಟ್ಟು ಹಾಕಿದ ದೋಣಿಯನ್ನು 2.50ನಿ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿಸಿದರೆ, ಬೆಂಗಳೂರು ಗ್ರಾಮಾಂತರವನ್ನು ಪ್ರತಿನಿಧಿ ಸಿದ ಹರಿಣಿ ಎಸ್. ಅವರು 3.05ನಿ.ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಹಾಗೂ ಕೋಲಾರದ ಅದ್ವಿತಾ ತನ್ವಾನಿ ಅವರು 3.10ನಿ.ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು.
500ಮೀ.ಕೆ-2: 500ಮೀ. ಡಬಲ್ನಲ್ಲಿ ಸಮರಾ ಚಾಕೋ ಹಾಗೂ ಹರಿಣಿ ಎಸ್. ಅವರು 2.45ನಿ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿಸಿದರೆ, ಬೆಂಗಳೂರು ಗ್ರಾಮಾಂತರದ ಎಂ.ತೇಜಶ್ರಿ ಹಾಗೂ ಅದ್ವಿತಾ ತನ್ವಾನಿ ಅವರು 2.56ನಿ.ಗಳೊಂದಿಗೆ ಬೆಳ್ಳಿ ಪದಕವನ್ನೂ ಮಂಗಳೂರಿನ ಅಭ್ಯತಾ ಆಗೂ ಅವ್ಯಾ ಬಿ.ಮನು ಅವರು 3.05ನಿ.ಗಳ ಸಾದನೆಯೊಂದಿಗೆ ಕಂಚಿನ ಪದಕವನ್ನು ಗೆದ್ದು ಕೊಂಡರು.
200ಮೀ.ಕೆ-1: ಮಹಿಳೆಯರ 200ಮೀ. ಕೆ-1 ಸ್ಪರ್ಧೆಯಲ್ಲಿ ಸಮರಾ ಚಾಕೋ ಅವರು 1:18ನಿ.ದಲ್ಲಿ ವೇಗವಾಗಿ ಗುರಿ ಮುಟ್ಟುವ ಮೂಲಕ ಮೂರನೇ ಚಿನ್ನದ ಪದಕವನ್ನು ಗೆದ್ದುಕೊಂಡರು. ಅವರ ನಂತರದ ಬೆಳ್ಳಿ ಪದಕವನ್ನು ಬೆಂಗಳೂರು ಗ್ರಾಮಾಂತರದವನ್ನು ಪ್ರತಿನಿಧಿಸಿದ ಹರಿಣಿ ಎಸ್. 1.32ಸೆ.ಗಳಲ್ಲಿ ಗುರಿಮುಟ್ಟಿ ಗೆದ್ದುಕೊಂಡರು. ಕಂಚಿನ ಪದಕವು 1.35ನಿ. ಗಳಲ್ಲಿ ಗುರಿಮುಟ್ಟಿದ ಚಿತ್ರದುರ್ಗದ ಆದ್ಯಾಕುಮಾರ್ ಪಾಲಾಯಿತು.
200ಮೀ.ಕೆ-2: 200 ಮೀ. ಕೆ-2 ಸ್ಪರ್ಧೆಯನ್ನು ಸಹ ಸಮರಾ ಚಾಕೋ ಹಾಗೂ ಹರಿಣಿ ಎಸ್. ಅವರೇ ಗೆದ್ದುಕೊಂಡರು. ಅವರು 1.24ನಿ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು.ಬೆಂಗಳೂರಿನ ಎಂ.ತೇಜಶ್ರಿ ಹಾಗೂ ಅದ್ವಿತಾ ತನ್ವಾನಿ ಅವರು 1:32ನಿ.ಗಳಲ್ಲಿ ಎರಡನೇಯವರಾಗಿ ಗುರಿ ತಲುಪಿ ಬೆಳ್ಳಿ ಪದಕ ಹಾಗೂ ಮಂಗಳೂರಿನ ಅಭ್ಯತಾ ಆಗೂ ಅವ್ಯಾ ಬಿ.ಮನು ಅವರು 1.35ನಿ.ಗಳ ಸಾಧನೆಯೊಂದಿಗೆ ಕಂಚಿನ ಪದಕವನ್ನು ಗೆದ್ದು ಕೊಂಡರು.
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿ ಶಿವಾನಂದ, ಕರ್ನಾಟಕ ಕಯಾಕಿಂಗ್ ಆ್ಯಂಡ್ ಕೆನೋಯಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕ್ಯಾ.ದಿಲೀಪ್ ಕುಮಾರ್ ಅವರು ವಿಜೇತರಿಗೆ ಪದಕಗಳನ್ನು ವಿತರಿಸಿದರು.
ನಾಳೆ ಬೆಳಗ್ಗೆ 8 ಗಂಟೆಗೆ ಇಂದು ನಡೆಯಬೇಕಿದ್ದು, ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ಮುಂದೂಡಲಾದ ಪುರುಷರ 200 ಹಾಗೂ 500ಮೀ. ಕೆ-1, ಕೆ-2 ಸ್ಪರ್ಧೆಗಳು ನಡೆಯಲಿದೆ. ಅಲ್ಲದೇ ದಿನದಲ್ಲಿ ನಿಗದಿಯಾದ 200ಮೀ. ಹಾಗೂ 500ಮೀ. 10+2 ಮಿಕ್ಸೆಡ್ ಡ್ರ್ಯಾಗನ್ ಬೋಟ್ ಸ್ಪರ್ಧೆಗಳು ಸಹ ನಾಳೆ ನಡೆಯಲಿವೆ ಎಂದು ಸಂಸ್ಥೆಯ ಅಧಿಕಾರಿ ಗಳು ತಿಳಿಸಿದ್ದಾರೆ.

